ದುಸ್ಥಿತಿಯಲ್ಲಿ ಹಾರಂಗಿ ನಾಲೆ: ಮೈಸೂರು-ಹಾಸನ ರೈತರಲ್ಲಿ ಆತಂಕ
ಮಡಿಕೇರಿ, ಆಗಸ್ಟ್ 30: ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನಾಲೆಗಳಿಗೆ ಬಿಡಲಾಗುತ್ತಿದೆ. ಆದರೆ ನಾಲೆಗಳು ದುಸ್ಥಿತಿಯಲ್ಲಿರುವ ಕಾರಣದಿಂದ ನೀರು ಸಮರ್ಪಕವಾಗಿ ತಲುಪುತ್ತಿಲ್ಲ ಹಾಗೂ ಒಡೆದು ಹಾನಿಯಾಗುವ ಭಯ ರೈತರನ್ನು ಕಾಡುತ್ತಿದೆ.
ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ನಾಲೆಗಳನ್ನು ಪರಿಶೀಲಿಸಿ ದುಸ್ಥಿತಿಯಲ್ಲಿದ್ದರೆ ಅವುಗಳನ್ನು ದುರಸ್ತಿ ಪಡಿಸುವ ಕೆಲಸ ಮಾಡಬೇಕು. ಆದರೆ ಅದ್ಯಾವುದನ್ನು ಮಾಡದ ಕಾರಣದಿಂದಾಗಿ ಈಗ ರೈತರು ಆತಂಕ ಪಡುವಂತಾಗಿದೆ.

ಹಾಗೆನೋಡಿದರೆ ಹಾರಂಗಿ ಜಲಾಶಯ ಕೊಡಗಿನಲ್ಲಿ ಇದ್ದರೂ ಇದರಿಂದ ಹೆಚ್ಚಿನ ಅನುಕೂಲ ಪಡೆಯುತ್ತಿರುವವರು ಮೈಸೂರು ಮತ್ತು ಹಾಸನ ಜಿಲ್ಲೆಯ ರೈತರು. ಈ ರೈತರ ಕೃಷಿಭೂಮಿಗೆ ಹರಿಸಲು ನಿರ್ಮಿಸಿದ ಕಾಲುವೆಗಳು ಇದೀಗ ಅಲ್ಲಲ್ಲಿ ದುಸ್ಥಿತಿಗೀಡಾಗಿದ್ದು, ಕೆಲವೆಡೆ ಮರಳಿನ ಮೂಟೆಯನ್ನಿಟ್ಟು ರಕ್ಷಣೆ ಮಾಡಲಾಗಿದೆ.
ಹಾರಂಗಿ ಮುಖ್ಯ ನಾಲೆಯು, ಅಣೆಕಟ್ಟೆಯ ಒಂದು ಕಿ.ಮೀ. ಅಂತರದಲ್ಲಿರುವ ಮಾವಿನ ಹಳ್ಳದ ಸಮೀಪದ ತಿರುವಿನಲ್ಲಿ ಈಗಾಗಲೇ ಬಿರುಕುಗೊಂಡಿದೆ. ನಾಲೆಗೆ 1200 ಕ್ಯೂಸೆಕ್ಸ್ ಗಿಂತಲೂ ಹೆಚ್ಚು ನೀರು ಹರಿದು ಬರುತ್ತಿರುವುದರಿಂದ ನೀರಿನ ಒತ್ತಡಕ್ಕೆ ನಾಲೆ ಒಡೆಯುವ ಭಯವೂ ಇಲ್ಲದಿಲ್ಲ. ಒಂದು ವೇಳೆ ನಾಲೆ ಒಡೆದರೆ ಅದರಿಂದಾಗುವ ನಷ್ಟ ಹೇಳತೀರದ್ದಾಗಲಿದೆ.
ಮುಖ್ಯ ನಾಲೆಯ ಮೂಲಕ ಕಣಿವೆಯ ವರೆಗೆ ಹರಿಯುವ ನೀರು ತದನಂತರ ಎಡದಂಡೆ ಮತ್ತು ಬಲದಂಡೆ ನಾಲೆಗಳಾಗಿ ಮಾರ್ಪಟ್ಟಿದೆ. ನಾಲೆಯ ನಿರ್ಮಾಣದ ಸಂದರ್ಭ ಹಾರಂಗಿ ಅಣೆಕಟ್ಟೆಯ ಸಮೀಪದ ಮಾವಿನ ಹಳ್ಳದ ತಗ್ಗು ಪ್ರದೇಶದಲ್ಲಿ ನೀರು ಹರಿಯಲು ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಅಚ್ಚುಕಟ್ಟು ಪ್ರದೇಶಗಳು ಹೆಚ್ಚಾದಂತೆ ಅಣೆಕಟ್ಟೆಯಿಂದ ಮುಖ್ಯನಾಲೆಯಲ್ಲಿ ಹೆಚ್ಚು ನೀರು ಹರಿಸಲಾಗುತ್ತಿದೆ. ನಾಲೆಯ ಸೇತುವೆಯು ಕಿರಿದಾಗಿದ್ದು, ನೀರಿನ ಒತ್ತಡದಿಂದ ಹಿಂಬದಿಯ ಸೆಳೆತ ಹಾಗೂ ತಿರುವಿನ ಸ್ಥಳವಾಗಿರುವುದರಿಂದ ಬಿರುಕು ಬಿಟ್ಟಿದ್ದು, ನೀರು ಸೋರಿಕೆಯಾಗುತ್ತಿರುವುದು ಕಂಡುಬರುತ್ತಿದೆ.
ಅಣೆಕಟ್ಟೆಯ ಅನುದಾನದಲ್ಲಿ ಕಳೆದ ವರ್ಷವಷ್ಟೆ ಈ ಸ್ಥಳಕ್ಕೆ ನಾಲೆಯ ತಳದ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಆದರೆ, ಇಕ್ಕೆಲಗಳ ಕಾಮಗಾರಿಯನ್ನು ಮಾಡದೆ ಇರುವ ಕಾರಣದಿಂದ ನೀರು ಸೋರುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ.
1994ರಲ್ಲಿ ನಾಲೆಯು ಒಡೆದುಹೋಗಿ ನೂರಾರು ಎಕರೆಯಲ್ಲಿ ಬೆಳೆದ ಬೆಳೆ ನಷ್ಟವಾಗಿ ಸಮೀಪದಲ್ಲಿದ್ದ ರೈತರ ಮನೆಗಳಿಗೂ ಸಹ ಅಪಾಯ ಎದುರಾದ ಇತಿಹಾಸವೂ ನಮ್ಮ ಮುಂದಿದೆ ಹೀಗಿರುವಾಗ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತಿದೆ.
ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ನಾಲೆಗಳನ್ನು ಸದಾ ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡರೆ ಮುಂದೆ ಆಗುವ ಅನಾಹುತವನ್ನು ತಪ್ಪಿಸಬಹುದೇನೋ?












Click it and Unblock the Notifications