ಕೊಡಗು:ಅಬ್ಬರಿಸುತ್ತಿರುವ ಪುಷ್ಯ ಮಳೆ, ಇಂದು ಶಾಲಾ ಕಾಲೇಜುಗಳಿಗೆ ರಜೆ
ಕೊಡಗು, ಜುಲೈ 20 : ಕೊಡಗಿನಲ್ಲಿ ಕಕ್ಕಡ ಮಾಸ(ಆಟಿ ತಿಂಗಳು) ಎಂದರೆ ನಡು ಮಳೆಗಾಲದ ಕಾಲ. ಈ ವೇಳೆಯಲ್ಲಿ ಮಳೆ ಅಧಿಕವಾಗಿ ಸುರಿದು ತೊರೆ, ಹೊಳೆ, ನದಿ ಧುಮ್ಮಿಕ್ಕಿ ಹರಿಯುತ್ತದೆ.
ಕೆಲವು ಗ್ರಾಮಗಳು ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡು ದ್ವೀಪಗಳಾಗಿ ಬಿಡುತ್ತವೆ. ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿರುವುದನ್ನು ನೋಡಿದರೆ ಮುಂಗಾರು ಚೇತರಿಸಿಕೊಳ್ಳುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಜುಲೈ 17 ನಂತರ ರಾಜ್ಯದಲ್ಲಿ ಉತ್ತಮ ಮಳೆ: ಹವಾಮಾನ ಇಲಾಖೆ
ಮಂಗಳವಾರಕ್ಕೆ ಪುನರ್ವಸು ಮಳೆ ಅಂತ್ಯವಾಗಿದ್ದು, ಬುಧವಾರದಿಂದ ಪುಷ್ಯ ಮಳೆ ಆರಂಭವಾಗಿದೆ. ಪುಷ್ಯ ಮಳೆ ಆರಂಭದ ದಿನವೇ ಅಬ್ಬರಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆ ಸುರಿದರೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿವೆ.
ಮಡಿಕೇರಿ ತಾಲೂಕಿನ ಭಾಗಮಂಡಲ, ಸೋಮವಾರಪೇಟೆಯ ಶಾಂತಳ್ಳಿ, ವೀರಾಜಪೇಟೆಯ ಹುದಿಕೇರಿಯಲ್ಲಿ ಅತ್ಯಧಿಕ ಮಳೆ ಸುರಿದಿದೆ. ಭಾಗಮಂಡಲದಲ್ಲಿ ಒಂದೇ ದಿನ 200ಮಿ.ಮೀ. ಮಳೆಯಾಗಿದ್ದು, ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಕರ್ನಾಟಕ ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿದೆ ಭಾರೀ ಮಳೆ
ಕಳೆದ ವರ್ಷ ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿತ್ತಾದರೂ ಜುಲೈ ಬಳಿಕ ಕ್ಷೀಣಿಸಿತ್ತು. ಆದರೆ, ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆಯ ಪ್ರಮಾಣವನ್ನು ಗಮನಿಸಿದರೆ ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು 100 ಮಿ.ಮೀ.ರಷ್ಟು ಮಳೆ ಕಡಿಮೆ ಸುರಿದಿರುವುದು ಗೋಚರಿಸುತ್ತಿದೆ. ಆದರೆ ಮಳೆ ಹೀಗೆಯೇ ಸುರಿದರೆ ಕಳೆದ ವರ್ಷದ ಮಳೆಯನ್ನು ಹಿಂದಿಕ್ಕಬಹುದು.
