ಮಾಸ್ಕ್ ಇಲ್ಲ, ಅಂತರವಿಲ್ಲ; ಉತ್ತರ ಪ್ರದೇಶ ಪಾದ್ರಿ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ!
ಲಕ್ನೋ, ಮೇ 11: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿ ನಡುವೆಯೂ ಉತ್ತರ ಪ್ರದೇಶದ ಬದೌನ್ ಎಂಬಲ್ಲಿ ಮುಸ್ಲಿಂ ಪಾದ್ರಿಯೊಬ್ಬರ ಅಂತ್ಯ ಸಂಸ್ಕಾರದಲ್ಲಿ ಸಾವಿರಾರು ಜನರು ಭಾಗವಹಿಸಿರುವುದು ಹೊಸ ಆತಂಕವನ್ನು ಸೃಷ್ಟಿಸಿದೆ.
ಮೇ 9ರಂದು ಮುಸ್ಲಿಂ ಪಾದ್ರಿ ಅಬ್ದುಲ್ ಹಮೀದ್ ಮೊಹಮ್ಮದ್ ಸಾಲಿಮುಲ್ ಕ್ವಾದ್ರಿ ಎಂಬುವವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಕೊವಿಡ್-19 ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಎಲ್ಲ ನಿಯಮಗಳನ್ನು ಮೀರಿ ಸಾವಿರಾರು ಮಂದಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳೆದ ಭಾನುವಾರ ಬದೌನ್ ಪ್ರದೇಶದ ಮಸೀದಿಯೊಂದರಲ್ಲಿ ಮೃತ ಪಾದ್ರಿಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸಾರ್ವಜನಿಕ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಹರಿದು ಬಂದ ಜನರು, ಕೊವಿಡ್-19 ಮಾರ್ಗಸೂಚಿ ಹಾಗೂ ರಾಜ್ಯದಲ್ಲಿ ಲಾಕ್ ಡೌನ್ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ.

ಕೊರೊನಾ ಹರಡುವಿಕೆ ಭೀತಿ ಹೆಚ್ಚಳ:
ಉತ್ತರ ಪ್ರದೇಶದಲ್ಲಿ ಪಾದ್ರಿಯ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರದಲ್ಲಿ ಸಾವಿರಾರು ಜನರು ಒಟ್ಟಾಗಿ ಸೇರಿದ್ದು ಈ ಪೈಕಿ ಕೆಲವೇ ಕೆಲವರು ಮಾತ್ರ ಮಾಸ್ಕ್ ಧರಿಸಿರುವುದು ಗೊತ್ತಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಶಿಸ್ತು ಕ್ರಮತೆಗೆದುಕೊಳ್ಳಲಾಗುವುದು ಎಂದು ಬದೌನ್ ಎಸ್ಪಿ ಸಂಕಲ್ಪ ಶರ್ಮಾ ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ನಿಯಮ:
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನ ಭೀತಿ ಹಿನ್ನೆಲೆ ಲಾಕ್ ಡೌನ್ ಜಾರಿಗೊಳಿಸಲಾಗಿರುವ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಅಂತ್ಯಸಂಸ್ಕಾರದ ಸಂದರ್ಭದಲ್ಲಿ 20ಕ್ಕಿಂತ ಹೆಚ್ಚು ಜನರು ಭಾಗವಹಿಸುವಂತಿಲ್ಲ. ಮಾಸ್ಕ್ ಇಲ್ಲದೇ ರಸ್ತೆಗೆ ಇಳಿಯುವಂತಿಲ್ಲ, ಒಂದು ಬಾರಿ ಮಾಸ್ಕ್ ಧರಿಸದೇ ಸಿಕ್ಕಿಬಿದ್ದರೆ 1000 ರೂಪಾಯಿ ದಂಡ ಹಾಗೂ 2ನೇ ಬಾರಿ ಅದೇ ತಪ್ಪು ಮರುಕಳಿಸಿದರೆ 10,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಸರ್ಕಾರ ನಿಯಮವನ್ನು ವಿಧಿಸಿದೆ.












Click it and Unblock the Notifications