'ಆಪರೇಷನ್ ದುರಾಚಾರಿ': ಮಹಿಳೆಯರನ್ನು ಚುಡಾಯಿಸುವವರಿಗೆ ಮಾರಿಹಬ್ಬ
ಲಕ್ನೋ, ಸೆಪ್ಟೆಂಬರ್ 24: ಯುವತಿಯರನ್ನು ಚುಡಾಯಿಸುವ, ಮಹಿಳೆಯರ ವಿರುದ್ಧ ಅಪರಾಧ ಎಸಗಿದ ಆರೋಪಿಗಳ ಹಾಗೂ ಲೈಂಗಿಕತೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗುವ ಕಿಡಿಗೇಡಿಗಳನ್ನು ನಿಯಂತ್ರಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ವಿಶೇಷ ಕಾರ್ಯಾಚರಣೆಯೊಂದನ್ನು ಆರಂಭಿಸಲು ನಿರ್ಧರಿಸಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅಪರಾಧಗಳು ಹಾಗೂ ಲೈಂಗಿಕ ಅಪರಾಧಗಳ ಮೇಲೆ ಕಡಿವಾಣ ಹಾಕಲು ಉತ್ತರ ಪ್ರದೇಶ ಸರ್ಕಾರ ಈ ಮಹತ್ವದ 'ಆಪರೇಷನ್'ಗೆ ಮುಂದಾಗಿದೆ. ಈ ಕಾರ್ಯಾಚರಣೆಗೆ 'ಆಪರೇಷನ್ ದುರಾಚಾರಿ' ಎಂಬ ಹೆಸರು ಇಡಲಾಗಿದೆ.
ಇಂಗತಹ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಮಹಿಳೆಯರಿಗೆ ಕಿರುಕುಳ ಮತ್ತು ಹಿಂಸೆ ನೀಡುವ ದುಷ್ಕರ್ಮಿಗಳಿಗೆ ಅವಮಾನ ಉಂಟುಮಾಡುವ ಮೂಲಕ ಅವರನ್ನು ತಿದ್ದುವುದು ಇದರ ಹಿಂದಿನ ಉದ್ದೇಶ. ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಭಾಗಿಯಾದವರ ಪೋಸ್ಟರ್ಗಳನ್ನು ರಾಜ್ಯದ ಪ್ರಮುಖ ರಸ್ತೆ ಕ್ರಾಸಿಂಗ್ಗಳಲ್ಲಿ ಅಂಟಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶಿಸಲಾಗಿದೆ. ಮುಂದೆ ಓದಿ.

ಸಿಎಎ ಪ್ರತಿಭಟನೆಯಲ್ಲೂ ಇದೇ ಕ್ರಮ
ಡಿಸೆಂಬರ್ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಮತ್ತು ಧ್ವಂಸ ಪ್ರಕರಣಗಳಲ್ಲಿ ಭಾಗಿಯಾದವರ ಹೆಸರನ್ನು ಹೀಗೆ ಅವಮಾನಕಾರಿ ರೀತಿ ಪ್ರದರ್ಶಿಸುವ ತಂತ್ರವನ್ನು ಉತ್ತರ ಪ್ರದೇಶ ಸರ್ಕಾರ ಅನುಸರಿಸಿತ್ತು. ಆದರೆ ಇದಕ್ಕೆ ಹೈಕೋರ್ಟ್ ತಡೆ ನೀಡಿ, ಪೋಸ್ಟರ್ಗಳನ್ನು ತೆರವುಗೊಳಿಸಲು ಸೂಚನೆ ನೀಡಿತ್ತು.

ಕಿರುಕುಳ ನೀಡಿದ ಆರೋಪ
ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸುವ ಸಲುವಾಗಿ 'ರೋಮಿಯೋ ನಿಗ್ರಹ ಪಡೆ'ಯನ್ನು ಉತ್ತರ ಪ್ರದೇಶ ಸರ್ಕಾರ 2017ರಲ್ಲಿ ಸ್ಥಾಪಿಸಿತ್ತು. ಆದರೆ ಈ ತಂಡವು ಆರೋಪಿಗಳ ತಲೆ ಬೋಳಿಸುವ, ಮುಖಕ್ಕೆ ಕಪ್ಪು ಹಚ್ಚುವ, ಸಾರ್ವಜನಿಕ ಸ್ಥಳದಲ್ಲಿ ಬಸ್ಕಿ ಹೊಡೆಸುವಂತಹ ಕಠಿಣ ಕ್ರಮದ ಜತೆಗೆ ಕಿರುಕುಳ ನೀಡುತ್ತಿವೆ ಎಂಬ ಆರೋಪ ಕೇಳಬಂದಿತ್ತು.

ಪೊಲೀಸರೇ ಹೊಣೆಗಾರರು
ಮಹಿಳೆಯರ ವಿರುದ್ಧ ಅಪರಾಧಗಳನ್ನು ಹತ್ತಿಕ್ಕಲು ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದ್ದು, ರೋಮಿಯೋ ನಿಗ್ರಹ ಪಡೆಯ ಚಟುವಟಿಕೆಯನ್ನು ಸಕ್ರಿಯಗೊಳಿಸುವಂತೆ ನಿರ್ದೇಶಿಸಲಾಗಿದೆ. ಮಹಿಳೆಯರ ವಿರುದ್ಧ ಯಾವುದೇ ಅಪರಾಧ ನಡೆದ ಘಟನೆ ವರದಿಯಾದರೂ ಅದಕ್ಕೆ ಉಸ್ತುವಾರಿಯಲ್ಲಿರುವ ಪೊಲೀಸರು, ಸ್ಟೇಷನ್ ಅಧಿಕಾರಿಗಳು ಮತ್ತು ವಲಯಾಧಿಕಾರಿಗಳು ಹೊಣೆಗಾರರಾಗುತ್ತಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಮಹಿಳಾ ಪೊಲೀಸರಿಗೆ ಅಧಿಕಾರ
'ಆಪರೇಷನ್ ದುರಾಚಾರಿ'ಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮಹಿಳಾ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಂತಹ ಸಮಾಜ ವಿದ್ರೋಹಿ ಚಟುವಟಿಕೆಗಳು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಅವರಿಗೆ ಅವಮಾನವಾಗುವಂತೆ ರಸ್ತೆ ಕ್ರಾಸಿಂಗ್ಗಳ ಬಳಿ ಅವರ ಫೋಟೊಗಳನ್ನು ಹಾಕುವಂತೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಯೋಗಿ ಸೂಚಿಸಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.












Click it and Unblock the Notifications