ಇಂದು ಶಾಲಾ ಕಾಲೇಜುಗಳಿಗೆ ರಜೆ
ಮಳೆಯ ಕಾರಣ ಅಲ್ಲಲ್ಲಿ ಚಿಕ್ಕಪುಟ್ಟ ಅನಾಹುತಗಳು ಸಂಭವಿಸಿದ್ದು, ತಲಕಾವೇರಿ ರಸ್ತೆಯಲ್ಲಿ ಬರೆಕುಸಿತ ಸಂಭವಿಸಿದೆ. ಕೆಲವೆಡೆ ಮರಗಳು ನೆಲಕ್ಕುರುಳಿವೆ. ಮಳೆ ಬಿರುಸುಗೊಂಡ ಕಾರಣದಿಂದ ಜಿಲ್ಲಾಡಳಿತ ಗುರುವಾರ(ಜು.20) ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ಭರವಸೆ ಮೂಡಿಸಿದ ಪುಷ್ಯ ಮಳೆ
ಕಳೆದೊಂದು ವಾರದಿಂದ ಮಳೆ ಆಗೊಮ್ಮೆ ಈಗೊಮ್ಮೆ ಬರುತ್ತಿತ್ತಲ್ಲದೆ ಭತ್ತದ ಕೃಷಿ ಕೈಗೊಂಡಿದ್ದ ರೈತರನ್ನು ಆತಂಕಕ್ಕೆ ಸಿಲುಕಿಸಿತ್ತು. ಆದರೆ ಪುನರ್ವಸು ಮಳೆ ಕೊನೆಯ ಪಾದದಲ್ಲಿ ಉತ್ತಮವಾಗಿ ಸುರಿದಿದ್ದು, ಇದೀಗ ಪುಷ್ಯ ಮಳೆ ಭರವಸೆ ಮೂಡಿಸಿದೆ. ಇದೇ ರೀತಿ ಮಳೆ ಮುಂದುವರೆದರೆ ಕಾವೇರಿ ನದಿ ತುಂಬಿ ಹರಿಯಲಿದೆ. ಈಗಾಗಲೇ ಕಾವೇರಿ ನದಿ ದಡದಲ್ಲಿರುವ ಜನಕ್ಕೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಚಿಸಲಾಗಿದೆ. ಬಲಮುರಿ, ಬೇತ್ರಿ, ನೆಲ್ಯಹುದಿಕೇರಿ ಮೊದಲಾದ ಕಡೆ ಕಾವೇರಿ ನದಿ ಸಮೀಪದಲ್ಲೇ ಹೆಚ್ಚಿನ ಮನೆಗಳು ಇರುವುದರಿಂದ ಅವರಿಗೆಲ್ಲ ಆತಂಕ ಶುರುವಾಗಿದೆ.
ಬುಧವಾರ ಸುರಿದ ಮಳೆ ಪ್ರಮಾಣ
ಜಿಲ್ಲೆಯಲ್ಲಿ ಬುಧವಾರ ಸರಾಸರಿ 79.36 ಮಿ.ಮೀ.ನಷ್ಟು ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 10.51 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 994.16 ಮಿ.ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 1065.27 ಮಿ.ಮೀ ಮಳೆಯಾಗಿದ್ದನ್ನು ಗಮನಿಸ ಬಹುದಾಗಿದೆ. ಮಡಿಕೇರಿ ತಾಲೂಕಿನಲ್ಲಿ 118.55 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 59.13 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 60.4 ಮಿ.ಮೀ. ಮಳೆ ಸುರಿದಿದೆ.
ಹಾರಂಗಿಯಲ್ಲಿ ನೀರಿನ ಮಟ್ಟ ಏರಿಕೆ
ಮಡಿಕೇರಿ ವ್ಯಾಪ್ತಿಯಲ್ಲಿ ಮಳೆ ಚೆನ್ನಾಗಿ ಸುರಿಯುತ್ತಿರುವುದರಿಂದ ನದಿ ಹಾಗೂ ಸಣ್ಣಪುಟ್ಟ ಹೊಳೆಗಳು ತುಂಬಿ ಹರಿಯುತ್ತಿದ್ದು ಪರಿಣಾಮ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಿದ್ದು ಸುಮಾರು ಸುಮಾರು 5000ಕ್ಕೂ ಹೆಚ್ಚು ಕ್ಯೂಸೆಕ್ ನೀರು ಒಳಹರಿವಿದೆ. 2,859 ಅಡಿಗಳ ಗರಿಷ್ಟ ಮಟ್ಟದ ಜಲಾಶಯದಲ್ಲಿ ಬುಧವಾರ 2844.45 ಅಡಿಗೇರಿದ್ದು, ಹೆಚ್ಚಳವಾಗುತ್ತಲೇ ಹೋಗುತ್ತಿದೆ.
