ಹಿರಿತನಕ್ಕೆ ಗೌರವ ಸಿಕ್ಕಿಲ್ಲ: ಶಾಸಕ ಅಪ್ಪಚ್ಚು ರಂಜನ್ ಅಪಸ್ವರ
ಕೊಡಗು, ಫೆಬ್ರವರಿ 08: ಸಂಪುಟ ವಿಸ್ತರಣೆ ನಂತರ ಬಿಜೆಪಿಯಲ್ಲಿ ಅಪಸ್ವರ ನಿಧಾನಕ್ಕೆ ಮುನ್ನೆಲೆಗೆ ಬರುತ್ತಿದೆ. ಒಬ್ಬೊಬ್ಬರಾಗಿ ಹಿರಿಯ ಶಾಸಕರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಜಿ.ಎಚ್.ತಿಪ್ಪಾರೆಡ್ಡಿ ಮೊದಲಿಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ನಂತರ ಅರವಿಂದ ಲಿಂಬಾವಳಿ ಈಗ ಈ ಪಟ್ಟಿಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸೇರ್ಪಡೆ ಆಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅಪ್ಪಚ್ಚು ರಂಜನ್, 'ಸಂಪುಟ ವಿಸ್ತರಣೆಯಲ್ಲಿ ಕೊಡಗು ಜಿಲ್ಲೆಯನ್ನು ಕಡೆಗಣಿಸಲಾಗಿದೆ. ನಾನು ಐದು ಬಾರಿ ಗೆದ್ದು ಶಾಸಕನಾಗಿದ್ದೇನೆ, ಹಿರಿತನಕ್ಕೆ ಗೌರವ ನೀಡಿಲ್ಲ' ಎಂದಿದ್ದಾರೆ.

'ಸಂಪುಟದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಶಾಸಕರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಸಾಮಾಜಿಕ ನ್ಯಾಯವನ್ನು ಸರ್ಕಾರ ಪಾಲಿಸಿಲ್ಲ. ಪಕ್ಷದ ಹಿರಿಯರನ್ನು ಬಿಜೆಪಿ ಮುಖಂಡರು ಕಡೆಗಣಿಸಿದ್ದಾರೆ' ಎಂದು ಅಪ್ಪಚ್ಚು ರಂಜನ್ ಹೇಳಿದ್ದಾರೆ.
'ಜಿಲ್ಲೆಯ ಜನರು ಬೀದಿಗಿಳಿದು ಹೋರಾಟ ಮುಂದಾಗಿದ್ದಾರೆ. ಆದರೆ ನಾನೇ ಅವರನ್ನು ತಡೆಯುತ್ತಿದ್ದೇನೆ. ಕೊಡಗಿನ ಜನ ಶಾಂತಿಪ್ರಿಯರು ಅವರಿಗೆ ಅನ್ಯಾಯ ಮಾಡುವುದು ಬೇಡ' ಎಂದು ಎಚ್ಚರಿಕೆಯನ್ನೂ ಅಪ್ಪಚ್ಚು ರಂಜನ್ ನೀಡಿದ್ದಾರೆ.
'ಹೊರಗಿನಿಂದ ಕೆಲವು ಮಂದಿ ಬಿಜೆಪಿಗೆ ಬಂದಿದ್ದರಿಂದಲೇ ಸರ್ಕಾರ ಬಂದಿರುವುದು ನಿಜ. ಆದರೆ ಈ ಬಾರಿ ಹಿರಿಯರಿಗೆ ಅವಕಾಶ ಕೊಡಬೇಕಿತ್ತು. ಜಿಲ್ಲಾ ಪ್ರಾತಿನಿಧ್ಯಕ್ಕೂ ಆದ್ಯತೆ ಕೊಡಬೇಕಿತ್ತು. ಮುಂದಿನ ಬಾರಿಯಾದರೂ ಇದು ಸರಿಹೋಗಬೇಕು ಇಲ್ಲವಾದರೆ ಅವರವರ ದಾರಿ ಅವರು ನೋಡಿಕೊಳ್ಳುತ್ತಾರೆ' ಎಂದು ಪರೋಕ್ಷವಾಗಿ ಎಚ್ಚರಿಕೆಯನ್ನೂ ನೀಡಿದರು.
'ಬಿಜೆಪಿಯ ತತ್ವ ಆದರ್ಶ ಉಳಿಯಬೇಕು, ಮುಂದೆಯೂ ನಮ್ಮದೇ ಸರ್ಕಾರ ಆಡಳಿತಕ್ಕೆ ಬರಬೇಕು ಎಂದರೆ ಬಿಜೆಪಿಯು ತನ್ನ ಹಿರಿಯ ಶಾಸಕರಿಗೆ ಆದ್ಯತೆ ನೀಡಬೇಕು' ಎಂದು ಅವರು ಹೇಳಿದರು.
ಸಂಪುಟ ವಿಸ್ತರಣೆ ನಂತರ ಬಿಜೆಪಿಯಲ್ಲಿ ಬಂಡಾಯಣದ ಸಣ್ಣ ಅಲೆ ಎದ್ದಿದ್ದು, ಉಮೇಶ್ ಕತ್ತಿ ಈಗಾಗಲೇ ಯಾರ ಸಂಪರ್ಕಕ್ಕೂ ಸಿಗದಂತಾಗಿದ್ದಾರೆ. ತಿಪ್ಪಾರೆಡ್ಡಿ, ಅರವಿಂದ ಲಿಂಬಾವಳಿ, ರೇಣುಕಾಚಾರ್ಯ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications