ದಿಡ್ಡಳ್ಳಿ ನಿರಾಶ್ರಿತರ ಮನೆಗಳಲ್ಲಿ ಫಲಾನುಭವಿಗಳು ವಾಸಿಸದಿದ್ದರೆ ಮನೆ ಸರ್ಕಾರಕ್ಕೆ ವಾಪಸ್
ಮಡಿಕೇರಿ, ಜುಲೈ 29: ಐದು ವರ್ಷಗಳ ಹಿಂದೆ ವೀರಾಜಪೇಟೆ ತಾಲ್ಲೂಕಿನ ದಿಡ್ಡಳ್ಳಿಯಲ್ಲಿ ಬುಡಕಟ್ಟು ಸಮುದಾಯದ ಜನರು ಮನೆ ನಿರ್ಮಾಣಕ್ಕಾಗಿ ಹೋರಾಟವನ್ನೇ ಮಾಡಿದ್ದರು. ಈ ಹೋರಾಟವು ಇಡೀ ರಾಜ್ಯದ ಗಮನವನ್ನೇ ಸೆಳೆದಿತ್ತಲ್ಲದೆ ಮಡಿಕೇರಿಯಲ್ಲಿ ಸಹಸ್ರ ಸಂಖ್ಯೆಯಲ್ಲಿ ರಾಜ್ಯಾದ್ಯಂತದಿಂದ ಹೋರಾಟಗಾರರು ಬಂದು ಬೃಹತ್ ಪ್ರತಿಭಟನೆಯನ್ನೂ ನಡೆಸಿದ್ದರು.
ಪ್ರತಿಭಟನಕಾರರನ್ನು ಭೇಟಿಯಾಗಲು ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಹಿರಿಯ ಗಾಂಧಿವಾದಿ ದೊರೆಸ್ವಾಮಿ ಅವರೂ ಬಂದಿದ್ದರು. ಪ್ರತಿಭಟನೆಗೆ ಮಣಿದ ಸರ್ಕಾರ ಎಲ್ಲ ಬುಡಕಟ್ಟು ವರ್ಗದವರಿಗೂ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು.
ನಂತರ ಸರ್ಕಾರ ಸೋಮವಾರಪೇಟೆ ತಾಲ್ಲೂಕು ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿಯ ಬಸವನಹಳ್ಳಿ ಮತ್ತು ಕೂಡಿಗೆ ಗ್ರಾಮ ಪಂಚಾಯತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿ ಮೂಲಭೂತ ಸೌಲಭ್ಯವನ್ನು ಒದಗಿಸಿಕೊಟ್ಟಿತ್ತು. ಈ ಪುನರ್ವಸತಿ ಕೇಂದ್ರಗಳ ಪೈಕಿ ಬಸವನಹಳ್ಳಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುಮೋದಿತ ನಿವೇಶನಗಳಲ್ಲಿ 174 ಮನೆಗಳನ್ನು ಹಾಗೂ ಬ್ಯಾಡಗೊಟ್ಟದಲ್ಲಿ 354 ಮನೆಗಳನ್ನು ನಿರ್ಮಿಸಲಾಗಿದೆ.
ಇದೀಗ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಪುನರ್ವಸತಿ ಕೇಂದ್ರಗಳ ಮನೆ ಮನೆ ಸಮೀಕ್ಷೆ ನಡೆಸಿದಾಗ ಸಾಕಷ್ಟು ಮನೆಗಳಲ್ಲಿ ಫಲಾನುಭವಿಗಳು ವಾಸವಾಗದೇ ಬೀಗ ಹಾಕಿರುವುದು ಹಾಗೂ ಕೆಲವು ಮನೆಗಳಲ್ಲಿ ಅಧಿಕೃತ ಫಲಾನುಭವಿಗಳ ಬದಲಾಗಿ ಬೇರೆಯವರು ವಾಸವಾಗಿರುವುದು ಕಂಡು ಬಂದಿದೆ.
Recommended Video
ಆದ್ದರಿಂದ ವಾಸವಿಲ್ಲದೆ ಬೀಗ ಹಾಕಿರುವ ಮನೆಗಳ ಫಲಾನುಭವಿಗಳಿಗೆ ಹಾಗೂ ಅನಧಿಕೃತವಾಗಿ ವಾಸವಿರುವ ಮನೆಗಳ ಫಲಾನುಭವಿಗಳಿಗೆ ಈಗಾಗಲೇ ನೋಟೀಸು ನೀಡಲಾಗಿದೆ. ಈ ಪುನರ್ವಸತಿ ಕೇಂದ್ರದ ಫಲಾನುಭವಿಗಳು ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುಮೋದಿತ ಫಲಾನುಭವಿಗಳು ಮಾತ್ರ ಸರ್ಕಾರದಿಂದ ಮಂಜೂರಾದ ಮನೆಗಳಲ್ಲಿ ವಾಸವಾಗಿರಲು ಹಾಗೂ ಬೀಗ ಹಾಕಿ ಇನ್ನೂ ವಾಸಕ್ಕೆ ಬಾರದಿರುವ ಮನೆಗಳ ಫಲಾನುಭವಿಗಳು ತಕ್ಷಣ ಮನೆಗಳ ಕೀಗಳನ್ನು ಪಡೆದು ವಾಸವಾಗಿರಲು ಸೂಚಿಸಿದೆ.
ಈ ಕುರಿತು ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಾಲಕೃಷ್ಣ ರೈ, "ಒಂದು ವೇಳೆ ಅನಧಿಕೃತ ವ್ಯಕ್ತಿಗಳು ವಾಸವಾಗಿದ್ದಲ್ಲಿ ನಿಯಮಾನುಸಾರ ಕಾನೂನು ಕ್ರಮಕೈಗೊಳ್ಳಲಾಗುವುದು,'' ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಫಲಾನುಭವಿ ನಾಗರಾಜ ಎಂಬುವವರು, "ಕೆಲವರು ಬೇರೆಡೆ ಮನೆಗಳನ್ನು ಹೊಂದಿದ್ದಾರೆ. ಕೆಲವರು ಮನೆ ನೀಡಿರುವ ಜಾಗ ಹಳ್ಳಿ ಆಗಿದ್ದು, ಉದ್ಯೋಗಾವಕಾಶ ಕಷ್ಟ ಎಂಬ ಕಾರಣಕ್ಕೆ ಬೇರೆಡೆ ನೆಲೆಸಿದ್ದಾರೆ. ಕೆಲವರು ಮನೆಗಳಿಗೆ ಬೀಗ ಹಾಕಿಕೊಂಡು ಹೋಗಿದ್ದರೆ, ಕೆಲವರು ಬಾಡಿಗೆಗೆ ನೀಡಿದ್ದಾರೆ. ಅಲ್ಲದೆ ಸರ್ಕಾರ ನೀಡಿರುವ ಮನೆಗಳು 600 ಚದರ ಅಡಿಗಳಷ್ಟು ಮಾತ್ರ ವಿಸ್ತೀರ್ಣವಿದ್ದು, ನಮಗೆ ಕುರಿ, ಕೋಳಿ, ಹಂದಿ, ದನಕರುಗಳನ್ನು ಸಾಕಲು ಸಾಧ್ಯವಾಗುತ್ತಿಲ್ಲದ್ದರಿಂದಲೂ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ,'' ಎಂದರು.