ಕೊಡಗಿನಲ್ಲಿ ಕಾಡು ಕುರಿ ಎಂದುಕೊಂಡು ತನ್ನ ಜೊತೆಯಲ್ಲಿ ಬಂದವನಿಗೆ ಗುಂಡಿಕ್ಕಿದ!
ಮಡಿಕೇರಿ, ಅಕ್ಟೋಬರ್.23: ಕೊಡಗಿನಲ್ಲಿ ಇನ್ನೂ ಕೂಡ ಬೇಟೆ ಜೀವಂತವಾಗಿರುವುದಕ್ಕೆ ವ್ಯಕ್ತಿಯೊಬ್ಬರು ಗುಂಡೇಟಿಗೆ ಬಲಿಯಾಗಿರುವುದು ಸಾಕ್ಷಿಯಾಗಿದೆ.
ಅಯ್ಯಕುಟ್ಟೀರ ರಂಜಿತ್ ಮಾಚಯ್ಯ(31) ಎಂಬಾತ ಗುಂಡೇಟಿಗೆ ಬಲಿಯಾಗಿದ್ದು, ಈತನಿಗೆ ಕಾಡೇಮಾಡ ದಿನೇಶ್ ಎಂಬಾತ ಕಾಡುಕುರಿ ಎಂದು ಭಾವಿಸಿ ಗುಂಡು ಹಾರಿಸಿದ್ದು ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕೊಡಗಿನಲ್ಲಿ ಹೆಚ್ಚಿನವರು ಕೋವಿಯನ್ನು ಹೊಂದಿದ್ದು, ಈ ಪೈಕಿ ಕೆಲವರು ಅಕ್ರಮವಾಗಿ ಬೇಟೆಯಾಡುತ್ತಿದ್ದು, ಅದು ಏನಾದರೂ ದುರ್ಘಟನೆ ನಡೆದಾಗ ಮಾತ್ರ ಬೆಳಕಿಗೆ ಬರುತ್ತಿದೆ. ಇದೀಗ ವ್ಯಕ್ತಿಯೊಬ್ಬರು ಗುಂಡೇಟಿಗೆ ಬಲಿಯಾಗಿದ್ದು, ಇದಕ್ಕೆ ಕಾಡು ಕುರಿ ಎಂದು ಭಾವಿಸಿ ಗುಂಡು ಹಾರಿಸಿದ್ದೇ ಕಾರಣ ಎಂದು ಹೇಳಲಾಗುತ್ತಿದೆ.

ಕೆಲವರು ಜೊತೆಯಾಗಿ ಬೇಟೆಗೆ ಹೋಗುವುದು ಇಲ್ಲಿ ಸಾಮಾನ್ಯವಾಗಿದ್ದು, ಅದರಂತೆ ಎಮ್ಮೆತ್ತಾಳು ಗ್ರಾಮದ ನಿವಾಸಿಗಳಾದ ಅಯ್ಯಕುಟ್ಟೀರ ರಂಜಿತ್ ಮಾಚಯ್ಯ ಮತ್ತು ಗ್ರಾಮದ ಕಾಡೇಮಾಡ ದಿನೇಶ್ ಎಂಬಿಬ್ಬರು ತಮ್ಮ ಮನೆ ಬಳಿಯಿರುವ ಕಾಡಿಗೆ ಬೇಟೆಗೆ ರಾತ್ರಿ ವೇಳೆ ಹೋಗಿದ್ದು, ಇಬ್ಬರು ಬಳಿಕ ಪ್ರತ್ಯೇಕವಾಗಿ ಕಾಡಿನಲ್ಲಿ ತೆರಳಿದ್ದಾರೆ.
ರಾತ್ರಿಯಾದ ಕಾರಣ ಶಬ್ದವಾದರೆ ಕಾಡು ಪ್ರಾಣಿಗಳು ಓಡಿ ಹೋಗಬಹುದೆಂದು ನಿಧಾನವಾಗಿ ಹೆಜ್ಜೆ ಹಾಕುತ್ತಾ ಸಾಗಿದ್ದಾರೆ. ಹೀಗೆ ಪ್ರತ್ಯೇಕವಾಗಿ ಹೋದ ವೇಳೆ ದಿಕ್ಕು ತಪ್ಪಿದ್ದು, ಈ ಸಂದರ್ಭ ರಂಜಿತ್ ಮಾಚಯ್ಯ ಕಾಡಿನಲ್ಲಿ ತೆರಳುತ್ತಿರುವುದು ಕಾಡೇಮಾಡ ದಿನೇಶ್ಗೆ ಗೊತ್ತಾಗಲಿಲ್ಲ.
ಜತೆಗೆ ನೀರವ ಮೌನವನ್ನು ಸೀಳಿ ಶಬ್ದ ಬಂದಿದ್ದನ್ನು ಗಮನಿಸಿದ ಬಹುಶಃ ಕಾಡು ಕುರಿಯೇ ಇರಬಹುದೆಂದು ಭಾವಿಸಿ ಶಬ್ದ ಬಂದ ಕಡೆಗೆ ಗುಂಡು ಹಾರಿಸಿದ್ದು, ಅದು ರಂಜಿತ್ ಮಾಚಯ್ಯನಿಗೆ ತಗುಲಿದೆ. ಆತ ಚೀರಿದ ಶಬ್ದ ಕೇಳಿ ಸ್ಥಳಕ್ಕೆ ತೆರಳಿ ನೋಡಿದ ದಿನೇಶ್ಗೆ ತಾನು ಗುಂಡು ಹಾರಿಸಿದ್ದು ರಂಜಿತ್ ಮಾಚಯ್ಯಗೆ ಎನ್ನುವುದು ಅರಿವಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಆರೋಪಿ ದಿನೇಶ್ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications