ತಲಕಾವೇರಿ ತೀರ್ಥೋದ್ಭವ; ಹೊರಗಿನಿಂದ ಬಂದವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ
ಮಡಿಕೇರಿ, ಅಕ್ಟೋಬರ್ 10: ಅಕ್ಟೋಬರ್ 17ರಂದು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ನಡೆಯಲಿರುವ ಕಾವೇರಿ ಪವಿತ್ರ ತೀರ್ಥೋದ್ಭವವನ್ನು ವೀಕ್ಷಿಸಲು ಹೊರಜಿಲ್ಲೆ ಮತ್ತು ಹೊರರಾಜ್ಯದಿಂದ ಬರುವ ಭಕ್ತಾದಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.
ಕೊರೊನಾ ನೆಗೆಟಿವ್ ವರದಿಯಿದ್ದರೆ ಮಾತ್ರ ಕ್ಷೇತ್ರದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಿರುವುದಾಗಿ ಬೋಪಯ್ಯ ಮಾಹಿತಿ ನೀಡಿದರು. ಸ್ಥಳೀಯರು ಕೂಡ ತೀರ್ಥೋದ್ಭವ ಸಂದರ್ಭ ಆದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜನದಟ್ಟಣೆಗೆ ಅವಕಾಶವಿಲ್ಲದಂತೆ ತೀರ್ಥೋದ್ಭವಕ್ಕೆ ಅವಕಾಶ ನೀಡಲಾಗುತ್ತದೆ ಎಂದೂ ಹೇಳಿದರು.
ಪೂಜಾ ವಿಧಿವಿಧಾನಗಳು, ಕಾವೇರಿ ಕ್ಷೇತ್ರದ ಸಂಪ್ರದಾಯಗಳಿಗೆ ಕಿಂಚಿತ್ತೂ ಚ್ಯುತಿ ಬಾರದಂತೆ ತೀರ್ಥೋದ್ಭವ ಸಂದರ್ಭ ಎಲ್ಲಾ ರೀತಿಯ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಭಕ್ತಾದಿಗಳ ಆರೋಗ್ಯ ಹಿತರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದರು.

ಕಾವೇರಿ ಕ್ಷೇತ್ರಕ್ಕೆ ಬಂದವರಿಂದ ಕೊರೊನಾ ಸೋಂಕು ವ್ಯಾಪಿಸದಂತೆ, ಯಾವುದೇ ಸಮಸ್ಯೆಗೆ ಕಾರಣವಾಗದಂತೆ ಕ್ಷೇತ್ರದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಈ ಬಾರಿ ಜಿಲ್ಲಾಡಳಿತ ಹಾಗೂ ದೇವಾಲಯ ಸಮಿತಿ ವತಿಯಿಂದ ಕ್ರಮಗಳನ್ನು ಕೈಗೊಳ್ಳಲಿದೆ. ಜನರು ಕೂಡ ಸಹಕರಿಸಬೇಕು ಎಂದು ಬೋಪಯ್ಯ ಮನವಿ ಮಾಡಿಕೊಂಡರು.
ಕೊಡಗಿನ ಕೋವಿಡ್ ಪ್ರಕರಣಗಳು: ಕೊಡಗು ಜಿಲ್ಲೆಯಲ್ಲಿ ಒಟ್ಟು 3652 ಕೊರೊನಾ ಪ್ರಕರಣಗಳಿದ್ದು, 2886 ಮಂದಿ ಗುಣಮುಖರಾಗಿದ್ದಾರೆ. 713 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 53 ಮಂದಿ ಸಾವನ್ನಪ್ಪಿದ್ದಾರೆ.












Click it and Unblock the Notifications