ಕೊಡಗಿನ ಕಾಫಿ ಬೆಳೆಗಾರರಿಗೆ ಹುಲಿ, ಆನೆಗಳ ಆತಂಕ
ಮಡಿಕೇರಿ, ಸೆಪ್ಟೆಂಬರ್ 12: ಕೊಡಗಿನವರಿಗೆ ಕಾಫಿ ಬೆಳೆಯೇ ಜೀವನಾಧಾರ. ವರ್ಷಪೂರ್ತಿ ಒಂದಲ್ಲ ಒಂದು ಕೆಲಸ ಮಾಡುತ್ತಾ ಕಾಫಿ ತೋಟದಲ್ಲೇ ಕಳೆಯುವ ಬೆಳೆಗಾರರು ಮತ್ತು ಕಾರ್ಮಿಕರಿಗೆ ಈಗ ಭಯ ಶುರುವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಆನೆ, ಹುಲಿಯಂತಹ ಪ್ರಾಣಿಗಳಿಗೆ ಕಾಫಿ ತೋಟಗಳು ಆಶ್ರಯ ತಾಣಗಳಾಗಿದ್ದು, ಭಯದಲ್ಲೇ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಗರಹೊಳೆ, ಬಂಡೀಪುರ ಅಭಯಾರಣ್ಯದ ಹುಲಿ ಸಂತತಿಯಲ್ಲಿ ಭಾರೀ ಏರಿಕೆ!
ಕಾಡಾನೆಗಳು ಕಾಫಿ ತೋಟಗಳಲ್ಲೇ ಬೀಡು ಬಿಟ್ಟು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಡ್ಡಾಡುವ ಮೂಲಕ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಿ ಪ್ರಾಣ ತೆಗೆಯುತ್ತಿದ್ದರೆ, ಹುಲಿಗಳು ಜಾನುವಾರುಗಳನ್ನು ರಾತ್ರೋರಾತ್ರಿ ಬೇಟೆಯಾಡುತ್ತಿವೆ.
ಇದರಿಂದ ಬೆಚ್ಚಿ ಬಿದ್ದಿರುವ ಬೆಳೆಗಾರರು ಕಾಫಿ ತೋಟಕ್ಕೆ ತೆರಳಲು ಭಯ ಪಡುವಂತಾಗಿದೆ. ಇನ್ನು ಕಾರ್ಮಿಕರು ಜೀವ ಕೈನಲ್ಲಿ ಹಿಡಿದುಕೊಂಡು ತೋಟದ ಕೆಲಸಕ್ಕೆ ಹೋಗುವಂತಾಗಿದೆ. ಈಗಾಗಲೇ ಕಾಡಾನೆಗಳ ದಾಳಿಗೆ ಹಲವು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಹುಲಿದಾಳಿ: ಪ್ರಾಣಾಪಾಯದಿಂದ ಪಾರಾಗಿ ಬಂದ ರೈತ
ಅವುಗಳಿಂದ ರಕ್ಷಿಸಿಕೊಂಡು ಹೇಗೋ ಕೆಲಸ ಮಾಡಿಕೊಂಡು ಹೋಗುತ್ತಿದ್ದರೆ, ಇದೀಗ ಕೆಲವೆಡೆ ಹುಲಿಯ ಭಯ ಆರಂಭವಾಗಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ತುಸು ಹೆಚ್ಚೇ. ಅದರ ನಡುವೆ ಈಗ ಹುಲಿಯೂ ಕಾಣಿಸಿಕೊಂಡಿರುವುದು ತೋಟದ ಬೆಳೆಗಾರರು, ಕಾರ್ಮಿಕರು ಹಾಗೂ ಜನ ಬೆಚ್ಚಿ ಬೀಳುವಂತಾಗಿದೆ.
ಸಿದ್ದಾಪುರದ ಮಾಲ್ದಾರೆ ಗ್ರಾಮದ ಮೈಲಾದಪುರದಲ್ಲಿ ಜಾನುವಾರಗಳ ಮೇಲೆ ಹುಲಿ ದಾಳಿ ನಡೆಸಿ, ಕೊಂದ ಕಾರಣ ಈಗ ಹುಲಿಯ ಸೆರೆಗೆ ಬೋನು ಇಡಲಾಗಿದೆ. ಆದರೆ ಇಲ್ಲಿ ತನಕ ಹುಲಿ ಮಾತ್ರ ಬೋನಿಗೆ ಬಿದ್ದಿಲ್ಲ. ಈ ಹಿಂದೆ ಮೈಲಾದಪುರದ ಬಿಬಿಟಿಸಿ ಕಂಪೆನಿಗೆ ಸೇರಿದ ಕಾಫಿ ತೋಟಗಳಲ್ಲಿ ಮೇಯುತ್ತಿದ್ದ ಜಾನುವಾರಗಳ ಮೇಲೆ ಹುಲಿ ದಾಳಿ ನಡೆಸಿ, ಜಾನುವಾರಗಳನ್ನು ಕೊಂದು ಹಾಕಿತ್ತು.
ನಾಗರಹೊಳೆ ಅರಣ್ಯದಂಚಿನಲ್ಲಿ ಹಸುವನ್ನು ಕೊಂದ ಹುಲಿ, ಗ್ರಾಮಸ್ಥರ ಆತಂಕ
ಈ ಹುಲಿಯ ಚಲನವಲನ ಸಿಸಿ ಟಿವಿಯಲ್ಲೂ ಸೆರೆಯಾಗಿತ್ತು. ಮಾಲ್ದಾರೆ ಘಟ್ಟದ ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಹುಲಿಯನ್ನು ಕಾರ್ಮಿಕರು ನೇರವಾಗಿಯೇ ನೋಡಿದ್ದರು. ಊರಲ್ಲಿ ಮಕ್ಕಳು ಶಾಲೆಗೆ, ಕಾರ್ಮಿಕರು ತೋಟಕ್ಕೆ ಕೆಲಸಕ್ಕೆ ತೆರಳಲು ಭಯ ಪಡುವಂತಾಗಿತ್ತು. ಹುಲಿ ಎಲ್ಲೆಂದರಲ್ಲಿ ಅಲೆಯುವುದರಿಂದ ಆ ವ್ಯಾಪ್ತಿಯಲ್ಲಿ ಯಾವಾಗ ಹುಲಿ ಬರುತ್ತದೆಯೋ ಎಂಬ ಭಯವೂ ನಿರ್ಮಾಣವಾಗಿದೆ.
ತಿತಿಮತಿ ವಲಯ ಎ.ಸಿ.ಎಫ್ ಶ್ರೀಪತಿ ಮಾರ್ಗದರ್ಶನದಲ್ಲಿ ವಲಯ ಅರಣ್ಯಧಿಕಾರಿ ಅಶೋಕ್, ಉಪ ವಲಯ ಅರಣ್ಯಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ಆರ್.ಆರ್.ಟಿ. ತಂಡದವರು ಸೇರಿ ಮೈಲಾದಪುರ ಕಾಫಿ ತೋಟದೊಳಗೆ ಬೋನುಗಳನ್ನು ಅಳವಡಿಸುವ ಮೂಲಕ ಹುಲಿ ಸೆರೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದರೆ ಹುಲಿ ಮಾತ್ರ ಸೆರೆ ಸಿಗುತ್ತಿಲ್ಲ.