ಚಿತ್ರಗಳು : ಕೊಡಗಿನ ಈ ರಸ್ತೆಗಳ ಗುರುತು ಹಿಡಿಯುವಿರಾ?
Recommended Video
ಮಡಿಕೇರಿ, ಸೆಪ್ಟೆಂಬರ್ 05 : ಭಾರಿ ಮಳೆ ಮತ್ತು ಭೂ ಕುಸಿತದಿಂದ ಕೊಡಗು ಜಿಲ್ಲೆಯಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದೆ. ಕೊಡಗು-ದಕ್ಷಿಣ ಕನ್ನಡ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭಾರಿ ವಾಹನಗಳ ಸಂಚಾರ ಸದ್ಯಕ್ಕೆ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ.
'ರಸ್ತೆ ಕೊಚ್ಚಿ ಹೋಗಿರುವ ಕಡೆ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಅದು ಪೂರ್ಣಗೊಂಡ ಬಳಿಕ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ' ಎಂದು ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಹೇಳಿದ್ದಾರೆ.
ಮಳೆ, ಗುಡ್ಡ ಕುಸಿತದ ಬಳಿಕ ಕೊಡಗಿನ ರಸ್ತೆಗಳು
ರಾಷ್ಟ್ರೀಯ ಹೆದ್ದಾರಿ 275 ಸಂಪೂರ್ಣವಾಗಿ ಹಾಳಾಗಿದೆ. ಮಡಿಕೇರಿ-ಸಂಪಾಜೆ ನಡುವೆ ಬೆಟ್ಟಗಳು ಕುಸಿದಿದ್ದು, ಹೆದ್ದಾರಿ ಸರಿಪಡಿಸಲು 25 ಜೆಸಿಬಿಗಳು, ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸುಮಾರು 20 ದಿನಗಳಿಂದ ದಕ್ಷಿಣ ಕನ್ನಡ-ಕೊಡಗು ನಡುವಿನ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ.
ಕೊಡಗಿನ ಮಳೆ ನಿಂತರೂ 726 ಕುಟುಂಬಗಳು ಇನ್ನೂ ನೆಲೆ ಕಂಡಿಲ್ಲ
ಮಡಿಕೇರಿ-ಸುಳ್ಯ ನಡುವಿನ ಹೆದ್ದಾರಿಯ ಪ್ರಯಾಣ ಸುಂದರವಾಗಿತ್ತು. ಮನಮೋಹಕ ದೃಶ್ಯಗಳನ್ನು ಸವಿಯಬಹುದಿತ್ತು. ಆದರೆ, ಈಗ ಹೆದ್ದಾರಿಯನ್ನು ನೋಡಿದರೆ ಜನರು ಬೆಚ್ಚಿಬೀಳಬೇಕಾಗುತ್ತದೆ. ಇಲ್ಲಿ ರಸ್ತೆ ಇತ್ತು ಎಂದು ನಂಬಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ...
1795 ಜನರು ಇನ್ನೂ ಸಂತ್ರಸ್ತರ ಕೇಂದ್ರದಲ್ಲಿ ವಾಸ
4 ಸಾವಿರ ಕಿ.ಮೀ.ರಸ್ತೆಗೆ ಹಾನಿ
ಗಾಳಿಬೀಡು ಗ್ರಾಮ ಪಂಚಾಯಿತಿಯ ಹಮ್ಮಿಯಾಳ್ ಹಚ್ಚಿನಾಡ್ ಮುಟ್ಲು ಸಂಪರ್ಕ ರಸ್ತೆ ಹಾಳಾಗಿದ್ದು ತ್ವರಿತಗತಿಯಲ್ಲಿ ದುರಸ್ಥಿಗೊಳಿಸಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆ, ಗುಡ್ಡ ಕುಸಿತದಿಂದ 4,500 ಕಿ.ಮೀ.ನಷ್ಟು ರಸ್ತೆಗೆ ಹಾನಿಯಾಗಿದೆ. ಸುಮಾರು 250 ಕಿ.ಮೀ.ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಹೊಸದಾಗಿ ನಿರ್ಮಿಸಬೇಕಿದೆ.
12 ಕೋಟಿ ಅನುದಾನ
ಕೊಡಗು ಜಿಲ್ಲೆಯ ಮಕ್ಕಂದೂರು ವ್ಯಾಪ್ತಿಯ ತಂತಿಪಾಲ ಬಳಿ ಮುಖ್ಯ ರಸ್ತೆಯನ್ನು ದುರಸ್ಥಿಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.
ಪ್ರಕೃತಿ ವಿಕೋಪ ನಿಧಿಯಡಿ ಕೊಡಗು ಜಿಲ್ಲೆಗೆ 12 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಸಂಪರ್ಕ ಕಡಿತಗೊಂಡಿರುವ ರಸ್ತೆಗಳನ್ನು ಆದ್ಯತೆಯ ಮೇಲೆ ಅಭಿವೃದ್ಧಿ ಮಾಡಲಾಗುತ್ತಿದೆ.
ಹಟ್ಟಿಹೊಳೆ-ಮುಕ್ಕೋಡ್ಲು ರಸ್ತೆ
ಹಟ್ಟಿಹೊಳೆ-ಮುಕ್ಕೋಡ್ಲು ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಕಾಮಗಾರಿಯನ್ನು ವೀಕ್ಷಿಸಿದರು. ಗುಣಮಟ್ಟದ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಕೊಡಗು ಜಿಲ್ಲೆಯಲ್ಲಿ ರಸ್ತೆಯನ್ನು ದುರಸ್ಥಿ ಮಾಡಲು ಸುಮಾರು 22 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದುವರೆಗೂ 12 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಮಡಿಕೇರಿ ನಗರದಲ್ಲಿಯೂ ಹಾನಿ
ಮಡಿಕೇರಿ ನಗರದಲ್ಲಿಯೂ ರಸ್ತೆಗಳಿಗೆ ಹಾನಿಯಾಗಿದೆ. ತಂತ್ರಜ್ಞರನ್ನು ಕರೆಸಿ ರಸ್ತೆ ರಿಪೇರಿ ಹೇಗೆ ಮಾಡಬೇಕು? ಎಂದು ಸಲಹೆ ಪಡೆದು ಜಿಲ್ಲಾಡಳಿತ ದುರಸ್ಥಿ ಕಾರ್ಯ ಕೈಗೊಂಡಿದೆ.
ಕೊಡಗು ಜಿಲ್ಲೆಯ ಜನರು ಕೆಲವು ಅಗತ್ಯಗಳಿಗಾಗಿ ದಕ್ಷಿಣ ಕನ್ನಡವನ್ನು ಅವಲಂಬಿಸಿದ್ದರು. ಜಿಲ್ಲಾಕೇಂದ್ರದಿಂದ ದಕ್ಷಿಣ ಕನ್ನಡದ ಸಂಪಾಜೆಗೆ ಸುಮಾರು 40 ನಿಮಿಷದಲ್ಲಿ ತಲುಪಬಹುದಾಗಿತ್ತು. ಈಗ ಪರ್ಯಾಯ ಮಾರ್ಗದ ಮೂಲಕ ಮಡಿಕೇರಿ, ಭಾಗಮಂಡಲ, ಕರಿಕೆ, ಪಾಣತ್ತೂರು ಮೂಲಕ ಸುಳ್ಯ ತಲುಪಲು 4 ಗಂಟೆ ಪ್ರಯಾಣ ಮಾಡಬೇಕಿದೆ.