ಪ್ರವಾಸಿ ತಾಣ ತೆರೆಯಲು ಸರ್ಕಾರದ ಹೇಳಿದ್ದರೂ ಹಾರಂಗಿ ಉದ್ಯಾನವನ ಇನ್ನೂ ತೆರೆದಿಲ್ಲ
ಮಡಿಕೇರಿ, ಅಕ್ಟೋಬರ್ 29: ಕೋವಿಡ್ ಅನ್ಲಾಕ್ 5.0 ಜಾರಿಯಾಗಿ ಒಂದು ತಿಂಗಳು ಕಳೆದಿದೆ. ಈ ವೇಳೆ ಉದ್ಯಾನವನಗಳು, ಪ್ರವಾಸಿ ತಾಣಗಳು ಕೂಡ ಓಪನ್ ಆಗಿವೆ. ಆದರೆ ಪ್ರವಾಸಿ ತಾಣಗಳ ಜಿಲ್ಲೆಯಲ್ಲಿರುವ ಕೊಡಗಿನ ಹಾರಂಗಿ ಉದ್ಯಾನವನಕ್ಕೆ ಮಾತ್ರ ಈಗಲೂ ಪ್ರವೇಶ ನಿಷೇಧಿಸಲಾಗಿದೆ.
ಹಾರಂಗಿ ಜಲಾಶಯದ ಮುಂಭಾಗ ಇರುವ ವಿಶಾಲವಾದ ಉದ್ಯಾನವನ ಕೆಆರ್ಎಸ್ ಜಲಾಶಯದ ಮುಂಭಾಗದಲ್ಲಿರುವ ಉದ್ಯಾನವನಕ್ಕಿಂತಲೂ ದೊಡ್ಡದಾದ ಮತ್ತು ಅಷ್ಟೇ ಸುಂದರವಾಗಿದೆ. ಹೀಗಾಗಿಯೇ ಕಳೆದ ಎರಡು ವರ್ಷಗಳಿಂದ ಹಾರಂಗಿ ಉದ್ಯಾನವಕ್ಕೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಎಂಜಾಯ್ ಮಾಡುತ್ತಿದ್ದರು.
ಉದ್ಯಾನವನದಲ್ಲಿರುವ ಅತ್ಯಾಧುನಿಕ ಸಂಗೀತ ಕಾರಂಜಿ ಬರುವ ಸಾವಿರಾರು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತಿತ್ತು. ಆದರೆ, ಕೊರೊನಾದಿಂದ ಎಲ್ಲಾ ಪ್ರವಾಸಿಗಳು ತಾಣಗಳು ಬಂದ್ ಆಗಿದ್ದವು.

""ಈಗ ಎಲ್ಲಾ ಪ್ರವಾಸಿ ತಾಣಗಳು ತೆರೆದರೂ ಹಾರಂಗಿ ಉದ್ಯಾನವನ ಮಾತ್ರ ಇನ್ನೂ ಮುಚ್ಚಿದೆ. ಹೀಗಾಗಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವ ಪ್ರವಾಸಿಗರು ಉದ್ಯಾನವನದ ಗೇಟಿನಲ್ಲಿ "ನೋ ಎಂಟ್ರಿ' ಬೋರ್ಡ್ ನೋಡಿ ಬೇಸರದಿಂದ ವಾಪಸ್ ಆಗುತ್ತಿದ್ದೇವೆ'' ಅನ್ನುವುದು ಮೈಸೂರಿನಿಂದ ಬಂದಿದ್ದ ಪ್ರವಾಸಿ ಆದಿಲ್ ಅವರ ಅಭಿಪ್ರಾಯ.
ಕಳೆದ ಆರೇಳು ತಿಂಗಳಿನಿಂದ ಸಂಗೀತ ಕಾರಂಜಿಗಳು ಬಂದ್ ಆಗಿದ್ದು, ಅವುಗಳು ಕೂಡ ತುಕ್ಕು ಹಿಡಿಯುವ ಸ್ಥಿತಿ ತಲುಪಿವೆ. ಈ ಕುರಿತು ಹಾರಂಗಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಆರಂಭದಲ್ಲಿ ಕೆಲವು ದಿನಕಾಲ ಪ್ರವಾಸಿಗರ ಭೇಟಿಗೆ ಅವಕಾಶ ನೀಡಿದ್ದೆವು. ಆದರೆ ಕೆ.ಆರ್.ಎಸ್ ಅವೆಲ್ಲವೂ ಮುಚ್ಚಿರುವುದರಿಂದ ನಾವು ಮುಚ್ಚಿದ್ದೇವೆ ಎನ್ನುವ ಸಲ್ಲದ ಉತ್ತರ ನೀಡುತ್ತಿದ್ದಾರೆ. ಇನ್ನು ಕೊರೊನಾದಿಂದ ಮಾರ್ಚ್ ತಿಂಗಳಿನಿಂದಲೇ ಲಾಕ್ ಡೌನ್ ಆಗಿದ್ದರಿಂದ ಅಂದಿನಿಂದ ಆರ್ಥಿಕವಾಗಿ ನಾವು ಸಂಪೂರ್ಣ ಕುಗ್ಗಿ ಹೋಗಿದ್ದೇವೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.

""ಸರ್ಕಾರವೇ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿದ್ದರೂ, ಹಾರಂಗಿ ಇಲಾಖೆ ಅಧಿಕಾರಿಗಳು ಮಾತ್ರ ಪ್ರೋತ್ಸಾಹಿಸುತ್ತಿಲ್ಲ. ಪ್ರವಾಸಿ ತಾಣಗಳಲ್ಲಿ ಚಿಕ್ಕಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದ ನಾವು, ಉದ್ಯಾನವನ ಮುಚ್ಚಿರುವುದರಿಂದ ಪ್ರವಾಸಿಗರು, ವ್ಯಾಪಾರವಿಲ್ಲದೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದೇವೆ'' ಎನ್ನುವುದು ವ್ಯಾಪಾರಸ್ಥರ ಅಳಲು.
ಒಟ್ಟಿನಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡ ಎನ್ನುವ ಹಾಗೆ ಸರ್ಕಾರವೇ ಪ್ರವಾಸಿತಾಣಗಳನ್ನು ತೆರೆಯಲು ಹೇಳಿದರೂ, ಹಾರಂಗಿ ಉದ್ಯಾನವನದ ಅಧಿಕಾರಿಗಳು ಮಾತ್ರ ಸರ್ಕಾರದ ನಿಯಮಕ್ಕೂ ಕಿಮ್ಮತ್ತು ನೀಡಿಲ್ಲ ಎನ್ನುವುದು ಸ್ಥಳೀಯರು ಆರೋಪಿಸಿದ್ದಾರೆ.












Click it and Unblock the Notifications