ಇನ್ಸ್ಪೆಕ್ಟರ್ಗೆ ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿಯ ಬಂಧನ
ಬುಲಂದ್ಶಹರ್, ಡಿಸೆಂಬರ್ 28: ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಡೆದ ಹಿಂಸಾಚಾರದ ವೇಳೆ ಪೊಲೀಸ್ ಇನ್ ಸ್ಪೆಕ್ಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಶಾಂತ್ ನಾಟ್ನಲ್ಲಿ ಬಂಧಿಸಲಾಗಿದೆ.
ಬುಲಂದ್ಶಹರ್-ನೋಯ್ಡಾ ಗಡಿಭಾಗದಲ್ಲಿ ಪ್ರಶಾಂತ್ನನ್ನು ಬಂಧಿಸಲಾಗಿದ್ದು, ಇನ್ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರನ್ನು ತಾನೇ ಹತ್ಯೆ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
'ಆತ ತಾನೇ ಗುಂಡಿಕ್ಕಿ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಬುಲಂದ್ಶಹರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾಕರ್ ಚೌಧರಿ ತಿಳಿಸಿದ್ದಾರೆ.

ಪ್ರಶಾಂತ್ ಜೊತೆಗೆ, ಇನ್ಸ್ಪೆಕ್ಟರ್ ಸುಬೋಧ್ ಅವರಿಂದ ಸರ್ವೀಸ್ ರಿವಾಲ್ವರ್ ಅನ್ನು ಕಸಿದುಕೊಂಡಿದ್ದ ಶಂಕಿತನನ್ನು ಗುರುತಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಆತ ಬುಲಂದ್ಶಹರ್ನ ನಿವಾಸಿ ಜಾನಿ ಎಂದು ಗುರುತಿಸಲಾಗಿದೆ.
ಸುಬೋಧ್ ಅವರ ಹತ್ಯೆ ಬಳಿಕ ಪೊಲೀಸರು ದಾಖಲಿಸಿದ ಎಫ್ಐಆರ್ನಲ್ಲಿ ಪ್ರಶಾಂತ್ ನಾಟ್ ಮತ್ತು ಜಾನಿಯ ಹೆಸರು ಇರಲಿಲ್ಲ. ಆದರೆ, ಹಿಂಸಾಚಾರ ಸಂಭವಿಸಿದ ವೇಳೆಯ ವಿಡಿಯೋಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಉತ್ತರ ಪ್ರದೇಶ ಪೊಲೀಸರು ಇದಕ್ಕೂ ಮುನ್ನ ಹತ್ಯೆಯ ಪ್ರಮುಖ ಆರೋಪಿಯನ್ನಾಗಿ ಬಜರಂಗದಳದ ಸದಸ್ಯ ಯೋಗೇಶ್ ರಾಜ್ ಹೆಸರನ್ನು ದಾಖಲಿಸಿದ್ದರು. ತಾನು ಈ ಪ್ರಕರಣದಲ್ಲಿ ಅಮಾಯಕ ಎಂದು ಹೇಳಿಕೊಂಡಿರುವ ಯೋಗೇಶ್ ರಾಜ್, ಘಟನೆ ನಡೆದ ಸಂದರ್ಭದಿಂದಲೂ ತಲೆಮರೆಸಿಕೊಂಡಿದ್ದಾನೆ.
ಸುಬೋಧ್ ಅವರನ್ನು ಹತ್ಯೆ ಮಾಡಿದ ಶಂಕೆಯ ಮೇಲೆ ಸೈನಿಕ ಜಿತೇಂದ್ರ ಮಲಿಕ್ ಅವರನ್ನು ಡಿ.9ರಂದು ಬಂಧಿಸಲಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.












Click it and Unblock the Notifications