ಆನೆ ಹಾವಳಿ ತಡೆಗೆ ಜೇನು ಸಾಕಣೆ; ದೇಶದಲ್ಲೇ ಮೊದಲ ಪ್ರಯೋಗ
ಮಡಿಕೇರಿ, ಮಾರ್ಚ್ 16; ಕರ್ನಾಟಕದ ಬಹಳಷ್ಟು ಕಡೆ ಆನೆ-ಮಾನವ ಸಂಘರ್ಷ ತೀವ್ರಗೊಳ್ಳುತ್ತಿದೆ. ಕೊಡಗಿನಲ್ಲಿಯೂ ನಿರಂತರವಾಗಿ ಕಾಡಾನೆ ದಾಳಿಯಿಂದ ಬೆಳೆ ನಾಶ ಹಾಗೂ ಪ್ರಾಣ ಹಾನಿ ಸಂಭವಿಸುತ್ತಿದೆ. ಇದರ ನಿಯಂತ್ರಣಕ್ಕೆ ಹಲವಾರು ಪ್ರಯತ್ನಗಳು ನಡೆದಿವೆ.
ಇದೀಗ ಜೇನುನೊಣಗಳನ್ನು ಬಳಸಿ ಕಾಡಾನೆಗಳು ರೈತರ ತೋಟಗಳಿಗೆ ನುಸುಳಿ ಬೆಳೆ ಹಾನಿ ಹಾಗೂ ಮಾನವ ಜೀವ ಹಾನಿ ಮಾಡುವುದನ್ನು ತಡೆಯುವ ನೂತನ ಪ್ರಯತ್ನ ದೇಶದಲ್ಲಿಯೇ ಮೊದಲನೆಯ ಬಾರಿಗೆ ಕೊಡಗಿನಲ್ಲಿ ನಡೆಯುತ್ತಿದೆ.
ಈಗಾಗಲೇ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟ ಹಲವೆಡೆ ಜೇನುನೊಣಗಳುಳ್ಳ ಪೆಟ್ಟಿಗೆಗಳನ್ನು ಅಳವಡಿಸಲಾಗಿದೆ. ಹಲವಾರು ರೈತರು ತಮ್ಮ ತೋಟಗಳಲ್ಲೂ ಇದನ್ನು ಅಳವಡಿಸುವ, ನಿರ್ವಹಿಸುವ ಕಾರ್ಯಕ್ಕೆ ತರಬೇತಿ ಪಡೆದಿದ್ದಾರೆ. ಈ ಫಲಾನುಭವಿಗಳಿಗೆ ಜೇನು ಪೆಟ್ಟಿಗೆ ವಿತರಣಾ ಕಾರ್ಯ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿದ ಕೇಂದ್ರ ಸರ್ಕಾರದ ಖಾದಿ ಹಾಗೂ ಗ್ರಾಮೋದ್ಯೋಗ ಮಂಡಳಿ (ಕೆವಿಐಸಿ) ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನ, "ನೂತನ ಯೋಜನೆಯನ್ನು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಜಾರಿಗೊಳಿಸಲಾಗುತ್ತಿದೆ" ಎಂದು ಹೇಳಿದ್ದಾರೆ.
"2017ರಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸಿಹಿ ಕ್ರಾಂತಿ ಯೋಜನೆಯಡಿ ಜೇನು ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಕೆವಿಐಸಿ ವತಿಯಿಂದ ಉಚಿತವಾಗಿ ರೈತರಿಗೆ ಜೇನು ಪೆಟ್ಟಿಗೆಗಳನ್ನು ನೀಡುವ ಕಾರ್ಯ ಪ್ರಾರಂಭವಾಗಿದ್ದು, ಇದುವರೆಗೆ 1.5 ಲಕ್ಷ ಪೆಟ್ಟಿಗೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ" ಎಂದು ತಿಳಿಸಿದ್ದಾರೆ.
