ಕೊಡಗಿನಲ್ಲಿ ಅಲ್ಯುಮಿನಿಯಂ ಏಣಿಯಿಂದಾಗುತ್ತಿರುವ ಪ್ರಾಣ ಹಾನಿ ತಪ್ಪಿಸುವುದಾದರೂ ಹೇಗೆ?
ಮಡಿಕೇರಿ, ಮಾರ್ಚ್ 7: ಮೊನ್ನೆ ಮೊನ್ನೆಯಷ್ಟೇ ಕಾಳು ಮೆಣಸು ಕೊಯ್ಯಲು ಅಸ್ಸಾಂನಿಂದ ಕೊಡಗಿಗೆ ಬಂದಿದ್ದ ತಾಯಿ, ಮಗಳು ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದರು. ಕಾಳು ಮೆಣಸು ಕೊಯ್ಯಲು ಅಲ್ಯೂಮಿನಿಯಂ ಏಣಿ ಬಳಸಿದ್ದೇ ಈ ದುರಂತಕ್ಕೆ ಕಾರಣವಾಗಿತ್ತು.
ಕೊಡಗಿನಲ್ಲಿ ಅಲ್ಯುಮಿನಿಯಂ ಏಣಿಗಳು ಜನರ ಪ್ರಾಣಕ್ಕೆ ಕುತ್ತು ತರುತ್ತಲೇ ಇದ್ದು, ಪ್ರತಿ ವರ್ಷವೂ ಈ ಏಣಿಯಿಂದ ಒಂದಲ್ಲ ಒಂದು ರೀತಿ ಪ್ರಾಣ ಹಾನಿ ಸಂಭವಿಸುತ್ತಲೇ ಇದೆ. ಆದರೂ ತೋಟದ ಮಾಲೀಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಕಾರಣದಿಂದಾಗಿ ಕಾರ್ಮಿಕರು ಪ್ರಾಣ ಕಳೆದುಕೊಳ್ಳುವುದೂ ನಿಲ್ಲುತ್ತಿಲ್ಲ. ಇದಕ್ಕೆ ಪರಿಹಾರ ಏನು? ಹೀಗೆ ಅನ್ಯಾಯವಾಗಿ ಕಾರ್ಮಿಕರು ಸಾವನ್ನಪ್ಪುವುದನ್ನು ಹೇಗೆ ತಡೆಯಬಹುದು?

ಬಿದಿರಿನ ಬದಲು ಅಲ್ಯುಮಿನಿಯಂ ಏಣಿ ಬಳಕೆ
ಇದು ಕರಿಮೆಣಸು ಕೊಯ್ಲಿನ ಕಾಲ. ಹೆಮ್ಮರಗಳಲ್ಲಿ ಹಬ್ಬಿನಿಂತ ಬಳ್ಳಿಯಿಂದ ಕರಿಮೆಣಸು ಕೊಯ್ಲು ಮಾಡಲು ಏಣಿಗಳ ಅಗತ್ಯವಿದ್ದೇ ಇದೆ. ಹಿಂದೆ ಬಿದಿರಿನ ಏಣಿಗಳನ್ನು ಇದಕ್ಕೆ ಬಳಸಲಾಗುತ್ತಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಕಟ್ಟೆರೋಗದಿಂದ ಬಿದಿರು ಮಳೆಗಳು ನಾಶವಾದ ಹಿನ್ನೆಲೆಯಲ್ಲಿ ಬಿದಿರಿಗೆ ಕೊರತೆಯಾಯಿತು. ಇದೇ ವೇಳೆಗೆ ಮಾರುಕಟ್ಟೆಗೆ ಅಲ್ಯುಮಿನಿಯಂ ಏಣಿಗಳು ಬಂದವು. ಅವು ಹಗುರವಾಗಿರುವುದರಿಂದ ಮತ್ತು ಮಳೆ, ಬಿಸಿಲಿನ ಹೊಡೆತಕ್ಕೆ ಜಗ್ಗದೆ ಹೆಚ್ಚು ಬಾಳಿಕೆ ಬರುವುದರಿಂದ ತೋಟದ ಮಾಲೀಕರು ಅವುಗಳನ್ನು ಖರೀದಿಸಿ ತಮ್ಮ ಕೆಲಸ ಕಾರ್ಯಗಳಿಗೆ ಬಳಸತೊಡಗಿದರು.

