ಸೈಟು ಮಾರಿದ್ದ 38 ಲಕ್ಷ ದರೋಡೆ ಮಾಡಿದ್ದವರ ಬಂಧನ
ಮಡಿಕೇರಿ, ಸೆಪ್ಟೆಂಬರ್ 15: ಇತ್ತೀಚೆಗೆ ದಕ್ಷಿಣ ಕೊಡಗಿನ ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ಗ್ರಾಮದ ನಾಲ್ಕೇರಿ ಜಂಕ್ಷನ್ ನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಕೊಡಗು ಪೊಲೀಸರು 7 ಮಂದಿ ಅಂತರರಾಜ್ಯ ಡಕಾಯಿತರನ್ನು ಬಂಧಿಸಿ, 29 ಲಕ್ಷ ನಗದು, ಕ್ಸೈಲೋ, ವ್ಯಾಗನಾರ್ ಹಾಗೂ ಎರಡು ಪಲ್ಸರ್ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ: ಆಸೀಫ್ ಎಂಬುವರು ತನ್ನ ಇಬ್ಬರು ಗೆಳೆಯರೊಂದಿಗೆ ಆ.16ರಂದು ಸೈಟ್ ಮಾರಿದ 38 ಲಕ್ಷ ನಗದಿನೊಂದಿಗೆ ಇನೋವಾ ಕಾರಿನಲ್ಲಿ ಮೈಸೂರಿನಿಂದ ಶ್ರೀಮಂಗಲ ಮಾರ್ಗವಾಗಿ ಕೇರಳದ ತಾಮರಚೇರಿಗೆ ಹೋಗುತ್ತಿದ್ದರು. ಆ ಸಂದರ್ಭ ಕಾರನ್ನು ಹಿಂಬಾಲಿಸಿ ಬಂದ 16 ಮಂದಿ ಅಪರಿಚಿತರ ತಂಡ ರಾತ್ರಿ 12.45ರ ಸಮಯದಲ್ಲಿ ನಾಲ್ಕೇರಿ ಜಂಕ್ಷನ್ ನಲ್ಲಿ ತಡೆದಿತ್ತು.[ಒನ್ ಸೈಡೆಡ್ ಲವರ್ ಕಾಟ, ಬೆದರಿದ ಯುವತಿ ಆತ್ಮಹತ್ಯೆ]
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಸೀಫ್ ನನ್ನು ಎಳೆದೊಯ್ದು ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು, ಸೈಟು ಮಾರಾಟ ಮಾಡಿದ ನಗದನ್ನು ದೋಚಿದ್ದರು. ಆಸೀಫ್ ಜೊತೆಯಲ್ಲಿದ್ದ ಇನ್ನಿಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆಸೀಫ್ ಮತ್ತಿತರರು ನೀಡಿದ ಮಾಹಿತಿ ಮೇರೆಗೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ವೀರಾಜಪೇಟೆ ಡಿ.ವೈಎಸ್ಪಿ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಯಿತು. ಈ ಪೈಕಿ ಒಂದು ತಂಡಕ್ಕೆ ಕೇರಳದ ಇರಿಟ್ಟಿಯ ಚೀನಿಕಾಡು ಅಜಿತ್ ಎಂಬಾತನ ಬಗ್ಗೆ ಮಾಹಿತಿ ಸಿಕ್ಕಿತ್ತು.[ಮೊಬೈಲ್ ನ ನಕಲಿ ಬಿಡಿಭಾಗ ಮಾಡುತ್ತಿದ್ದ 9 ಜನರ ಬಂಧನ]
ಆತನನ್ನು ಹುಡುಕಿಕೊಂಡು ಹೊರಟಾಗ ತಮಿಳುನಾಡಿನ ಸೇಲಂ ಪಟ್ಟಣದಲ್ಲಿ ತಲೆ ಮರೆಸಿಕೊಂಡಿರುವ ಸುಳಿವು ಸಿಕ್ಕಿತ್ತು. ಹೀಗಾಗಿ ಆತನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ವಿಚಾರಣೆ ಮುಂದುವರೆಸಿದಾಗ ದರೋಡೆಯ ಬಗ್ಗೆ ಬಾಯಿಬಿಟ್ಟಿದ್ದ. ದರೋಡೆ ಪ್ರಕರಣದಲ್ಲಿ 16 ಮಂದಿ ಭಾಗಿಯಾಗಿರುವುದಾಗಿ ಹೇಳಿದ್ದ.
ಮೂರು ತಂಡಗಳನ್ನು ರಚಿಸಿ, ಆರೋಪಿ ಅಜಿತ್ ನೀಡಿದ ಮಾಹಿತಿಯಂತೆ ವಿಶಾಕ್, ಶರಣುಕುಮಾರ್, ನಿಖಿಲ್ ಕುಮಾರ್, ಅರುಣ್ ಕುಮಾರ್, ಮುನಾಫ್, ಶೌಕತ್ ಸೇರಿ 7 ಮಂದಿಯನ್ನು ಬಂಧಿಸಿ, ದರೋಡೆ ಮಾಡಿ ಹಂಚಿಕೊಂಡಿದ್ದ 29,73,000 ರುಪಾಯಿಯನ್ನು ವಶಪಡಿಸಿಕೊಳ್ಳಲಾಯಿತು.
ಇನ್ನೂ 9 ಮಂದಿ ತಲೆ ಮರೆಸಿಕೊಂಡಿದ್ದು, ಅವರ ಬಳಿ ಉಳಿದ ಹಣ ಇದೆ. ವಿಳಾಸ ಇತರ ಮಾಹಿತಿಗಳು ಪೊಲೀಸರ ತನಿಖಾ ತಂಡಕ್ಕೆ ದೊರೆತಿದೆ. ಸದ್ಯದಲ್ಲಿಯೇ ಬಂಧಿಸಲಾಗುತ್ತದೆ. ಆರೋಪಿಗಳೆಲ್ಲರೂ ಕೇರಳ ರಾಜ್ಯಕ್ಕೆ ಸೇರಿದವರು. ಕೇರಳ ಸೇರಿದಂತೆ ಹಲವೆಡೆ ನಡೆದ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಂಶಯವಿದ್ದು, ವಿಚಾರಣೆ ಬಳಿಕವಷ್ಟೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.[ಜಯಚಂದ್ರ ಅವರೇ ಇದೇನ್ರೀ ನಿಮ್ಮ ಜಿಲ್ಲೆಯಲ್ಲಿ ಇಂಥ ಅಸಹ್ಯ?]
ದರೋಡೆ ಆರೋಪಿಗಳನ್ನು ಪತ್ತೆ ಹಚ್ಚಿದ ತಂಡಕ್ಕೆ ಪೊಲೀಸ್ ಇಲಾಖೆ 10 ಸಾವಿರ ನಗದು ಬಹುಮಾನ ಘೋಷಿಸಿದೆ ಎಂದು ಎಸ್ ಪಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.