ಕೊಡಗಿನಲ್ಲಿ ಟಿ.ಪಿ.ರಮೇಶ್ ‘ಕೈ’ ಹಿಡಿಯದ ನಾಯಕರು
ಮಡಿಕೇರಿ, ಆಗಸ್ಟ್ 21: ಪ್ರಭಾರಿ ಡಿಸಿಸಿ ಮಾಜಿ ಅಧ್ಯಕ್ಷ, ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಅರುವತ್ತಕ್ಕೆ ಅರಳು ಮರಳೋ ಎಂಬಂತೆ ಜಿಲ್ಲಾಡಳಿತ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಕೈಸವರಿ ತಮ್ಮ ರಾಜಕೀಯ ಬದುಕಿಗೆ ಗಂಡಾಂತರ ತಂದುಕೊಂಡಿದ್ದಾರೆ.
ಈ ಹಿಂದೆ ಟಿ.ಪಿ.ರಮೇಶ್ ಅವರ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತಿದ್ದ ಬಹುತೇಕ ಕಾಂಗ್ರೆಸ್ ಮುಖಂಡರು ಇದನ್ನೇ ಪ್ರಮುಖ ಅಸ್ತ್ರವನ್ನಾಗಿಟ್ಟುಕೊಂಡು ರಾಜಕೀಯವಾಗಿ ತುಳಿಯಲು ಏನೆಲ್ಲ ಮಾಡಬಹುದೋ ಅದನ್ನೆಲ್ಲ ತೆರೆಮರೆಯಲ್ಲಿ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

ಇಷ್ಟಕ್ಕೂ ಟಿ.ಪಿ.ರಮೇಶ್ ಮೂಲ ಕಾಂಗ್ರೆಸ್ಸಿಗರಲ್ಲ. ಜನತಾ ಪರಿವಾರದಿಂದ ಬಂದವರು. ಜನತಾದಳ ಅಧಿಕಾರದಲ್ಲಿದ್ದ ಕಾಲದಲ್ಲಿ ನಿಗಮ ಮಂಡಳಿಗೆ ಅಧ್ಯಕ್ಷರಾಗಿದ್ದರು. ಜನತಾದಳ ಒಡೆದು ಹೋಳಾಗುತ್ತಿದ್ದಂತೆಯೇ ಕಾಂಗ್ರೆಸ್ಗೆ ಸೇರಿ ರಾಜಕೀಯ ಭವಿಷ್ಯವನ್ನು ಗಟ್ಟಿ ಮಾಡಿಕೊಂಡಿದ್ದರು. ಈ ನಡುವೆ ಅವರಿಗೆ ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದಾಗ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಅಸಮಾಧಾನವಾಗಿತ್ತು.
ದಿವಂಗತ ಬಿ.ಟಿ.ಪ್ರದೀಪ್ ಅವರು ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪ್ರಭಾರಿ ಅಧ್ಯಕ್ಷರಾಗಿದ್ದ ರಮೇಶ್ ಕೆಲವು ಮುಖಂಡರಿಂದ ಸಹಿ ಪಡೆದು ತಾವೇ ಡಿಸಿಸಿ ಅಧ್ಯಕ್ಷರಾಗಲು ಹವಣಿಸಿದ್ದರು. ಇದನ್ನರಿತ ಕೆಲವು ಮುಖಂಡರು ತಿರುಗಿಬಿದ್ದರು. ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಯಿತು. ಕೆ.ಎಂ.ಗಣೇಶ್ ಸೇರಿದಂತೆ ಹಲವರು ಪಕ್ಷದಿಂದ ಹೊರಗೆ ಹೋದರು.
ಇನ್ನು ಹೀಗೆಯೇ ಬಿಟ್ಟರೆ ಕಷ್ಟ ಎಂದರಿತ ಕೆಪಿಸಿಸಿ ನಾಯಕರು ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶಿವುಮಾದಪ್ಪ ಅವರನ್ನು ನೇಮಕ ಮಾಡಿ ಒಂದಷ್ಟು ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಇನ್ನು ವೀಣಾ ಅಚ್ಚಯ್ಯ ಕೈಸವರಿದ ಘಟನೆ ನಡೆದ ಬೆನ್ನಿಗೆ ಕಾಂಗ್ರೆಸ್ ಮುಖಂಡರು ರಮೇಶ್ ರನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ಮಾಡಲೇ ಇಲ್ಲ. ಬದಲಿಗೆ ಬಹಿರಂಗವಾಗಿಯೇ ಖಂಡಿಸಿದರು. ಇದು ಜಿಲ್ಲಾ ಕಾಂಗ್ರೆಸ್ನಲ್ಲಿ ಟಿ.ಪಿ.ರಮೇಶ್ ಮೇಲೆ ಇರುವ ಅಸಮಾಧಾನಕ್ಕೆ ಸಾಕ್ಷಿಯಾಗಿದೆ.
