ಹಿಂದೂ ಕುಟುಂಬಗಳಿಂದ ಮಾತ್ರ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ
ಲಕ್ನೊ, ಜನವರಿ 02: ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಹಾಗೂ ಸಂಬಂಧಿತ ಸಂಸ್ಥೆಗಳ ಕಾರ್ಯಕರ್ತರು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಹಿಂದೂ ಕುಟುಂಬಗಳಿಂದ ಮಾತ್ರ ದೇಣಿಗೆ ಸಂಗ್ರಹಿಸಲಿದ್ದಾರೆ ಎಂದು ವಿಎಚ್ ಪಿ ವಕ್ತಾರ ವಿಜಯ್ ಶಂಕರ್ ತಿವಾರಿ ತಿಳಿಸಿದ್ದಾರೆ.
ಜನವರಿ 15ರಿಂದ ಶ್ರೀರಾಮ ಜನ್ಮಭೂಮಿ ಮಂದಿರ ನಿಧಿ ಸಮರ್ಪಣಾ ಅಭಿಯಾನ ಆರಂಭಗೊಳ್ಳಲಿದೆ. ಉತ್ತರಾಖಂಡದಲ್ಲಿನ 24 ಲಕ್ಷ ಕುಟುಂಬದ ಸುಮಾರು ಒಂದು ಕೋಟಿ ರಾಮ ಭಕ್ತರಿಗೆ ತಮ್ಮ ಸಮಯ ಹಾಗೂ ಹಣವನ್ನು ದೇಣಿಗೆ ಮಾಡಲು ಕೇಳಿಕೊಂಡಿದ್ದೇವೆ ಎಂದು ತಿಳಿಸಿದರು. ಫೆಬ್ರುವರಿ 27ರವರೆಗೂ ರಾಷ್ಟ್ರದಾದ್ಯಂತ ಈ ಅಭಿಯಾನ ನಡೆಯಲಿದೆ. ಉತ್ತರಾಖಂಡದಲ್ಲಿ, ರಾಜ್ಯದ ಗಾತ್ರವನ್ನು ಪರಿಗಣಿಸಿ ಫೆಬ್ರುವರಿ 5ಕ್ಕೆ ಅಭಿಯಾನವನ್ನು ಕೊನೆಗೊಳಿಸಲಾಗುತ್ತಿದೆ ಎಂದರು.
ಈ ಅಭಿಯಾನದಲ್ಲಿ ಎಲ್ಲಾ ಧರ್ಮದ ಜನರನ್ನೂ ವಿಶ್ವ ಹಿಂದೂ ಪರಿಷತ್ ಒಳಗೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇವಲ ಹಿಂದೂ ಕುಟುಂಬಗಳಿಂದ ದೇಣಿಗೆ ಪಡೆಯಲಾಗುತ್ತಿದೆ. ಶ್ರೀರಾಮ ಮಂದಿರದ ಕುರಿತು ಹಿಂದಿನ ಅನುಭವಗಳನ್ನು ಗಣನೆಗೆ ತೆಗೆದುಕೊಂಡು ಈ ನಿರ್ಣಯ ಕೈಗೊಳ್ಳಲಾಗಿದೆ. ಇನ್ನಿತರ ಧರ್ಮದ ಸದಸ್ಯರನ್ನು ಹೊರಗುಳಿಸುತ್ತೇವೆ ಎಂದಲ್ಲ, ರಾಮ ಭಕ್ತರಿಂದ ಮಾತ್ರ ದೇಣಿಗೆ ಸ್ವೀಕರಿಸುವ ಉದ್ದೇಶವಿದೆ ಎಂದರು.

ಮುಸ್ಲಿಂ, ಸಿಖ್, ಕ್ರೈಸ್ತರು ಸೇರಿದಂತೆ ಇತರೆ ಧರ್ಮದವರು ಸ್ವಯಂ ಆಗಿ ದೇಣಿಗೆ ನೀಡಲು ಮುಂದೆ ಬಂದರೆ, ಅದನ್ನು ಗೌರವಯುತವಾಗಿ ಸ್ವೀಕರಿಸುತ್ತೇವೆ ಎಂದು ತಿಳಿಸಿದರು.












Click it and Unblock the Notifications