5 ವರ್ಷಗಳಲ್ಲಿ 37ಕ್ಕೂ ಹೆಚ್ಚು ಮಂದಿ ಸಾವು
ಈ ನಡುವೆ ಕೆಲವು ತೋಟದ ನಡುವೆ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಅವುಗಳನ್ನು ಗಮನಿಸದೆ ಏಣಿಗಳನ್ನು ಕೆಲಸದ ನಿಮಿತ್ತ ಒಂದೆಡೆಯಿಂದ ಮತ್ತೊಂದೆಡೆಗೆ ಕೊಂಡೊಯ್ಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು ನೋವುಗಳು ಆಗ ತೊಡಗಿದವು. ಬಹುಶಃ ಆಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ತಮ್ಮ ತೋಟದಲ್ಲಿ ಕಾರ್ಮಿಕರ ಮೂಲಕ ಕೆಲಸ ಮಾಡಿಸುವಾಗ ಮಾಲೀಕರು ಮುಂಜಾಗ್ರತಾ ಕ್ರಮ ವಹಿಸದ ಕಾರಣದಿಂದಾಗಿ ಅಲ್ಲಲ್ಲಿ ಅವಘಡಗಳು ಸಂಭವಿಸತೊಡಗಿದವು. ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸುಮಾರು ಮೂವತ್ತೇಳಕ್ಕೂ ಹೆಚ್ಚು ಮಂದಿ ಅಲ್ಯುಮಿನಿಯಂ ಏಣಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಸಂಭವಿಸಿದ ಅವಘಡದಿಂದ ಸಾವನ್ನಪ್ಪಿದ್ದಾರೆ.

ಅಧಿಕಾರಿಗಳ ಸೂಚನೆಗೂ ಬಳಕೆ ತಗ್ಗಿಲ್ಲ
ಮೇಲಿಂದ ಮೇಲೆ ದುರಂತಗಳು ಸಂಭವಿಸುತ್ತಿದ್ದರೂ ಯಾರೂ ಇದರತ್ತ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಹೀಗಾಗಿಯೇ ಮತ್ತೆ, ಮತ್ತೆ ಕೊಡಗಿನಲ್ಲಿ ದುರಂತಗಳು ಸಂಭವಿಸುತ್ತಲೇ ಇವೆ. ಈ ಹಿಂದೆ ಅಧಿಕಾರಿಗಳು ಅಲ್ಯುಮಿನಿಯಂ ಏಣಿಗಳ ಬದಲಿಗೆ ಫೈಬರ್ ಅಥವಾ ಬಿದಿರು ಏಣಿಗಳನ್ನು ಬಳಸುವಂತೆ ಸೂಚಿಸಿದ್ದರೂ ತೋಟದ ಮಾಲೀಕರು ಕರಿಮೆಣಸು ಕೊಯ್ಲಿಗೆ, ಮರದ ಕೊಂಬೆಗಳನ್ನು ಕಡಿಯುವ ಸಲುವಾಗಿ ಮರ ಏರಲು ಅಲ್ಯುಮಿನಿಯಂ ಏಣಿಗಳನ್ನೇ ಬಳಸುತ್ತಿದ್ದಾರೆ. ಈ ವೇಳೆ ದೂರದಿಂದ ಬರುವ ಕಾರ್ಮಿಕರಿಗೆ ಅಲ್ಯುಮಿನಿಯಂ ಏಣಿಗಳ ಬಗ್ಗೆಯಾಗಲೀ, ತೋಟದ ನಡುವೆ ಹಾದು ಹೋಗಿರುವ ವಿದ್ಯುತ್ ತಂತಿಯ ಬಗ್ಗೆ ಮಾಹಿತಿ ನೀಡುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಕೆಲವೊಮ್ಮೆ ಕಾಫಿ ಗಿಡಗಳ ನಡುವೆ ತೆರಳುವಾಗ ವಿದ್ಯುತ್ ತಂತಿ ಹಾದು ಹೋಗಿರುವುದು ಗಮನಕ್ಕೆ ಬಾರದೆ ಏಣಿ ವಿದ್ಯುತ್ ತಂತಿಗೆ ತಗುಲಿ ಸಾವು ನೋವುಗಳಾಗುತ್ತಿವೆ.

