ಮಂದಿರ್ ಥಾ, ಹೈ ಔರ್ ರಹೇಗಾ: ಯೋಗಿಯಿಂದ ರಾಮಮಂದಿರ ನಿರ್ಮಾಣದ ಸೂಚನೆ
ಅಯೋಧ್ಯೆ, ನವೆಂಬರ್ 07: 'ರಾಮ್ ಮಂದಿರ್ ಥಾ, ಹೈ ಔರ್ ರಹೇಗಾ' (ರಾಮಮಂದಿರ ಇತ್ತು, ಇದೆ ಮತ್ತು ಇರುತ್ತದೆ) ಎಂದು ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸುವ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದು ರಾಮಮಂದಿರ ನಿರ್ಮಾಣದ ಸೂಚನೆ ನೀಡಿದೆ.
ಅಷ್ಟೇ ಅಲ್ಲ, ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ಸ್ಥಾಪನೆ ಮಾಡುವ ಕುರಿತ ನಿರ್ಧಾರವನ್ನೂ ಅವರು ಸ್ಪಷ್ಟಪಡಿಸಿದರು. ರಾಮನ ಪ್ರತಿಮೆಯನ್ನು ಎಲ್ಲಿ ನಿರ್ಮಿಸಬೇಕು ಎಂಬ ಬಗ್ಗೆ ಈಗಾಗಲೇ ಸರ್ವೆ ನಡೆದಿದೆ, ಜೊತೆಗೆ ಪ್ರತಿಮೆ ನಿರ್ಮಾಣದ ನೀಲನಕ್ಷೆಯೂ ಸಿದ್ಧವಾಗಿದೆ ಎಂದು ಅವರು ಹೇಳಿದರು.
ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸುತ್ತಿರುವ ಯೋಗಿ ಆದಿತ್ಯನಾಥ್, ಸರಯು ನದಿಯ ತಟದಲ್ಲಿ ನಡೆದ ಅದ್ಧೂರಿ ದೀಪೋತ್ಸವದ ನಂತರ ಫೈಜಾಬಾದ್ ಅನ್ನು ಅಯೋಧ್ಯೆಯೆಂದು ಬದಲಿಸುವ ಘೋಷಣೆ ಮಾಡಿದರು. ಕಾರ್ಯಕ್ರಮದದಲ್ಲಿದ್ದ ಹತ್ತು ಸಾವಿರ ಜನರು ಈ ಮಾತಿಗೆ ಶಿಳ್ಳೆ, ಚಪ್ಪಾಳೆಯ ಪ್ರತಿಕ್ರಿಯೆ ನೀಡಿದರು.

ರಾಮಮಂದಿರ ನಿರ್ಮಾಣ ಖಾತ್ರಿ!
ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಅಲ್ಲಿ(ಅಯೋಧ್ಯೆ) ರಾಮಮಂದಿರವಿತ್ತು ಎಂಬುದು ನಿಮಗೆ ಗೊತ್ತಿಗೆ. ಅದು ಈಗಲೂ ಇದೆ. ಮುಂದೆಯೂ ಇರುತ್ತದೆ. ರಾಮಮಂದಿರ ನಿರ್ಮಾಣ ವಿಚಾರ ಸುಪ್ರೀಂ ಕೋರ್ಟಿನಲ್ಲಿದೆ. ರಾಮಮಂದಿರ ನಿರ್ಮಾಣಕ್ಕೆ ಕಾನೂನನ್ನು ತರುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ' ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಅಯೋಧ್ಯೆಗೆ ಅನ್ಯಾಯವಾಗಲು ಬಿಡೋಲ್ಲ!
'ಅಯೋಧ್ಯೆಗೆ ಯಾರೂ ಅನ್ಯಾಯ ಮಾಡುವುದಕ್ಕೆ ನಾವು ಬಿಡುವುದಿಲ್ಲ ಎಂಬುದನ್ನು ಹೇಳಲು ನಾನಿಲ್ಲಿಗೆ ಬಂದಿದ್ದೇನೆ. ಈ ಜಗತ್ತಿನ ಯಾವ ಶಕ್ತಿಯೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದನ್ನು ತಡೆಯುವುದಕ್ಕೆ ಸಾಧ್ಯವಿಲ್ಲ ಎಂಬ ಭರವಸೆಯನ್ನು ನಾನು ನೀಡಬಲ್ಲೆ' ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಅಯೋಧ್ಯೆಗೆ ವಿಮಾನ ನಿಲ್ದಾಣ ಭಾಗ್ಯ!
ಅಯೋಧ್ಯೆಯಲ್ಲಿ ಹೊಸದಾಗಿ ವಿಮಾನ ನಿಲ್ದಾಣವನ್ನು ನಿರ್ಮಸಲಾಗುತ್ತಿದ್ದು, ಇದಕ್ಕೆ ರಾಮನ ಹೆಸರನ್ನೇ ನಾಮಕರಣ ಮಾಡಲಾಗುವುದು ಎಂದು ಯೋಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ರಾಜ ದಶರಥನ ಹೆಸರಿನಲ್ಲಿ ವೈದ್ಯಕೀಯ ಕಾಲೇಜೊಂದನ್ನು ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.

ನಗರಗಳಿಗೆ ಮರುನಾಮಕರಣ
ಇತ್ತೀಚೆಗಷ್ಟೇ ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಎಂದು ಬದಲಿಸಿದ್ದ ಯೋಗಿ ಆದಿತ್ಯನಾಥ್, ಮಂಗಳವಾರ, ಫೈಜಾಬಾದ್ ಹೆಸರನ್ನು ಅಯೋಧ್ಯೆಯನ್ನಾಗಿ ಬದಲಿಸಿದರು. ಈ ಎಲ್ಲಾ ನಗರಗಳ ಮೂಲ ಹೆಸರನ್ನೇ ಮತ್ತೆ ಇಡಲಾಗಿದೆ, ಮೊಘಲ್ ಆಕ್ರಮಣದ ನಂತರ ಇವುಗಳ ಹೆಸರು ಬದಲಾಗಿತ್ತು ಎಂದು ಈ ಮೊದಲೇ ಅವರು ಸ್ಪಷ್ಟನೆ ನೀಡಿದ್ದನ್ನು ಸ್ಮರಿಸಬಹುದು. ಯೋಗಿ ಆಡಳಿತಾವಧಿಯಲ್ಲಿ ಮತ್ತಷ್ಟು ನಗರಗಳ ಹೆಸರು ಬದಲಾಗುವ ಸಾಧ್ಯತೆ ಇದೆ.












Click it and Unblock the Notifications