ಮಾಜಿ ಪ್ರಿಯಕರನ ಕಿರುಕುಳದಿಂದ ನೊಂದು ಯುವತಿ ಆತ್ಮಹತ್ಯೆ
ಮಡಿಕೇರಿ, ಜೂನ್ 25: ಮನೆಯವರಿಗೆ ತಿಳಿಯದಂತೆ ಯುವಕನೊಬ್ಬನನ್ನು ವಿವಾಹವಾಗಿದ್ದ ನವವಿವಾಹಿತೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿಯ ಡೈರಿ ಫಾರಂ ಬಳಿ ನಡೆದಿದೆ.
ಪದವಿ ಮುಗಿಸಿ ಮಡಿಕೇರಿಯ ಶೋರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾ ಜ್ಯೋತಿ (22) ಎಂಬಾಕೆ ನೇಣಿಗೆ ಶರಣಾದ ಯುವತಿ. ತನಗೆ ಪವನ್ ಎಂಬ ಯುವಕ ಮಾನಸಿಕ ಕಿರುಕುಳ ನೀಡುತ್ತಿದ್ದ. ಇದರಿಂದಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟಿದ್ದಾಳೆ.
ಮಡಿಕೇರಿ ನಿವಾಸಿ ಬ್ರಿಜೇಶ್ ಎಂಬಾತನನ್ನು ಆರು ತಿಂಗಳ ಹಿಂದೆ ಮನೆಯವರಿಗೆ ಗೊತ್ತಿಲ್ಲದೆ ಮದುವೆಯಾಗಿದ್ದ ದಿವ್ಯಾ, ಒಂದು ತಿಂಗಳ ಹಿಂದೆ ತಮ್ಮ ವಿವಾಹವನ್ನು ನೋಂದಣಿ ಸಹ ಮಾಡಿಸಿದ್ದಾಳೆ. ಮದುವೆಗೂ ಮುನ್ನ ಪವನ್ ಎಂಬಾತನನ್ನು ಪ್ರೀತಿಸುತ್ತಿದ್ದು, ಪೋಷಕರು ವಿರೋಧ ವ್ಯಕ್ತಪಡಿಸಿದ ನಂತರ ಆತನನ್ನು ದೂರ ಮಾಡಿ ಬ್ರಿಜೇಶ್ ಎಂಬಾತನನ್ನು ರಹಸ್ಯವಾಗಿ ಮದುವೆಯಾಗಿದ್ದಳು ಎನ್ನಲಾಗಿದೆ.

ನಿನ್ನೆ ಶೋರೂಂನಲ್ಲಿ ದಿವ್ಯಾ ಇಲ್ಲದನ್ನು ಗಮನಿಸಿದ ಬ್ರಿಜೇಶ್ ಆಕೆಯ ಮೊಬೈಲ್ ಗೆ ಕರೆ ಮಾಡಿದ್ದು, ಕರೆ ಸ್ವೀಕರಿಸದ ಕಾರಣ ನೇರ ಮನೆಗೆ ಬಂದಿದ್ದಾನೆ. ಆತ ಮನೆಗೆ ಬಂದಾಗ ದಿವ್ಯಾ ನೇಣು ಹಾಕಿಕೊಂಡ ವಿಷಯ ತಿಳಿದುಬಂದಿದೆ. ಆಕೆಯನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ದಿದ್ದು, ದಿವ್ಯ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಆರು ತಿಂಗಳ ಹಿಂದೆ ತಾವು ಮನೆಯವರಿಗೆ ಗೊತ್ತಿಲ್ಲದೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದು, ಕಳೆದ ತಿಂಗಳು ವಿವಾಹ ನೋಂದಣಿ ಮಾಡಿಕೊಂಡಿರುವುದಾಗಿ ಬ್ರಿಜೇಶ್ ಪೊಲೀಸರಿಗೆ ತಿಳಿಸಿದ್ದಾನೆ.
ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಪವನ್ ಎಂಬಾತನ ಕಿರುಕುಳದಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ದಿವ್ಯಾ ಡೆತ್ ನೋಟ್ ಬರೆದಿದ್ದು, ಈಕೆಯ ಸಾವಿನ ಕುರಿತು ಹಲವು ಸಂಶಯಗಳು ತಲೆದೋರಿವೆ.
ಈ ಹಿನ್ನೆಲೆ ಮಡಿಕೇರಿ ಠಾಣೆ ಪೊಲೀಸರು ದಿವ್ಯಜ್ಯೋತಿ ಪತಿ ಬ್ರಿಜೇಶ್ ಹಾಗೂ ಆಕೆಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಪವನ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.












Click it and Unblock the Notifications