ಹೊಳೆದಾಟಲು ಪರದಾಟ ತಪ್ಪಿಲ್ಲ
ಮಳೆಗಾಲ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯ ಹಲವು ಕುಗ್ರಾಮಗಳ ಜನರ ಬದುಕು ಮಾತ್ರ ಮುರಾಬಟ್ಟೆಯಾಗುತ್ತಿದೆ. ತಮ್ಮ ಗ್ರಾಮದಲ್ಲಿ ಹರಿಯುವ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದಂತೆಯೇ ಸೇತುವೆಗಳಿಲ್ಲದ ಕಾರಣ ಸಂಪರ್ಕ ಕಳೆದುಕೊಳ್ಳಬೇಕಾಗುತ್ತದೆ. ಕೇವಲ ಒಂದೆರಡು ಗ್ರಾಮಕ್ಕೆ ಸೇತುವೆ ನಿರ್ಮಿಸಲು ಮುಂದಾಗದ ಸರ್ಕಾರದ ಕ್ರಮಗಳಿಂದಾಗಿ ಬಹುತೇಕ ಗ್ರಾಮಗಳ ಜನ ನದಿ ದಾಟಲು ತಾವೇ ಅಡಿಕೆ, ಕಾಡುಮರಗಳನ್ನು ನದಿಗೆ ಅಡ್ಡಲಾಗಿ ಹಾಕಿಯೋ ಅಥವಾ ನದಿ ಸಮೀಪದ ಮರಗಳಿಗೆ ಹಗ್ಗದಿಂದ ಕಟ್ಟಿಯೋ ಮಾಡಿದ ಸೇತುವೆ, ಪಾಲಗಳ ಮೂಲಕ ದಾಟ ಬೇಕಾಗುತ್ತದೆ. ಇದನ್ನೇ ಆಶ್ರಯಿಸಿ ಶಾಲೆಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಹೀಗೆ ಎಲ್ಲರೂ ದಾಟಬೇಕಾಗುತ್ತದೆ. ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ತಪ್ಪಲಿನ ನಾಡ್ನಳ್ಳಿ ಮತ್ತು ಮಡಿಕೇರಿ ತಾಲೂಕಿನ ಹಮ್ಮಿಯಾಲ ಮುಟ್ಲು ಗ್ರಾಮದಲ್ಲಿಯೂ ಇದೇ ಪರಿಸ್ಥಿತಿ ಇದೆ.
ಪ್ರತಿ ವರ್ಷವೂ ಇವರಿಗೆ ಕಷ್ಟ ತಪ್ಪಿದಲ್ಲ
ಹಮ್ಮಿಯಾಲ ಗ್ರಾಮದ ಗದ್ದೆ ಬಯಲಿನ ಪಕ್ಕದಲ್ಲೇ ಹೊಳೆ ತುಂಬಿ ಹರಿಯುತ್ತಿದೆ. ಈ ಹೊಳೆಯನ್ನು ದಾಟಲು ವರ್ಷಂಪ್ರತಿ ಗ್ರಾಮ ಪಂಚಾಯಿತಿಯಿಂದ ಮರದ ಪಾಲ ನಿರ್ಮಾಣಕ್ಕೆ ಒಂದಷ್ಟು ಅನುದಾನ ನೀಡಲಾಗುತ್ತದೆ. ಈ ಹಣವನ್ನು ಬಳಸಿಕೊಂಡು ಗ್ರಾಮಸ್ಥರು ತಮ್ಮ ಸುತ್ತಮುತ್ತ ಸಿಗುವ ಕಚ್ಚಾವಸ್ತು ಬಳಸಿ ಕಾಲುಸೇತುವೆ(ಪಾಲ) ನಿರ್ಮಿಸಿಕೊಳ್ಳುತ್ತಾರೆ. ಮಳೆ ಇದರ ಮೇಲೆ ಬಿದ್ದು ಪಾಚಿಕಟ್ಟಿ ಕೆಲವೊಮ್ಮೆ ದಾಟುವಾಗ ಜನ ಜಾರಿ ಬಿದ್ದು ನದಿ ಪಾಲಾದ ಪ್ರಕರಣಗಳು ಇವೆ. ಆದರೂ ಅನಿವಾರ್ಯವಾಗಿ ಇದರ ಮೇಲೆ ಜೀವಕೈಯ್ಯಲ್ಲಿಡಿದು ಜನ ಸಾಗುತ್ತಾರೆ. ನಮಗೆ ಕಾಂಕ್ರಿಟ್ ಸೇತುವೆ ನಿರ್ಮಿಸಿಕೊಡದಿದ್ದರೂ ಪರ್ವಾಗಿಲ್ಲ ತೂಗು ಸೇತುವೆಯನ್ನಾದರೂ ನಿರ್ಮಿಸಿಕೊಡಿ ಎಂದು ಇಲ್ಲಿನ ಜನ ಬೇಡಿಕೊಳ್ಳುತ್ತಿದ್ದಾರೆ. ಆದರೆ ಇವರ ಮಾತು ಆಡಳಿತರೂಢರಿಗೆ ಕೇಳಿಸದ ಕಾರಣದಿಂದಾಗಿ ಪ್ರತಿ ವರ್ಷವೂ ಇವರಿಗೆ ಕಷ್ಟ ತಪ್ಪಿದಲ್ಲ.