ಸಿದ್ದರಾಮಯ್ಯ ವಚನ ಭ್ರಷ್ಟ: ಮಡಿಕೇರಿಯಲ್ಲಿ ವಿಶ್ವನಾಥ್ ವಾಗ್ದಾಳಿ
ಮಡಿಕೇರಿ, ಜುಲೈ 28: ಗಣಿಧಣಿಗಳ ವಿರುದ್ಧ ತೊಡೆತಟ್ಟಿ, 330 ಕಿಮೀ ಪಾದಯಾತ್ರೆ ನಡೆ,ಸಿ ಗಣಿಧಣಿಗಳನ್ನು ಜೈಲಿಗಟ್ಟಿ, ರಾಜ್ಯದ ಬೊಕ್ಕಸ ತುಂಬುತ್ತೇನೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಜನರಿಗೆ ಕೊಟ್ಟ ವಚನವನ್ನು ಮರೆತಿದೆ ಎಂದು ಮಾಜಿ ಸಂಸದ, ಜೆಡಿಎಸ್ ಮುಖಂಡ ಅಡಗೂರು ವಿಶ್ವನಾಥ್ ಹರಿಹಾಯ್ದಿದ್ದಾರೆ.
ಮಡಿಕೇರಿಯಲ್ಲಿ ಅಸ್ತಿತ್ವ ಕಂಡುಕೊಳ್ಳಲು ಜೆಡಿಎಸ್ ಹರಸಾಹಸ
ಮಡಿಕೇರಿಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಮತ್ತು ಜೆಡಿಎಸ್ ಗೆ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತಮ್ಮ ಭಾಷಣದುದ್ದಕ್ಕೂ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದರು. ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 12 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದ್ದು, ಮೂರು ಜಿಲ್ಲೆಗೆ ಅನುದಾನ ವಿನಿಯೋಗವಾಗ ಬೇಕಾಗಿದೆ. ಆದರೆ ಮುಖ್ಯಮಂತ್ರಿಗಳಿಗೆ ಯೋಜನೆ ತಯಾರು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ರಹಿತ ಹಾಗೂ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರವನ್ನು ಹೊದ್ದು ಮಲಗಿದೆ. ಕೃಷ್ಣಾ, ತುಂಗಾ ಹಾಗೂ ಕಾವೇರಿ ಸೇರಿದಂತೆ ಕನ್ನಡ ನಾಡಿನ ನದಿಗಳ ರಕ್ಷಣೆಯಾಗುತ್ತಿಲ್ಲ ಎಂದು ದೂರಿದರು.
ಮಾಜಿ ಸಚಿವ, ಜೆಡಿಎಸ್ ನ ಜೀವಿಜಯ 'ಕೈ' ಹಿಡಿಯೋದು ವದಂತಿಯಂತೆ!
ಕರ್ನಾಟಕದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷಗಳ ಅಗತ್ಯತೆಯಿದ್ದು, ಇದೀಗ ಕಾಂಗ್ರೆಸ್ ಪಥದಿಂದ ಕುಮಾರ ಪಥದತ್ತ ನಡೆಯಬೇಕಾಗಿದೆ. ತನ್ನ ಝಂಡಾ ಬದಲಾಗಿದ್ದರೂ ಅಜೆಂಡಾ ಬದಲಾಗಿಲ್ಲ. ರಾಜಕಾರಣ ನಿಂತ ನೀರಲ್ಲ. ಭಾರತದ ರಾಜಕಾರಣ ಜಂಗಮ. ಸುದೀರ್ಘ 40 ವರ್ಷಗಳ ಯಾತ್ರೆ ಮಾಡಿದ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದೇನೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ. ಆ ನಿಟ್ಟಿನಲ್ಲಿ ಮಡಿಕೇರಿ ಕ್ಷೇತ್ರದಿಂದ ಜೀವಿಜಯ ಅವರನ್ನು ಗೆಲ್ಲಿಸಲು ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಸಿದ್ದುಗೆ ಮಾನವೀಯತೆಯಿಲ್ಲ!