ಫೈಬರ್, ಬಿದಿರಿನ ಏಣಿ ಬಳಕೆಗೆ ಬರಲಿ
ಇನ್ನಾದರೂ ತೋಟದ ಮಾಲೀಕರು ಕೆಲಸಗಾರರಿಗೆ ಈ ಬಗ್ಗೆ ಮಾಹಿತಿ ನೀಡಬೇಕು, ಕೆಲಸಗಾರರು ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ಬಿಟ್ಟು ಅಲ್ಯುಮಿನಿಯಂ ಏಣಿ ಬಳಸಿ ಕರಿಮೆಣಸು ಕೊಯ್ಲು, ಮರಕಪಾತ್ ಮಾಡುವಾಗ ತೋಟದ ನಡುವೆ ವಿದ್ಯುತ್ ತಂತಿ ಹಾದು ಹೋಗಿದೆಯಾ ಎಂದು ನೋಡಿಕೊಳ್ಳುವ ಮೂಲಕ ಒಂದಿಷ್ಟು ಜಾಗ್ರತೆ ವಹಿಸಬೇಕು, ತಾವು ಮರಹತ್ತಲು ತಂದ ಅಲ್ಯುಮಿನಿಯಂ ಏಣಿಯನ್ನು ತಮ್ಮ ಪಾಡಿಗೆ ಎತ್ತಿಕೊಂಡು ಹೋಗುವ ಮುನ್ನ ಸುತ್ತಲೂ ಗಮನಿಸುವುದು ಒಳಿತು.
ಅಲ್ಯೂಮಿನಿಯಂ ಏಣಿ ಲೋಹವಾಗಿರುವುದರಿಂದ ವಿದ್ಯುತ್ ವಾಹಕಗಳಾಗಿದ್ದು, ಎತ್ತರ ಸಾಮಾನ್ಯವಾಗಿ 20 ಅಡಿಗಿಂತಲೂ ಹೆಚ್ಚಿದ್ದು, ಕೆಲವೊಮ್ಮೆ ನಮಗೇ ಗೊತ್ತಿಲ್ಲದಂತೆ ತೋಟದ ನಡುವೆ ಕೊಂಡೊಯ್ಯುವಾಗ ವಿದ್ಯುತ್ ತಂತಿಗೆ ಸ್ಪರ್ಶಿಸಿ ದುರಂತಕ್ಕೆ ದಾರಿ ಮಾಡಿಕೊಡುತ್ತಿದೆ.
ಇನ್ನಾದರೂ ಈ ಅಲ್ಯುಮಿನಿಯಂ ಏಣಿಗಳ ಬದಲಾಗಿ ಫೈಬರ್, ಬಿದಿರು ಇತ್ಯಾದಿಗಳಿಂದ ನಿರ್ಮಿತವಾದ ವಿದ್ಯುತ್ ನಿರೋಧಕ ಏಣಿಗಳನ್ನು ಬಳಸಿದರೆ ಕಾರ್ಮಿಕರ ಪ್ರಾಣ ಉಳಿಯಬಹುದೇನೋ? ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡು ಮುಂದೆ ಆಗಲಿರುವ ಪ್ರಾಣ ಹಾನಿಯನ್ನು ತಪ್ಪಿಸುವ ಅಗತ್ಯವಿದೆ.












Click it and Unblock the Notifications