ಹಾರಂಗಿ ಜಲಾಶಯ ಮುಂಭಾಗ ತೂಗು ಸೇತುವೆ ನಿರ್ಮಾಣ: ಸ್ಥಳ ಪರಿಶೀಲನೆ

ಮಡಿಕೇರಿ, ಆಗಸ್ಟ್ 03: ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತವಾಗಿರುವ ಕೊಡಗು ಜಿಲ್ಲೆಯ ಪ್ರಮುಖ ಜಲಾಶಯ ಹಾಗೂ ಪ್ರವಾಸಿ ತಾಣ ಹಾರಂಗಿ ಅಣೆಕಟ್ಟೆ ಮುಂಭಾಗದಲ್ಲಿ ಸುಮಾರು 3.5 ಕೋಟಿ‌ ರೂ. ವೆಚ್ಚದಲ್ಲಿ ತೂಗು ಸೇತುವೆ ನಿರ್ಮಿಸಲು ಕಾವೇರಿ ನೀರಾವರಿ ನಿಗಮ ಮುಂದಾಗಿದೆ.

ಈ ಸಂಬಂಧ ತೂಗು ಸೇತುವೆಯ ಜನಕ ಎಂದೇ ಪ್ರಸಿದ್ಧವಾಗಿರುವ ಗಿರೀಶ್ ಭಾರದ್ವಾಜ್ ಪುತ್ರ ಪತಂಜಲಿ ಭಾರದ್ವಾಜ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹಾರಂಗಿ ಜಲಾಶಯ ಭರ್ತಿಯಾದ ಸಂದರ್ಭ ನಾಲ್ಕು ಕ್ರಸ್ಟ್‌ಗೇಟ್‌ಗಳ ಮೂಲಕ ಹೊರಬಿಡುವ ನೀರಿನ ನಯನ‌ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಅನುಕೂಲ‌ವಾಗಲಿದೆ. ಈ ನಿಟ್ಟಿನಲ್ಲಿ ಅಣೆಕಟ್ಟೆ ಮುಂಭಾಗ ಹರಿಯುವ ನದಿ ದಂಡೆಯ ಮೇಲೆ ತೂಗುಸೇತುವೆ ನಿರ್ಮಿಸುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಲಹೆ ನೀಡಿದ್ದರು.

ಅದರಂತೆ ಅಂದಾಜು 3.5 ಕೋಟಿ ರೂ. ವೆಚ್ಚದಲ್ಲಿ ತೂಗು ಸೇತುವೆ ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್ ತಿಳಿಸಿದ್ದಾರೆ.

Madikeri: Hanging Bridge Will Be Build Infront Of Harangi Reservoir: Location Verification

ಹಾರಂಗಿ ಜಲಾಶಯ ಭರ್ತಿಯಾದ ವೇಳೆ ಗರಿಷ್ಠ ಒಂದು ಲಕ್ಷ ಕ್ಯುಸೆಕ್ ಪ್ರಮಾಣದ ‌ನೀರು ಹೊರಬಿಡುವ ಸಾಮರ್ಥ್ಯವಿದ್ದು, 22 ಸಾವಿರ ಕ್ಯುಸೆಕ್ ನೀರು ಬಿಟ್ಟ ಸಂದರ್ಭದಲ್ಲಿ ಜಲಾಶಯದ ಕೆಳಗಿರುವ ಸೇತುವೆ ಮುಳುಗಡೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನೂತನ ಮಾದರಿಯ ತೂಗು ಸೇತುವೆ‌ ನಿರ್ಮಿಸಿ ಸಾರ್ವಜನಿಕರಿಗೆ‌ ಮತ್ತು ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಚಿಂತನೆ‌ ನಡೆಸಲಾಗಿದೆ.

ಹಾರಂಗಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ತೂಗು ಸೇತುವೆಯು ಅಣೆಕಟ್ಟೆಯಿಂದ ಸುಮಾರು 300 ಮೀಟರ್ ಅಂತರದಲ್ಲಿರಲಿದ್ದು, 160 ಮೀಟರ್ ಉದ್ದ, 3.5 ಮೀಟರ್ ಎತ್ತರ, 1.5 ಮೀ ಅಗಲವಿರಲಿದ್ದು, ಈ ಸೇತುವೆ ನಿರ್ಮಾಣ ಕಾಮಗಾರಿಗೆ ಪತಂಜಲಿ ಭಾರದ್ವಾಜ್‌ರಿಂದ ಸ್ಥಳ ಪರಿಶೀಲನೆ ನಡೆಸಲಾಯಿತು.

"ಸೇತುವೆ ಮೇಲೆ ಹೆಚ್ಚಿನ ‌ಪ್ರಮಾಣದ ಪ್ರವಾಸಿಗರು ಏಕಕಾಲದಲ್ಲಿ‌ ನಿಂತು ವೀಕ್ಷಣೆ‌ ಮಾಡುವ ನಿಟ್ಟಿನಲ್ಲಿ ಅಧುನಿಕ ತಂತ್ರಜ್ಞಾನ ಮತ್ತು ಗುಣಮಟ್ಟದ ಸದೃಢವಾದ ಆಕರ್ಷಕ ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಸಂಬಂಧ ನೀಲ‌ನಕ್ಷೆ ಮತ್ತು ವಿವರವಾದ ಯೋಜನಾ ವರದಿಯನ್ನು ಕಾವೇರಿ‌ ನೀರಾವರಿ‌ ನಿಗಮ‌ದ ಕೇಂದ್ರ ಸ್ಥಾನಕ್ಕೆ ಮತ್ತು ಸರ್ಕಾರಕ್ಕೆ ಕಳುಹಿಸಲು ಎಲ್ಲಾ ರೀತಿಯ ಸಿದ್ಧತೆಯನ್ನು ಶಾಸಕರ ಸೂಚನೆಯಂತೆ ನಡೆಸಲಾಗುತ್ತಿದೆ,'' ಎಂದು ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ಹೇಳಿದ್ದಾರೆ.

Madikeri: Hanging Bridge Will Be Build Infront Of Harangi Reservoir: Location Verification

ಕೋವಿಡ್ ಲಾಕ್‌ಡೌನ್ ಸಡಿಲಗೊಂಡ ನಂತರದಲ್ಲಿ ಕೊಡಗು ಜಿಲ್ಲೆಗೆ ರಾಜ್ಯ‌ ಮತ್ತು ಬೇರೆ ರಾಜ್ಯಗಳಿಂದ ಅಧಿಕ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದು, ಪ್ರವಾಸಿ ತಾಣಗಳಾದ ರಾಜಾಸೀಟ್, ದುಬಾರೆ ಆನೆ ಶಿಬಿರ, ನಿಸರ್ಗಧಾಮ ಮುಂತಾದವುಗಳನ್ನು ವೀಕ್ಷಿಸಿ ಹಾರಂಗಿಗೆ ಭೇಟಿ ನೀಡುತ್ತಾರೆ.

ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಈಗಾಗಲೇ ಹಾರಂಗಿಯಲ್ಲಿ ಉದ್ಯಾನವನ ಮತ್ತು ಸಂಗೀತ ಕಾರಂಜಿ ವ್ಯವಸ್ಥೆ ಮಾಡಲಾಗಿದೆ. ಮಳೆಗಾಲದ ಮೂರು ತಿಂಗಳಲ್ಲಿ‌ ಹಾರಂಗಿ ಅಣೆಕಟ್ಟೆಯಿಂದ ನದಿಗೆ ಹರಿಯುವ ನೀರಿನ ವೀಕ್ಷಣೆಗೆ ರಾಜ್ಯದಲ್ಲೇ ಪ್ರಥಮವಾಗಿ ಅಣೆಕಟ್ಟೆ ಎದುರು ನಿಂತು ವೀಕ್ಷಿಸಲು ಅವಕಾಶ ಕಲ್ಪಿಸುವಂತೆ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಳೆದ ವಾರದ ಹಿಂದೆ ಹಾರಂಗಿಗೆ ಭೇಟಿ ನೀಡಿದ ಸಂದರ್ಭ ಸಲಹೆ ಮಾಡಿದ್ದರು.

ಅದರಂತೆ ತೂಗು ಸೇತುವೆ ನಿರ್ಮಾಣದಲ್ಲಿ ಪರಿಣತಿ ಹೊಂದಿರುವ, ಇದುವರೆಗೆ 145 ಸೇತುವೆಗಳನ್ನು ನಿರ್ಮಿಸಿರುವ ಗಿರೀಶ್ ಭಾರದ್ವಾಜ್ ಮತ್ತು ಪತಂಜಲಿ‌ ಭಾರದ್ವಾಜ್ ತಂಡ 146ನೇ ತೂಗು ಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ರಾಜ್ಯ ಸರ್ಕಾರದ ಅನುಮತಿ ದೊರೆತು, ಶೀಘ್ರದಲ್ಲಿ ಹಣ ಬಿಡುಗಡೆಯಾದರೆ ಮುಂದಿನ 2022ರ ಒಳಗಾಗಿ ಹಾರಂಗಿ ಜಲಾಶಯದ ತೂಗುಸೇತುವೆ ಲೋಕಾರ್ಪಣೆಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+