ಭೂತದಂತೆ ಬಂದು ಕಳ್ಳತನಕ್ಕಿಳಿಯುತ್ತಿದ್ದವ ಸಿಸಿಟಿವಿಯಲ್ಲಿ ಸೆರೆ
ಮಡಿಕೇರಿ, ಜುಲೈ 21 : ಇಲ್ಲಿಗೆ ಸಮೀಪದ ಮರಗೋಡು ಎಂಬಲ್ಲಿ ವ್ಯಕ್ತಿಯೊಬ್ಬರು ಗೋದಾಮಿಗೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಬೆಳ್ಳಗಿನ ಆಕೃತಿಯೊಂದು ಸುಳಿದಾಡಿರುವುದು ಸೆರೆಯಾಗಿದ್ದು, ಮೇಲ್ಮೋಟಕ್ಕೆ ಭೂತದಂತೆ ಕಂಡು ಬರುವ ಆಕೃತಿ ಭೂತವಲ್ಲ, ಕಳ್ಳತನ ನಡೆಸಲು ಹೊಂಚು ಹಾಕುತ್ತಿರುವ ವ್ಯಕ್ತಿ ಎಂಬುದು ದೃಢಪಟ್ಟಿದೆ.
ಈ ವ್ಯಾಪ್ತಿಯಲ್ಲಿ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ನಡುರಾತ್ರಿಯಲ್ಲಿ ಸುಳಿದಾಡುತ್ತಾ ಒಂಟಿ ಮಹಿಳೆಯರಿರುವ ಮನೆ ಬಳಿ ಹೊಂಚು ಹಾಕಿ ನೋಡುವುದು, ಬಾತ್ ರೂಂಗೆ ಇಣುಕುವುದನ್ನು ಮಾಡುತ್ತಿದ್ದಾನೆ. ಅಷ್ಟೇ ಅಲ್ಲದೆ, ಕೈಗೆ ಸಿಕ್ಕ ವಸ್ತುಗಳನ್ನು ಕದಿಯುತ್ತಾನೆ ಎಂಬ ಆರೋಪ ಕೇಳಿಬಂದಿವೆ. [ಆತ್ಮದ ಜೊತೆ ಸಂಭಾಷಣೆ : ಹೀಗೂ ಉಂಟೇ?]
ಮರಗೋಡು ಪಟ್ಟಣ ಇತ್ತೀಚೆಗೆ ಅಭಿವೃದ್ಧಿಯಾಗುತ್ತಿದೆ. ಈ ನಡುವೆ ಅಲ್ಲಲ್ಲಿ ಕಳ್ಳತನದ ಪ್ರಕರಣಗಳು ನಡೆಯುತ್ತಿವೆ. ಕೆಲ ದಿನದ ಹಿಂದೆ ಬೇಕರಿಯೊಂದರ ಕಳ್ಳತನಕ್ಕೆ ವಿಫಲ ಯತ್ನ ನಡೆದಿತ್ತು. ಸಾಮಾನ್ಯವಾಗಿ ಮಳೆಗಾಲವಾಗಿದ್ದರಿಂದ ರಾತ್ರಿ 9 ಗಂಟೆ ನಂತರ ಯಾರೂ ಇರುವುದಿಲ್ಲ. ಅಷ್ಟರಲ್ಲಿ ಎಲ್ಲರೂ ಮನೆ ಸೇರಿಕೊಳ್ಳುತ್ತಾರೆ. ಇನ್ನು ಮಧ್ಯರಾತ್ರಿಯಲ್ಲಿ ಯಾರು ಕೂಡ ಓಡಾಡುವುದಿಲ್ಲ. [ದೆವ್ವದ ಕತೆಗಳು ಎ೦ದರೇ ಸಾಕು ಕಿವಿ ನೆಟ್ಟಗೆ!]
ಹೀಗಿರುವಾಗ ಬೇಕರಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅಲ್ಲಿನ ವಿಎಸ್ಎಸ್ಎನ್ ಅಧ್ಯಕ್ಷ, ಗ್ರಾ.ಪಂ. ಸದಸ್ಯರಾಗಿರುವ ಬಾಳೆಕಜೆ ಯೋಗೇಂದ್ರ ಅವರಿಗೆ ತಮ್ಮ ಕಾಫಿ ಗೋದಾಮಿನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ನೆನಪಾಗಿದೆ.
ತಕ್ಷಣ ಅವರು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯವನ್ನು ನೋಡಿದ್ದಾರೆ. ಅದರಲ್ಲಿ ರಾತ್ರಿ 11 ಗಂಟೆ 16 ನಿಮಿಷದ ಸಮಯದಲ್ಲಿ ವ್ಯಕ್ತಿಯೋರ್ವ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ರಸ್ತೆಯಲ್ಲಿ ಹೋಗುತ್ತಿರುವ ದೃಶ್ಯ ಕಾಣಿಸಿದೆ. ಆದರೆ ಈತ ಯಾರು ಎಂಬುದು ಸ್ಪಷ್ಟವಾಗಿ ಗೋಚರಿಸಿಲ್ಲ. [ನಾನು, ನನ್ನ ರೂಂಮೇಟುಗಳು ಮತ್ತು ಭೂತಕಾಲ]
ಅವರು ಹೇಳುವ ಪ್ರಕಾರ, ಆ ವ್ಯಕ್ತಿ ಅಲ್ಲಿನ ಸುತ್ತಮುತ್ತಲಿನವನೇ ಅಂತೆ. ಆದ್ದರಿಂದ ಆತ ಯಾರು ಎಂಬುದರ ಬಗ್ಗೆ ಸ್ಥಳೀಯರೇ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲ ಆ ವ್ಯಕ್ತಿಯ ಬಗ್ಗೆ ಜಾಗ್ರತರಾಗಿರುವಂತೆ ಜನರಿಗೆ ಮನವಿ ಮಾಡಿದ್ದಾರೆ.