ಕೊಡಗಿನ ಕರಿಮೆಣಸು ಬೆಳೆಗಾರರನ್ನು ಕಂಗೆಡಿಸಿದ ಮುಳ್ಳುಹಂದಿಗಳು
ಮಡಿಕೇರಿ, ಅಕ್ಟೋಬರ್ 14: ಕಳೆದ ಎರಡು ವರ್ಷಗಳಿಂದ ಮಳೆ, ಪ್ರವಾಹ, ಭೂಕುಸಿತ ಹೀಗೆ ಪ್ರಕೃತಿ ವಿಕೋಪಗಳ ನಡುವೆಯೂ ತಮ್ಮ ಜೀವನಕ್ಕೆ ಆಧಾರವಾಗಿರುವ ಕಾಫಿ ಮತ್ತು ಕರಿಮೆಣಸನ್ನು ಕಾಪಾಡಿಕೊಂಡು ಬಂದಿದ್ದ ಬೆಳೆಗಾರರು ಇದೀಗ ಮತ್ತೆ ಸಂಕಷ್ಟಕ್ಕೊಳಗಾಗಿದ್ದಾರೆ. ಈಗ ಇವರನ್ನು ಕಾಡುತ್ತಿರುವುದು ಮಳೆಯಾಗಲೀ, ಪ್ರಕೃತಿ ವಿಕೋಪವಾಗಲೀ ಅಲ್ಲ, ಬದಲಿಗೆ ಅರಣ್ಯದಲ್ಲಿರಬೇಕಾದ ಕಾಡು ಪ್ರಾಣಿಗಳು.
ಈ ಕಾಡು ಪ್ರಾಣಿಗಳು ತೋಟಗಳಿಗೆ ಲಗ್ಗೆಯಿಡುತ್ತಿದ್ದು ಇದರಿಂದ ವರ್ಷದ ಬೆಳೆಯನ್ನು ಕಳೆದುಕೊಳ್ಳಬೇಕಾದ ದುಸ್ಥಿತಿ ಇಲ್ಲಿನ ರೈತರಿಗೆ ಬಂದೊದಗಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಹಲವು ರೀತಿಯ ಕಾಡುಪ್ರಾಣಿಗಳು ಉಪಟಳ ನೀಡುತ್ತಿವೆ. ಅವುಗಳ ಪೈಕಿ ಕಾಡಾನೆಗಳು, ಕಾಡುಹಂದಿ, ನವಿಲು, ಕೋತಿಗಳು, ಇದಲ್ಲದೆ ಮುಳ್ಳುಹಂದಿಗಳು ಕಾಫಿ ತೋಟದೊಳಗೆ ಲಗ್ಗೆಯಿಟ್ಟಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ.
ಮುಳ್ಳು ಹಂದಿಗಳು ಕರಿಮೆಣಸು ಬಳ್ಳಿಯನ್ನೇ ಟಾರ್ಗೆಟ್ ಮಾಡುತ್ತಿವೆ. ಕಷ್ಟಪಟ್ಟು ಸಾಕಿ ಸಲಹಿ ಹಲವು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಸಾವಿರಾರು ರೂಪಾಯಿ ಆದಾಯ ತಂದು ಕೊಡುತ್ತಿದ್ದ ಕರಿಮೆಣಸು ಬಳ್ಳಿಯ ಬೇರು ಮತ್ತು ಕಾಂಡವನ್ನೇ ತುಂಡರಿಸಿ ಬಳ್ಳಿಯನ್ನು ಸಾಯಿಸುತ್ತಿರುವುದರಿಂದ ಬೆಳೆಗಾರರು ಕಣ್ಣೀರಿಡುವಂತಾಗಿದೆ. ಬಳ್ಳಿಗಳ ತುಂಬಾ ಮುತ್ತು ಪೋಣಿಸಿದಂತೆ ಕರಿಮೆಣಸು ಫಸಲು ಬಿಟ್ಟಿದ್ದು, ಇನ್ನು ಮೂರು ನಾಲ್ಕು ತಿಂಗಳಲ್ಲಿ ಕೊಯ್ಲಿಗೆ ಬರುತ್ತಿತ್ತು. ಆದರೆ ಈ ಬಳ್ಳಿಗಳನ್ನೇ ಮುಳ್ಳು ಹಂದಿಗಳು ಬಲಿ ತೆಗೆದುಕೊಳ್ಳುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
Recommended Video

ಮುಳ್ಳುಹಂದಿಗಳ ಹಾವಳಿ ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚಾಗಿದ್ದು, ತಾಲೂಕಿನ ಕಾರೆಕೊಪ್ಪ, ಬೇಳೂರು ಬಸವನಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಉಪಟಳವನ್ನು ಮುಂದುವರೆಸಿವೆ.
ನಡು ರಾತ್ರಿಯಲ್ಲಿ ತೋಟಗಳಿಗೆ ಲಗ್ಗೆಯಿಡುವ ಮುಳ್ಳು ಹಂದಿಗಳ ಹಿಂಡು ಕರಿಮೆಣಸಿನ ಬಳ್ಳಿಗಳ ಕಾಂಡವನ್ನು ತುಂಡರಿಸುತ್ತಿವೆ. ಇದರಿಂದ ಬಳ್ಳಿಗಳು ಒಣಗಿ ಸಾಯುತ್ತಿವೆ. ಬೆಳೆಗಾರರಿಗೆ ಭಾರೀ ಪ್ರಮಾಣದ ನಷ್ಟವಾಗುತ್ತಿದೆ. ಇನ್ನು ಮುಳ್ಳುಹಂದಿ ಹಾವಳಿ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದರೆ ಮುಳ್ಳು ಹಂದಿ ಹಾವಳಿ ತಡೆಯಲು ಹಾಗೂ ಪರಿಹಾರ ನೀಡಲು ಇಲಾಖೆಯಲ್ಲಿ ಯಾವುದೇ ಯೋಜನೆ ಇಲ್ಲ ಎಂದು ನುಣುಚಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಬೆಳೆಗಾರರು ಮಾಡುತ್ತಿದ್ದಾರೆ.












Click it and Unblock the Notifications