ಈ ನಡುವೆ ಡಿಸಿಸಿ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರಮುಖ ಮುಖಂಡರು ಪಾಲ್ಗೊಂಡಿದ್ದ ಸಭೆಯಲ್ಲಿ ಟಿ.ಪಿ.ರಮೇಶ್ ಅವರ ವರ್ತನೆಯನ್ನು ಖಂಡಿಸಲಾಗಿದೆ. ಅಷ್ಟೇ ಅಲ್ಲದೆ ಸ್ವತಃ ವೀಣಾ ಅಚ್ಚಯ್ಯ ಅವರೇ ತನಗೆ ಮುಜುಗರ ತಂದಿರುವುದಾಗಿ ಹೇಳಿಕೆ ನೀಡಿದ್ದಾರೆ. ಇನ್ನು ಈ ವಿಚಾರಕ್ಕೆ ನಡೆಯುತ್ತಿರುವ ಪ್ರತಿಭಟನೆ, ಖಂಡನಾ ಹೇಳಿಕೆಗಳನ್ನು ಗಮನಿಸಿದರೆ ಅದರಲ್ಲಿ ಕಾಂಗ್ರೆಸ್ನವರು ಇರುವುದು ಅಚ್ಚರಿ ಮೂಡಿಸಿದೆ.
ಕಾಂಗ್ರೆಸ್ ನಾಯಕರೇ ಅಸಮಾಧಾನ ವ್ಯಕ್ತಪಡಿಸುತ್ತಿರುವುದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ನಲ್ಲಿ ಟಿ.ಪಿ.ರಮೇಶ್ ಅವರಿಗೆ ಭವಿಷ್ಯ ಇಲ್ಲ ಎಂಬುದು ಮನದಟ್ಟಾಗುತ್ತಿದೆ. ಆದರೆ ಟಿ.ಪಿ.ರಮೇಶ್ ಮಾತ್ರ ಇತ್ತೀಚೆಗೆ ಪ್ರಕೃತಿ ಚಿಕಿತ್ಸೆ ಪಡೆದುಕೊಂಡು ಬಂದು ಆ ಬಗ್ಗೆ ವೀಣಾ ಅವರಲ್ಲಿ ಪ್ರಸ್ತಾಪಿಸುತ್ತಿದ್ದ ಸಂದರ್ಭ ಕೈ ಸವರಿರುವದಾಗಿಯೂ, ಅದರಲ್ಲಿ ಯಾವುದೇ ಕೆಟ್ಟ ಚಿಂತನೆ ಇರಲಿಲ್ಲವೆಂದೂ ತಿಪ್ಪೆ ಸಾರಿಸುವ ಮಾತನಾಡಿದ್ದಾರೆ. ಆದರೆ ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ ಜಿಲ್ಲೆಯ ಹಲವು ಸಂಘಟನೆಗಳು ಮತ್ತು ಬಿಜೆಪಿ ಪಕ್ಷ ಪ್ರತಿಭಟನೆ ನಡೆಸುತ್ತಿದೆ.
ಕಾಂಗ್ರೆಸ್ಸಿನ ರಾಜೀವ್ಗಾಂಧಿ ಗ್ರಾಮೀಣ ಅಭಿವೃದ್ಧಿ ಯೋಜನಾ ಸಂಚಾಲಕ ತೆನ್ನಿರ ಮೈನಾ, ಮಕ್ಕಂದೂರು ಕೊಡವ ಸಮಾಜ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹಾಗೂ ಅಲ್ಲಿನ ಪ್ರಮುಖ ಶಾಂತೆಯಂಡ ರವಿ ಕುಶಾಲಪ್ಪ, ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟೀರ ಚಿಣ್ಣಪ್ಪ, ಕೊಡವ ಪೊಮ್ಮಕ್ಕಡ ಒಕ್ಕೂಟದ ಕವಿತಾ ಬೊಳ್ಯಪ್ಪ ಹಾಗೂ ಪೊನ್ನಂಪೇಟೆ ಸಮಾಜದ ಪ್ರತಿನಿಧಿ ಎಂ.ಎಂ. ರವೀಂದ್ರ ಅವರುಗಳು ರಮೇಶ್ ವರ್ತನೆ ಖಂಡಿಸಿ ಮಾತನಾಡಿದ್ದಾರೆ.
ಇದು ಬಿಜೆಪಿಗೆ ಮುಂದಿನ ಚುನಾವಣೆಗೆ ಅಸ್ತ್ರವಾಗಿ ದೊರೆತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ತಮ್ಮದೇ ಪಕ್ಷದ ನಾಯಕ ಟಿ.ಪಿ.ರಮೇಶ್ ಅವರನ್ನು ಸಮರ್ಥಿಸಿಕೊಳ್ಳಲಾಗದೆ ಪರದಾಡುವಂತಾಗಿದೆ. ಇಷ್ಟಕ್ಕೂ ಟಿ.ಪಿ.ರಮೇಶ್ ಹತ್ತು ಹಲವು ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಜಿಲ್ಲೆಯಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಇಷ್ಟುವರೆಗಿನ ಅವರ ರಾಜಕೀಯ ಸೇವೆಗೆ ಇದೀಗ ಮಸಿ ಎರಚಿಕೊಂಡಿದ್ದಾರೆ. ಮುಂದೇನಾಗುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications