ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಅಚ್ಚರಿ ಮೂಡಿಸಿದ ವಿಎಚ್ಪಿ ನಡೆ
ಲಕ್ನೋ, ಫೆಬ್ರವರಿ 6: ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದಾದ್ಯಂತ ಬೃಹತ್ ಧರ್ಮ ಸಭೆಗಳನ್ನು ನಡೆಸಿದ್ದ ವಿಶ್ವ ಹಿಂದೂ ಪರಿಷದ್ (ವಿಎಚ್ಪಿ) ಅಚ್ಚರಿಯ ತೀರ್ಮಾನ ಕೈಗೊಂಡಿದೆ.
ಮುಂದಿನ ಲೋಕಸಭೆ ಚುನಾವಣೆ ಮುಗಿಯುವವರೆಗೂ ನಾಲ್ಕು ತಿಂಗಳವರೆಗೆ ರಾಮ ಜನ್ಮಭೂಮಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಭಟನಾ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ ಎಂದು ವಿಎಚ್ಪಿ ಪ್ರಕಟಿಸಿದೆ.
ಅಯೋಧ್ಯೆಯ ವಿವಾದಾತ್ಮಕ ಭೂಮಿಯ ಪಕ್ಕದಲ್ಲಿರುವ 67 ಎಕರೆ ಜಮೀನನ್ನು ರಾಮ ಜನ್ಮಭೂಮಿ ನ್ಯಾಸ್ ಸೇರಿದಂತೆ ಅವುಗಳ ಮೂಲ ಮಾಲೀಕರಿಗೆ ಮರಳಿಸುವ ಸಂಬಂಧ ಅನುಮತಿ ಕೋರಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ವಾರದ ಬಳಿಕ ವಿಎಚ್ಪಿ ಈ ಅಚ್ಚರಿಯ ತೀರ್ಮಾನ ಕೈಗೊಂಡಿದೆ.

ಈ ಬಗ್ಗೆ ಪ್ರಯಾಗ್ರಾಜ್ನಲ್ಲಿ ನಡೆದ ಧರ್ಮ ಸಂಸದ್ನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಎಚ್ಪಿ ತಿಳಿಸಿದೆ.
'ನಾವು ಮುಂದಿನ ನಾಲ್ಕು ತಿಂಗಳವರೆಗೆ ಯಾವುದೇ ಧರಣಿ ಪ್ರತಿಭಟನೆಯ ಚಟುವಟಿಕೆಗಳನ್ನು ನಡೆಸುವುದಿಲ್ಲ. ಏಕೆಂದರೆ, ಚುನಾವಣೆಯ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣ ಸೇರಿದಂತೆ ಮಾಡುವ ಇಂತಹ ಪ್ರತಿಭಟನೆಗಳು ರಾಜಕೀಯದ ಸಂಗತಿಗಳಾಗಿ ಮಾರ್ಪಟ್ಟು ರಾಜಕೀಯದೊಳಗೆ ಸೇರಿಕೊಳ್ಳುತ್ತದೆ ಎಂದು ಎಲ್ಲರಿಗೂ ಅನಿಸಿದೆ. ಮುಂದಿನ ನಾಲ್ಕು ತಿಂಗಳ ಅವಧಿಯವರೆಗೆ ಈ ವಿವಾದವನ್ನು ರಾಜಕೀಯದಿಂದ ರಕ್ಷಿಸಬೇಕು ಎಂದು ನಿರ್ಧರಿಸಲಾಗಿದೆ' ಎಂಬುದಾಗಿ ವಿಎಚ್ಪಿ ಅಂತಾರಾಷ್ಟ್ರೀಯ ಕಾರ್ಯನಿರತ ಅಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದ್ದಾರೆ.












Click it and Unblock the Notifications