ಎಂ.ಕೆ.ಗಣಪತಿ ಆತ್ಮಹತ್ಯೆ : ಕೆ.ಜೆ.ಜಾರ್ಜ್ಗೆ ಕ್ಲೀನ್ ಚಿಟ್
ಮಡಿಕೇರಿ, ಸೆಪ್ಟೆಂಬರ್ 17 : ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಸಿಐಡಿ ಪೊಲೀಸರು ಮಡಿಕೇರಿ ಕೋರ್ಟ್ಗೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ.
ಶನಿವಾರ ಸಿಐಡಿ ಪೊಲೀಸರು ಮಡಿಕೇರಿ ಕೋರ್ಟ್ಗೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದು, ಮಾಜಿ ಸಚಿವ ಕೆ.ಜೆ.ಜಾರ್ಜ್, ಲೋಕಾಯುಕ್ತ ಐಜಿಪಿಯಾಗಿದ್ದ ಪ್ರಣಬ್ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿಯಾಗಿದ್ದ ಎ.ಎಂ.ಪ್ರಸಾದ್ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.[ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]
ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಅಂತಿಮ ವರದಿಯನ್ನು ಸೆಪ್ಟೆಂಬರ್ 19ರೊಳಗೆ ಸಲ್ಲಿಸಬೇಕು ಎಂದು ಮಡಿಕೇರಿ ಕೋರ್ಟ್ ಸಿಐಡಿಗೆ ಸೂಚನೆ ನೀಡಿತ್ತು. ಎರಡು ದಿನ ಮೊದಲೇ ಅಂದರೆ ಸೆ.17ರಂದು ಸಿಐಡಿ ಅಧಿಕಾರಿಗಳು ಕೋರ್ಟ್ಗೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ.[ಗಣಪತಿ ಸಾವಿನ ಪ್ರಕರಣದ Timeline]
ಎಂ.ಕೆ.ಗಣಪತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 'ನನಗೆ ಮುಂದೆ ಏನಾದರೂ ಆದರೆ ಅದಕ್ಕೆ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರೇ ಕಾರಣ' ಎಂದು ಹೇಳಿದ್ದರು.[ಗಣಪತಿ ಆತ್ಮಹತ್ಯೆ : ಐಜಿಪಿ ಪ್ರಣಬ್ ಮೊಹಾಂತಿ ಹೇಳಿದ್ದೇನು?]
ಎಂ.ಕೆ.ಗಣಪತಿ ಪುತ್ರ ನೇಹಾಲ್ ಸಲ್ಲಿಸಿದ್ದ ಖಾಸಗಿ ದೂರಿನ ಅನ್ವಯ ಎಫ್ಐಆರ್ ದಾಖಲು ಮಾಡುವಂತೆ ಮಡಿಕೇರಿ ಕೋರ್ಟ್ ಪೊಲೀಸರಿಗೆ ಆದೇಶ ನೀಡಿತ್ತು. ಮಡಿಕೇರಿ ನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದರು. ಬಳಿಕ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿತ್ತು.[ಗಣಪತಿ ಆತ್ಮಹತ್ಯೆ, ಸಿಬಿಐ ತನಿಖೆಗಾಗಿ ಅರ್ಜಿ]