ಮಾಜಿ ಸಚಿವ ಹಾಗೂ ಜೆಡಿಎಸ್ ರಾಜ್ಯ ಮುಖಂಡ ಜಿ.ಟಿ. ದೇವೇಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನವೀಯತೆಯನ್ನು ಕಳೆದುಕೊಂಡಿದ್ದಾರೆ. ರಾಜ್ಯ ಸರಕಾರದಿಂದ ಮಾಡಿರುವ ಸಾಲಮನ್ನಾದಿಂದ ಎಷ್ಟು ರೈತರುಗಳಿಗೆ ಲಾಭವಾಗಿದೆ ಎಂದು ಪ್ರಶ್ನಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ 24 ಗಂಟೆಗಳಲ್ಲಿ ರೈತರ ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳ ಸಾಲಮನ್ನಾ ಮಾಡುವುದಾಗಿ ಹೇಳಿದರು.
ಜಾತಿ ಸಂಘರ್ಷಕ್ಕೆ ನಾಂದಿಹಾಡುತ್ತುದ್ದಾರೆ!
ಹಾರಂಗಿ ಅಣೆಕಟ್ಟು ತುಂಬಿದ್ದು, ರೈತರ ಉಪಯೋಗಕ್ಕಾಗಿ ನೀರು ಬಿಡಿ ಅಂದರೆ ಸರಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ. ಜಾತಿಗಳ ಮಧ್ಯೆ ಸಂಘರ್ಷವನ್ನು ತಂದು ಸಮಾಜವನ್ನು ಒಡೆಯುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಜಿ.ಟಿ.ದೇವೇಗೌಡ ಅವರು ದೂರಿದರು.
ಸಮಾಜ ಒಡೆಯುವ ಕೆಲಸ ಮಾಡಬಾರದು!
ಮಾಜಿ ಸಚಿವ ಬಿ.ಎ. ಜೀವಿಜಯ ಪ್ರಾಸ್ತಾವಿಕವಾಗಿ ಮಾತನಾಡಿ ರಾಜಕಾರಣ ನಿಂತ ನೀರಲ್ಲ. ರಾಜಕೀಯ ತಿರುವು ಸಹಜ. ರಾಜಕಾರಣದಲ್ಲಿ ಸಾಮಾಜಿಕ ನ್ಯಾಯ, ಸರ್ವಜನರ ಸೇವೆ ಮಾಡುವ ಉದ್ದೇಶ ಹೊಂದಿರಬೇಕು. ಅಧಿಕಾರ ಶಾಶ್ವತವಲ್ಲ. ಸಮಾಜವನ್ನು ಒಡೆಯುವ ಕೆಲಸವನ್ನು ಯಾರೂ ಮಾಡಬಾರದು ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಟುಕಿದರು.
ಉಪಸ್ಥಿತ ಗಣ್ಯರು
ಮಾಜಿ ಶಾಸಕ ಹೆಚ್.ಡಿ. ಬಸವರಾಜು ಹಾಗೂ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ವಿ.ಎಂ. ವಿಜಯ, ಜಿಲ್ಲಾ ಉಸ್ತುವಾರಿ ವೀಕ್ಷಕರಾದ ಬಸವರಾಜು, ಮಾಜಿ ಜಿಲ್ಲಾಧ್ಯಕ್ಷ ಭರತ್ ಕುಮಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮನ್ಸೂರ್ ಆಲಿ, ಜಿ.ಪಂ. ಸದಸ್ಯ ಪುಟ್ಟರಾಜು, ಮುಖಂಡರಾದ ಬೆಳ್ಯಪ್ಪ, ಕಾರ್ಮಾಡು ಸುಬ್ಬಣ್ಣ, ದಯಾಚಂಗಪ್ಪ, ಶರೀಫ್, ನಗರಸಭಾ ಸದಸ್ಯೆ ಸಂಗೀತ ಪ್ರಸನ್ನ, ಮಾಜಿ ಜಿ.ಪಂ. ಅಧ್ಯಕ್ಷೆ ಹೆಚ್.ಬಿ. ಜಯಮ್ಮ ಹಾಗೂ ಇನ್ನಿತರರು ಇದ್ದರು.