"20,000 ಆದಿವಾಸಿಗಳು ಇದರಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ಆದರೆ ಇದೀಗ ಕೊಡಗಿನಲ್ಲಿ ಆನೆ ಮಾನವ ಸಂಘರ್ಷ ತಡೆಗೆ ಈ ಜೇನುನೊಣಗಳು ಸಹಕಾರಿಯಾಗಲಿವೆ. ಮಾನವ ಪ್ರಾಣ ಹಾನಿಯನ್ನು ನಿಯಂತ್ರಿಸಬಹುದಾಗಿದೆ. ಇದರೊಂದಿಗೆ ಜೇನು ಉತ್ಪಾದನೆ, ಮೇಣ ಮಾರಾಟ ರೈತರ ಆರ್ಥಿಕ ಜೀವನವನ್ನು ಸಬಲ ಮಾಡುತ್ತವೆ. ರೋಬಸ್ಟಾ ಕಾಫಿ ಪರಾಗ ಸ್ಪರ್ಶ ಕಾರ್ಯಕ್ಕೂ ನೊಣಗಳು ಸಹಕಾರಿಯಾಗಲಿದೆ" ಎಂದರು.

ಕೆವಿಐಸಿ ಆಶ್ರಯದಲ್ಲಿ ಈ ಯೋಜನೆಗೆ ಬಹಳಷ್ಟು ಆಯಾಮಗಳಿವೆ. ಜೇನು ಸಾಕಣೆ ಕೇವಲ ವ್ಯಾಪಾರದ ಉದ್ದೇಶವಲ್ಲ. ಇದರಿಂದ ಕೃಷಿಯಲ್ಲಿ ಇಳುವರಿ ಹೆಚ್ಚಲಿದೆ. ಜೇನಿನೊಂದಿಗೆ ಮೇಣವನ್ನು ಮಾರಾಟ ಮಾಡುವ ಮೂಲಕ ಉತ್ತಮ ಆದಾಯಗಳಿಸಬಹುದಾಗಿದೆ. ಮಾನವ ಹಾಗೂ ಕಾಡಾನೆ ಇಬ್ಬರ ಸಂರಕ್ಷಣೆ ಸಾಧ್ಯವಿದೆ. ಜೀವವೈವಿದ್ಯ ರಕ್ಷಣೆ ಹಾಗೂ ಪರಿಸರ ಸಮತೋಲನ ಕಾಯ್ದುಕೊಳ್ಳಬಹುದು. ರೈತರು ನವೋದ್ಯಮಿಗಳಾಗಿ ಬೆಳೆಯಲು ಅವಕಾಶವಿದೆ.
ಈ ಕುರಿತು ಮಾಹಿತಿ ನೀಡಿದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ, "ಪ್ರಾಯೋಗಿಕ ಯೋಜನೆಗೆ ಅರಣ್ಯ ಮಹಾವಿದ್ಯಾಲಯ ಸಾಕ್ಷಿಯಾಗಿರುವುದು ಸಂತೋಷ ತಂದಿದೆ. ಜೇನು ಸಾಕಣೆ ಮತ್ತು ಜೀವ ಹಾನಿ ತಪ್ಪಿಸುವ ಚಿಂತನೆ ಹೆಚ್ಚು ನಿರೀಕ್ಷೆ ಮೂಡಿಸಿದೆ" ಎಂದರು.
"ನೈಸರ್ಗಿಕ ಸಮಸ್ಯೆಗೆ ನೈಸರ್ಗಿಕ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ನೂತನ ಪ್ರಯೋಗ ನಡೆಯಲಿದೆ. ಆನೆ ಕಂದಕ, ಸೋಲಾರ್ ಬೇಲಿಯಂತಹ ಭೌತಿಕ ಪರಿಹಾರದ ಬದಲು ಜೇನುನೊಣ ಪ್ರಯೋಗದ ನೈಸರ್ಗಿಕ ಪರಿಹಾರ ಯಶಸ್ವಿಗೊಳ್ಳಲಿದೆ" ಎಂದು ಅಭಿಪ್ರಾಯ ಪಟ್ಟರು.












Click it and Unblock the Notifications