ಮಡಿಕೇರಿ: ಕಾಡಾನೆ ದಾಳಿಯಿಂದ ಪರಿಸರ ಹೋರಾಟಗಾರನಿಗೆ ಗಾಯ
ಮಡಿಕೇರಿ, ನವೆಂಬರ್ 4: ಮಡಿಕೇರಿ ಸಮೀಪದ ಗೋಣಿಕೊಪ್ಪಲು ಬಳಿಯ ಅತ್ತೂರಿನಲ್ಲಿ ಬುಧವಾರ (ನ.4) ಬೆಳಿಗ್ಗೆ ಕಾಡಾನೆಯೊಂದು ನಡೆಸಿದ ದಾಳಿಯಿಂದ ಪರಿಸರ ಹೋರಾಟಗಾರ, ನಿವೃತ್ತ ಕರ್ನಲ್ ಚೆಪ್ಪುಡೀರ ಮುತ್ತಣ್ಣ ಅವರು ಗಾಯಗೊಂಡಿದ್ದಾರೆ.
ಪರಿಸರ ಹೋರಾಟಗಾರ ಮುತ್ತಣ್ಣ ಅವರು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯ ಪಕ್ಕದಲ್ಲಿರುವ ಕಾಫಿ ತೋಟಕ್ಕೆ ತೆರಳಿದ್ದರು. ಆಗ ಕಾಡಾನೆ ಕಂಡು ಓಡುವ ಭರದಲ್ಲಿ ಮುತ್ತಣ್ಣ ಕೆಳಗೆ ಬಿದ್ದಿದ್ದಾರೆ. ಕಾಡಾನೆಯು ಮುತಣ್ಣ ಅವರ ಕಾಲು ತುಳಿದು ಮುಂದಕ್ಕೆ ಸಾಗಿದೆ.
ಇದರಿಂದ ಮುತ್ತಣ್ಣ ಅವರ ಬಲಗಾಲಿಗೆ ತೀವ್ರ ನೋವಾಗಿದ್ದು, ತಕ್ಷಣ ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಕೊಡಗಿನ ಮಾಜಿ ಮುಖ್ಯಮಂತ್ರಿ ಸಿ.ಎಂ ಪೂಣಚ್ಚ ಅವರ ಮಗ ಆಗಿದ್ದು, ಕೂರ್ಗ್ ವೈಲ್ಡ್ಲೈಫ್ ಸೊಸೈಟಿಯ ಮಾಜಿ ಅಧ್ಯಕ್ಷ ಕೂಡಾ ಆಗಿದ್ದಾರೆ.
ಕೊಡಗಿನ ಪರಿಸರ ಉಳಿಯ ಬೇಕು, ಕಾಡಾನೆಗಳು ಸೇರಿದಂತೆ ವನ್ಯಜೀವಿಗಳ ಬದುಕಿಗೆ ತೊಂದರೆ ಆಗಬಾರದು ಎಂದು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಕಾಡಾನೆಗಳ ಬಗ್ಗೆ ಅಪಾರವಾದ ಪ್ರೀತಿ ಇಟ್ಟುಕೊಂಡಿರುವ ಮುತ್ತಣ್ಣ, ಅವರ ಮೇಲೆ ಕಾಡಾನೆ ದಾಳಿಯಿಂದ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications