Get Updates
Get notified of breaking news, exclusive insights, and must-see stories!

ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಮುದುಡಿದ 'ಕಮಲ' ಅರಳೋದ್ಯಾವಾಗ?

ಮಡಿಕೇರಿ, ಜೂನ್ 13: ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಬಿಜೆಪಿ ತಳಮಟ್ಟದಿಂದಲೇ ಭದ್ರವಾಗಿದೆ. ಹೀಗಾಗಿಯೇ ಕಳೆದೊಂದು ದಶಕದಿಂದ ಪ್ರಬಲ ಪೈಪೋಟಿ ನೀಡಿ ಗೆಲುವು ಸಾಧಿಸಲು ಕಾಂಗ್ರೆಸ್ಸಿಗಾಗಲೀ, ಜೆಡಿಎಸ್ ಗೇ ಆಗಲಿ ಸಾಧ್ಯವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಮಟ್ಟದಲ್ಲಿ ಬಿಜೆಪಿ ಹೋಳಾದರೂ ಜಿಲ್ಲೆಯ ಮಟ್ಟಿಗೆ ಗಟ್ಟಿಯಾಗಿಯೇ ಇತ್ತು.

ಆದರೆ ಇತ್ತೀಚೆಗೆ ಅದ್ಯಾಕೋ ಪಕ್ಷದಲ್ಲಿ ಅಸಮಾಧಾನ, ಗುಂಪುಗಾರಿಗೆ, ಅತೃಪ್ತಿ ಎಲ್ಲವೂ ಕಾಣಿಸತೊಡಗಿದೆ. ಕೆಲವು ನಾಯಕರು ಜಮಾನದಿಂದಲೂ ಬಿಜೆಪಿಗಾಗಿಯೇ ತಮ್ಮ ಬದುಕನ್ನು ಸವೆಸಿದ್ದಾರೆ. ಅಂತಹ ನಾಯಕರಿಗೆ ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದುದಕ್ಕಾಗಿ ಏನಾದರೂ ಸ್ಥಾನಮಾನ ಸಿಗುತ್ತಾ ಎಂಬ ನಿರೀಕ್ಷೆ ಇದ್ದೇ ಇದೆ. ಆದರೆ ಅದು ಅವರಿಗೆ ಸಿಗದೆ ನಿನ್ನೆಮೊನ್ನೆ ರಾಜಕೀಯಕ್ಕೆ ಬಂದವರಿಗೆ ಸಿಕ್ಕಾಗ ಅಸಮಾಧಾನವಾಗುವುದು ಸರ್ವೇ ಸಾಮಾನ್ಯ. ಅದು ಇಲ್ಲೂ ಆಗಿದೆ.

ಇವತ್ತು ಪಕ್ಷದಲ್ಲಿ ಒಬ್ಬ ನಾಯಕ ಬಂದರೆ ಮತ್ತೊಬ್ಬ ನಾಯಕ ಮುಖ ತಿರುಗಿಸಿಕೊಂಡು ಹೋಗುವಂತೆ ಮಾಡಿದೆ. ಮೊದಲೆಲ್ಲ ಎಲ್ಲರೂ ಒಗ್ಗಟ್ಟಿನಿಂದ ವೇದಿಕೆಯನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ಕಾರ್ಯಕರ್ತರ ಸಭೆಗೆ ನಾಯಕರೇ ಬರದಂತಹ ಸ್ಥಿತಿಗೆ ಬಂದು ನಿಂತಿದೆ.

ಕೊಡಗಿನಲ್ಲಿ ಅಲುಗಾಡುತ್ತಿದೆ ಬಿಜೆಪಿ ಕೋಟೆ

ಕೊಡಗಿನಲ್ಲಿ ಅಲುಗಾಡುತ್ತಿದೆ ಬಿಜೆಪಿ ಕೋಟೆ

ಬಿ.ಎಸ್.ಯಡಿಯೂರಪ್ಪ ಪಕ್ಷವನ್ನು ಬಿಟ್ಟು ಹೋದಾಗಲೂ ಬಿಜೆಪಿ ಹೋಳಾಗಿರಲಿಲ್ಲ. ಎಲ್ಲರೂ ಪಕ್ಷಕ್ಕಾಗಿ ದುಡಿದ್ದರು. ಹೀಗಾಗಿಯೇ ವಿಧಾನಸಭಾ ಚುನಾವಣೆಯಲ್ಲಿ ಇರುವ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಯಿತು. ರಾಜಕೀಯ ಹಿನ್ನಲೆಯಿಲ್ಲದ ಜನರಿಗೆ ಮುಖತಃ ಪರಿಚಯವಿಲ್ಲದ ಪ್ರತಾಪ್ ಸಿಂಹರನ್ನು ಪಕ್ಷದ ಮುಖ ನೋಡಿ ಸಂಸದ ಸ್ಥಾನಕ್ಕೆ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಯಡಿಯೂರಪ್ಪ ಬಂದಮೇಲೆ ಅಸಮಾಧಾನ?

ಯಡಿಯೂರಪ್ಪ ಬಂದಮೇಲೆ ಅಸಮಾಧಾನ?

ಆದರೆ ಯಾವಾಗ ಬಿ.ಎಸ್.ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬಂದು ರಾಜ್ಯಾಧ್ಯಕ್ಷರಾದರೋ ಸದ್ದಿಲ್ಲದೆ ಅಸಮಾಧಾನದ ಹೊಗೆ ಹೊರಬರಲಾರಂಭಿಸಿದೆ. ಕಾರಣ ಇದ್ದಕ್ಕಿದ್ದಂತೆಯೇ ಜಿಲ್ಲಾಧ್ಯಕ್ಷರನ್ನು ಬದಲಾಯಿಸಿದ್ದು, ಪಕ್ಷಕ್ಕಾಗಿ ದುಡಿದ ಮುಖಂಡರನ್ನು ಗುರುತಿಸಿ ಅವರಿಗೆ ತಕ್ಕ ಸ್ಥಾನಮಾನ ನೀಡದೆ ತನ್ನ ಹಿಂಬಾಲಕರಿಗೆ ಮಣೆ ಹಾಕಿದ್ದು, ಇದೆಲ್ಲದರ ಪರಿಣಾಮ ಇವತ್ತು ಬಿಜೆಪಿ ಎಂಬ ಭದ್ರಕೋಟೆಯ ಅಡಿಪಾಯವೇ ಅಲುಗಾಡುವ ಸ್ಥಿತಿಗೆ ಬಂದು ತಲುಪಿದೆ.

ಮುದುಡಿದ ಕಮಲ ಅರಳೀತೆ?

ಮುದುಡಿದ ಕಮಲ ಅರಳೀತೆ?

ರಾಜ್ಯಮಟ್ಟದ ನಾಯಕರಿಗೆ ಕೊಡಗಿನ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯವಿರುವುದು ಗೊತ್ತಿಲ್ಲದೇನಲ್ಲ. ಕಳೆದ ತಿಂಗಳು ವರಿಷ್ಟರು ಸಮ್ಮುಖದಲ್ಲೇ ಸಭೆ ನಡೆದು ಅದು ಗಲಾಟೆಯಲ್ಲಿ ಅಂತ್ಯಕಂಡಿತ್ತು. ಹೀಗಾಗಿಯೇ ಒಡೆದ ಮನಸ್ಸುಗಳನ್ನು ಒಂದು ಮಾಡಿ ಮುಂದಿನ ದಿನಗಳಲ್ಲಿ ಕಮಲ ಬಾಡದೆ ಅರಳಲಿ ಎಂಬ ಕಾರಣಕ್ಕೆ ಇತ್ತೀಚೆಗೆ ಜಿಲ್ಲಾ ಬಿಜೆಪಿ ಪ್ರಮುಖರನ್ನೊಳಗೊಂಡ ಕಾರ್ಯಕಾರಿಣಿ ಸಭೆಯನ್ನು ಮಡಿಕೇರಿಯಲ್ಲಿ ನಡೆಸಲಾಯಿತು. ಈ ಸಭೆ ಎಲ್ಲರನ್ನು ಒಂದು ಗೂಡಿಸುವ ಬದಲಿಗೆ ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯ ಹೊರ ಜಗತ್ತಿಗೆ ತಿಳಿಯುವಂತಾಗಿದೆ.

ಸಭೆಯಲ್ಲಿ ಅಸಮಾಧಾನ ಬಹಿರಂಗ

ಸಭೆಯಲ್ಲಿ ಅಸಮಾಧಾನ ಬಹಿರಂಗ

ಈ ಸಭೆಯ ಜವಬ್ದಾರಿ ಮತ್ತು ಮುಖಂಡರಲ್ಲಿ ಒಮ್ಮತ ಮೂಡಿಸುವ ಕಾರ್ಯವನ್ನು ಬಿಜೆಪಿ ವರಿಷ್ಠ ನಳಿನ್ ಕುಮಾರ್ ಕಟೀಲ್ ಅವರಿಗೆ ವಹಿಸಲಾಗಿತ್ತು. ಆದರೆ ಅವರು ಸಭೆಗೆ ಬಂದಿರಲಿಲ್ಲ. ಇನ್ನು ಶಾಸಕ ಕೆ.ಜಿ.ಬೋಪಯ್ಯ ಸಭೆಯತ್ತ ಮುಖ ಹಾಕಲಿಲ್ಲ. ಹಿಂದೆ ಅಧ್ಯಕ್ಷರಾಗಿದ್ದ ಮನುಮುತ್ತಪ್ಪ ಅವರನ್ನು ಕಿತ್ತು ಅವರ ಸ್ಥಾನಕ್ಕೆ ಬಿ.ಬಿ.ಭಾರತೀಶ್ ನೇಮಕ ಮಾಡಿದ್ದರಿಂದ ಸದ್ಯ ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿರುವ ಮನುಮುತ್ತಪ್ಪ ಸಭೆಗೆ ಬಂದಿದ್ದರಾದರೂ ಅವರ ಬೆಂಬಲಿಗರು ಅಸಮಾಧಾನದಿಂದಲೇ ಇದ್ದರು.

ಎಣ್ಣೆ ಸೀಗೇಕಾಯಿಯಾಯ್ತು ಸಂಬಂಧ

ಎಣ್ಣೆ ಸೀಗೇಕಾಯಿಯಾಯ್ತು ಸಂಬಂಧ

ಈ ಹಿಂದಿನಿಂದಲೂ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ರವಿ ಕುಶಾಲಪ್ಪ ಮತ್ತು ಅವರ ತಂಡದವರಾದ ಬಿಜೆಪಿ ಪ್ರಭಾರಿ ಉದಯಕುಮಾರ್ ಶೆಟ್ಟಿ, ಸಹ ಪ್ರಭಾರಿ ಯತೀಶ್ ಕುಮಾರ್ ವೇದಿಕೆಯಲ್ಲಿ ಆಸೀನರಾಗಿದ್ದರು. ಜಿಲ್ಲಾಧ್ಯಕ್ಷ ಸ್ಥಾನ ಕಲ್ಪಿಸುವಲ್ಲಿ ಅಪ್ಪಚ್ಚು ರಂಜನ್ ಕಾರಣ ಎಂಬ ಅಸಮಾಧಾನ ರವಿಕುಶಾಲಪ್ಪ ಅವರಲ್ಲಿರುವುದರಿಂದ ಅವರಿಬ್ಬರ ಸಂಬಂಧ ಎಣ್ಣೆ ಸೀಗೆಕಾಯಿಯಾಗಿದೆ.

ರಟ್ಟಾಯ್ತು ಒಳಜಗಳದ ಗುಟ್ಟು

ರಟ್ಟಾಯ್ತು ಒಳಜಗಳದ ಗುಟ್ಟು

ಸಭೆಗೆ ಆಗಮಿಸಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ವೇದಿಕೆಯಲ್ಲಿ ಎಸ್.ಬಿ. ರವಿ ಕುಶಾಲಪ್ಪ ಅವರು ಆಸೀನರಾಗಿದ್ದರಿಂದ ಅತ್ತ ತೆರಳದೆ ಕಾರ್ಯಕರ್ತರ ನಡುವೆ ಕುಳಿತದ್ದು ಬಿಜೆಪಿಯ ಒಳಜಗಳದ ಗುಟ್ಟು ರಟ್ಟಾಗಲು ಕಾರಣವಾಗಿದೆ. ಇನ್ನು ಮುನುಮುತ್ತಪ್ಪ ಅವರಿಗೂ ತಮ್ಮ ಅಧ್ಯಕ್ಷ ಸ್ಥಾನವನ್ನು ಕಿತ್ತು ಬಿಎಸ್ ವೈ ಬೆಂಬಲಿಗರಾದ ಬಿ.ಬಿ.ಭಾರತೀಶ್ ಅವರಿಗೆ ನೀಡಿ ತನಗೆ ಕೆಲಸಕ್ಕೆ ಬಾರದ ಸ್ಥಾನ ನೀಡಿದಕ್ಕೆ ಒಳಗೊಳಗೆ ಅಸಮಾಧಾನವಿದೆ ಎಂಬುದು ಕೂಡ ಇದೇ ಸಭೆಯಲ್ಲಿ ಬಹಿರಂಗವಾಗಿತ್ತು. ಅವರು ಕೂಡ ಕಾಟಾಚಾರಕ್ಕೆ ಒಂದೆರಡು ಮಾತನಾಡಿ ವೇದಿಕೆಯಿಂದ ಕೆಳಗಿಳಿದು ಬಂದು ಕಾರ್ಯಕರ್ತರೊಂದಿಗೆ ಕುಳಿತಿದ್ದರು.

ಸಭೆಗೆ ಬಾರದ ಮುಖಂಡರು

ಸಭೆಗೆ ಬಾರದ ಮುಖಂಡರು

ಇನ್ನು ಮಹಿಳಾ ಮುಖಂಡರಾದ ಕಾಂತಿ ಸತೀಶ್ ಕೂಡ ವೇದಿಕೆ ಏರದ್ದು, ಜತೆಗೆ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಪಕ್ಷದ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ, ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ರವಿ ಬಸಪ್ಪ, ಹಿರಿಯ ಮುಖಂಡ ಎಂ.ಬಿ. ದೇವಯ್ಯ, ಸೋಮವಾರಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎನ್. ಕೊಮಾರಪ್ಪ ಸೇರಿದಂತೆ ಅನೇಕ ಪ್ರಮುಖರು ಸಭೆಗೆ ಬಾರದಿರುವುದನ್ನು ಗಮನಿಸಿದರೆ ಕೊಡಗಿನ ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚಾಗಿರುವುದು ಕಂಡು ಬರುತ್ತಿದೆ.

ಚುನಾವಣೆಗೂ ಮೊದಲು ಸರಿಹೋದೀತೆ?

ಚುನಾವಣೆಗೂ ಮೊದಲು ಸರಿಹೋದೀತೆ?

ಚುನಾವಣೆಗೆ ಇನ್ನೊಂದು ವರ್ಷವಷ್ಟೇ ಬಾಕಿಯಿರುವಾಗ ಪಕ್ಷದ ಮುಖಂಡರು ಮುಖ ತಿರುಗಿಸಿ ನಡೆಯುತ್ತಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ ಬೇಸರ ತರಿಸಿದೆ. ಇದೆಲ್ಲದರ ಪರಿಣಾಮ ಏನಾಗುತ್ತದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಪಕ್ಷದ ಮುಖಂಡರೊಳಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಜಿಲ್ಲೆಯಲ್ಲಿ ಈಗಾಗಲೇ ಅರಳಿದ ಬಿಜೆಪಿ ಮುದುಡುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ. ಚುನಾವಣೆಗೂ ಮೊದಲು ಮುದುಡಿದ ಕಮಲ ಮತ್ತೆ ಅರಳೀತೇ ಎಂಬುದನ್ನು ಕಾದುನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+