2022 ರ ಯುಪಿ ಚುನಾವಣೆ: 403 ವಿಧಾನಸಭೆ ಸ್ಥಾನದಲ್ಲಿ 100 ರಲ್ಲಿ ಎಐಎಂಐಎಂ ಸ್ಫರ್ಧೆ
ಲಕ್ನೋ, ನವೆಂಬರ್ 21: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಸಿದ್ಧತೆ ಮಾಡುತ್ತಿದೆ. ಈ ನಡುವೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) 403 ವಿಧಾನಸಭಾ ಸ್ಥಾನಗಳ ಪೈಕಿ 100 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದೆ.
ಈ ಬಗ್ಗೆ ಭಾನುವಾರ ಎಐಎಂಐಎಂ ಪಕ್ಷವು ಮಾಹಿತಿ ನೀಡಿದೆ. "ಮೈತ್ರಿ ಮಾಡಿಕೊಳ್ಳಲು ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ನಾವು ಚುನಾವಣೆಯಲ್ಲಿ 403 ವಿಧಾನಸಭಾ ಸ್ಥಾನಗಳ ಪೈಕಿ 100 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದ್ದೇವೆ," ಎಂದು ಕೂಡಾ ಎಐಎಂಐಎಂ ಪಕ್ಷವು ತಿಳಿಸಿದೆ.
ಲಕ್ನೋದಲ್ಲಿ ಎಎನ್ಐ ಜೊತೆ ಮಾತನಾಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, "ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವು 100 ಸ್ಥಾನಗಳಲ್ಲಿ ಸ್ಪರ್ಧೆಗೆ ಇಳಿಯಲು ನಿರ್ಧಾರ ಮಾಡಿದೆ. ನಾವು ಇನ್ನೂ ಒಂದು ಅಥವಾ ಎರಡು ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ," ಎಂದು ಕೂಡಾ ಹೇಳಿದ್ದಾರೆ.

"ನಾವು ಬೇರೆ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆಯೇ ಅಥವಾ ಇಲ್ಲವೇ ಎಂಬುದನ್ನು ಸಮಯ ಹೇಳುತ್ತದೆ. ನಾವು ಚುನಾವಣೆಯ ವಿಚಾರದಲ್ಲಿ ಖಚಿತವಾಗಿ ಇದ್ದೇವೆ. ನಾವು ಚುನಾವಣೆಯಲ್ಲಿ ಗೆಲ್ಲುವ ಸ್ಥಿತಿಯಲ್ಲಿದೆ," ಎಂದು ಕೂಡಾ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಎಐಎಂಐಎಂ ಅಸ್ತಿತ್ವ ಪ್ರಬಲ
"ಉತ್ತರಪ್ರದೇಶದಲ್ಲಿ ಎಐಎಂಐಎಂ ಅಸ್ತಿತ್ವವು ತುಂಬಾ ಪ್ರಬಲವಾಗಿದೆ ಎಂಬುದು ನಿಜ. ನಾವು ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸಾಕಷ್ಟು ಮತಗಳನ್ನು ಪಡೆಯಲು ಸಾಧ್ಯವಿದೆ ಎಂಬ ಸ್ಥಿತಿಯಲ್ಲಿ ಇದ್ದೇವೆ. ಇನ್ಶಾ ಅಲ್ಲಾ," ಎಂದು ತಿಳಿಸಿದರು.
ಇನ್ನು ಈ ನಡುವೆ ಮತ್ತೊಂದು ಪಕ್ಷವಾದ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಶುಕ್ರವಾರ ರಾಜ್ಯದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದೆ. ಈ ಬಗ್ಗೆ ಎನ್ಐ ಜೊತೆ ಮಾತನಾಡಿದ ಆರ್ಎಲ್ಡಿ ಅಧ್ಯಕ್ಷ ಜಯಂತ್ ಚೌಧರಿ, "ಈ ತಿಂಗಳ ಅಂತ್ಯದ ವೇಳೆಗೆ ನಾವು (ಆರ್ಎಲ್ಡಿ ಮತ್ತು ಸಮಾಜವಾದಿ ಪಕ್ಷ) ಮೈತ್ರಿಯ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳುತ್ತೇವೆ. ನಾವು ಒಗ್ಗೂಡುತ್ತೇವೆ," ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ
ಉತ್ತರ ಪ್ರದೇಶದಲ್ಲಿ ಒಟ್ಟು 403 ವಿಧಾನಸಭೆ ಕ್ಷೇತ್ರಗಳು ಇದ್ದು, 2017ರಲ್ಲಿ ಬಿಜೆಪಿಯು ಒಟ್ಟು 312 ಸ್ಥಾನಗಳನ್ನು ತನ್ನ ತೆಕ್ಕೆಗೆ ಪಡೆದಿತ್ತು. ಆ ಬಳಿಕ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರದ ಚುಕ್ಕಾಣಿ ತನ್ನ ಕೈಗೆ ಪಡೆದಿದ್ದು, ಐದು ವರ್ಷಗಳ ಕಾಲ ಅಂದರೆ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಉಳಿದಿದ್ದಾರೆ. 2017 ರ ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಶೇಕಡಾ 40 ರಷ್ಟು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲೇ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಕಡಿಮೆ ಸ್ಥಾನಗಳನ್ನು ಗಳಿಸಿದೆ. ಆದರೆ ಈ ಬಾರಿ ಎಸ್ಪಿ ಚುನಾವಣಾ ಓಟದಲ್ಲಿ ಕೊಂಚ ವೇಗ ಪಡೆಯುವ ಸಾಧ್ಯತೆ ಇದೆ. ಬಿಜೆಪಿ ಕೆಲವು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಚುಣಾವಣಾಪೂರ್ವ ಸಮೀಕ್ಷೆಯು ಹೇಳುತ್ತದೆ. ಇನ್ನು ಕಾಂಗ್ರೆಸ್ ಕಳೆದ ಬಾರಿಯಂತೆ ಈ ಬಾರಿಯೂ ಹೀನಾಯವಾಗಿ ಸೋಲು ಕಾಣಲಿದೆ ಎಂದು ಟೈಮ್ಸ್ ನೌ ಸಮೀಕ್ಷೆಯು ತಿಳಿಸಿದೆ. ಇನ್ನು ಟೈಮ್ಸ್ ನೌ ಸಮೀಕ್ಷೆಯು ಉತ್ತರ ಪ್ರದೇಶದ ಮುಂದಿನ ಚುನಾವಣೆಯಲ್ಲಿ ಎಐಎಂಐಎಂ ಯಾವುದೇ ಸ್ಥಾನವನ್ನು ಪಡೆಯುವ ಉಲ್ಲೇಖ ಮಾಡಿಲ್ಲ.
(ಒನ್ಇಂಡಿಯಾ ಸುದ್ದಿ)












Click it and Unblock the Notifications