ಪ್ರಯಾಗ್ ನಲ್ಲಿ ಮಂಗಳವಾರ ಯೋಗಿ ಸಂಪುಟ ಸಭೆ, ಸಿನಿಮಾ ವೀಕ್ಷಣೆ
ಲಖನೌ (ಉತ್ತರಪ್ರದೇಶ), ಜನವರಿ 28: ಪ್ರಯಾಗ್ ರಾಜ್ ನಲ್ಲಿ ಮಂಗಳವಾರ ಉತ್ತರಪ್ರದೇಶದ ಸಂಪುಟ ಸಭೆ ನಡೆಸಲು ಸಕಲ ಸಿದ್ಧತೆ ನಡೆದಿದೆ. ಇದೇ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ಸಂಪುಟ ಸಭೆ ಲಖನೌ ಹೊರಗೆ ನಡೆಯಲಿದೆ.
ಇದಕ್ಕಾಗಿಯೇ ಸಂಪುಟ ಸಭೆ ನಡೆಯಲಿರುವ ಕುಂಭ ಮೇಳ ಪ್ರದೇಶದ ಸೆಕ್ಟರ್ ಒಂದರಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಇಂಟಿಗ್ರೇಟೆಡ್ ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಇದ್ದು, ಸಭೆಯು ಬೆಳಗ್ಗೆ ಹನ್ನೊಂದು ಗಂಟೆಗೆ ನಿಗದಿ ಆಗಿದೆ.
ರಾಜಕೀಯ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಕುಂಭಮೇಳಕ್ಕೆ ಪ್ರಿಯಾಂಕಾ ಗಾಂಧಿ
ಮಂಗಳವಾರ ಬೆಳಗ್ಗೆ ಮೇಳದ ಸ್ಥಳವನ್ನು ಮುಖ್ಯಮಂತ್ರಿ ಆದಿತ್ಯನಾಥ್ ತಲುಪುತ್ತಾರೆ. ಎಲ್ಲ ಇಪ್ಪತ್ನಾಲ್ಕು ಸಂಪುಟ ಸಚಿವರು, ಒಂಬತ್ತು ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) ಮತ್ತು ರಾಜ್ಯದ ಇಪ್ಪತ್ತೆರಡು ಸಚಿವರು ನಗರದಲ್ಲಿ ತಂಗಲಿದ್ದಾರೆ. ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ಸೇರಿದಂತೆ ನೂರೈವತ್ತು ಅಧಿಕಾರಿಗಳಿಗೆ ವ್ಯವಸ್ಥೆ ಮಾಡಲಾಗಿದೆ.
ರಾಜ್ಯ ಸರಕಾರದ ಮೂಲಗಳ ಪ್ರಕಾರ, ಸಂಪುಟ ಸಭೆ ನಂತರ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲ ಸಚಿವರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ. ಆ ನಂತರ ಅಕ್ಷಯ ವಟ ವೃಕ್ಷ ಹಾಗೂ ಸರಸ್ವತಿ ಕೂಪದ ದರ್ಶನ ಪಡೆಯಲಿದ್ದರೆ. ಇದೇ ಮೊದಲ ಬಾರಿಗೆ ಅಲಹಾಬಾದ್ ಕೋತೆಯ ಎದುರಿಗೆ ಇರುವ ಈ ಸ್ಥಳವನ್ನು ಸಾರ್ವಜನಿಕರಿಗೆ ತೆರೆಯಲಾಗಿದೆ. ಹನುಮಾನ್ ದೇಗುಲದಲ್ಲಿ ಪ್ರಾರ್ಥನೆ ಕೂಡ ಸಲ್ಲಿಸಲಿದ್ದಾರೆ.
ಹಿಂದು ಧರ್ಮಕ್ಕೆ ಮತಾಂತರವಾದ ಈ ವ್ಯಕ್ತಿ ಕುಂಭಮೇಳದ ಕೇಂದ್ರಬಿಂದು!
ದರ್ಶನದ ನಂತರ ಎಲ್ಲರೂ ವಿಕ್ಕಿ ಕೌಶಲ್ ಅಭಿನಯದ ಉರಿ-ಸರ್ಜಿಕಲ್ ಸ್ಟ್ರೈಕ್ ವಿಶೇಷ ಚಿತ್ರ ಪ್ರದರ್ಶನವನ್ನು ಮೇಳದ ಸ್ಥಳದಲ್ಲೇ ವೀಕ್ಷಣೆ ಮಾಡಲಿದ್ದಾರೆ. ಸಂಪುಟ ಸಭೆಗಾಗಿಯೇ ಹನ್ನೆರಡು ಎಎಸ್ ಪಿ, ಮೂವತ್ತು ಡಿವೈಎಸ್ ಪಿ, ಅರವತ್ತು ಇನ್ ಸ್ಪೆಕ್ಟರ್, ಇನ್ನೂರಾ ಇಪ್ಪತ್ತೈದು ಸಬ್ ಇನ್ ಸ್ಪೆಕ್ಟರ್, ಸಾವಿರದ ಐನೂರು ಕಾನ್ ಸ್ಟೇಬಲ್ ಗಳ ನಿಯೋಜನೆ ಮಾಡಲಾಗಿದೆ. ಇವರೆಲ್ಲರ ಜತೆಗೆ ಭಯೋತ್ಪಾದನಾ ನಿಗ್ರಹ ದಳವನ್ನು ಕೂಡ ಹಾಕಲಾಗಿದೆ.