ತಪ್ಪಾದ ಭಾರತದ ಭೂಪಟ ಪ್ರಕಟ: ಟ್ವಿಟ್ಟರ್ ಎಂಡಿ ವಿರುದ್ದ ಮತ್ತೆ ಎಫ್ಐಆರ್
ನವದೆಹಲಿ, ಜೂ.29: ಟ್ವಿಟ್ಟರ್ನಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಪ್ರತ್ಯೇಕ ದೇಶವೆಂದು ತೋರಿಸುವ ತಪ್ಪಾದ ಭಾರತದ ಭೂಪಟವನ್ನು ಪ್ರಕಟಿಸಿದ್ದ ಹಿನ್ನೆಲೆ ಉತ್ತರ ಪ್ರದೇಶದಲ್ಲಿ ದಾಖಲಾದ ಎಫ್ಐಆರ್ನಲ್ಲಿ ಟ್ವಿಟ್ಟರ್ನ ಭಾರತದ ಮುಖ್ಯಸ್ಥ ಮನೀಶ್ ಮಹೇಶ್ವರಿ ಹೆಸರು ಉಲ್ಲೇಖಿಸಲಾಗಿದೆ. ಟ್ವಿಟ್ಟರ್ ಭಾರತದಲ್ಲಿ ತನ್ನ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡ ಬಳಿಕ ಈ ತಿಂಗಳಿನಲ್ಲಿ ದಾಖಲಾದ ಎರಡನೇ ಪ್ರಕರಣ ಇದಾಗಿದೆ.
ಟ್ವಿಟ್ಟರ್ ತಪ್ಪಾದ ಭಾರತದ ಭೂಪಟವನ್ನು ಪ್ರಕಟಿಸಿದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಟ್ವಿಟ್ಟರ್, ಈ ನಕ್ಷೆಯನ್ನು ಟ್ವಿಟ್ಟರ್ನಿಂದ ತೆಗೆದುಹಾಕಿತ್ತು.
ಈ ತಪ್ಪಾದ ಭೂಪಟ ಪ್ರಕಟ ಮಾಡಿದ ಹಿನ್ನೆಲೆ ಉತ್ತರಪ್ರದೇಶದಲ್ಲಿ ಬಲಪಂಥೀಯ ಗುಂಪು ಭಜರಂಗದಳದ ನಾಯಕ ಪ್ರವೀಣ್ ಭತಿ ಸಲ್ಲಿಸಿರುವ ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಈ ದೂರಿನಲ್ಲಿ, "ದೇಶದ್ರೋಹದ ಈ ಕೃತ್ಯವು ಉದ್ದೇಶಪೂರ್ವಕವಾಗಿ ನಡೆದಿದೆ. ಈ ಹಿನ್ನೆಲೆ ಕ್ರಮ ತೆಗೆದುಕೊಳ್ಳಬೇಕು," ಎಂದು ಮನವಿ ಮಾಡಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (2) (ವರ್ಗಗಳ ನಡುವೆ ದ್ವೇಷ ಅಥವಾ ಕೆಟ್ಟ ಅಭಿಪ್ರಾಯ ಸೃಷ್ಟಿಸುವುದು ಅಥವಾ ಉತ್ತೇಜಿಸುವುದು) ಮತ್ತು ಐಟಿ (ತಿದ್ದುಪಡಿ) ಕಾಯ್ದೆ 2008 ರ ಸೆಕ್ಷನ್ 74 ರ ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ.
ದೆಹಲಿಯಿಂದ 100 ಕಿ.ಮೀ ದೂರದಲ್ಲಿರುವ ಯುಪಿಯ ಬುಲಂದ್ಶಹರ್ನಲ್ಲಿ ಈ ದೂರು ಸಲ್ಲಿಸಲಾಗಿದ್ದು, ಈ ದೂರಿನಲ್ಲಿ ಟ್ವಿಟರ್ ಇಂಡಿಯಾದೊಂದಿಗೆ ಕೆಲಸ ಮಾಡುವ ಅಮೃತ ತ್ರಿಪಾಠಿ ಹೆಸರು ಕೂಡಾ ಇದೆ. ದೂರು ದಾಖಲಾದ ಕೆಲವೇ ಗಂಟೆಗಳ ನಂತರ ಈ ಬಗ್ಗೆ ಸ್ಪಷ್ಟೀಕರಣವನ್ನು ಅಮೃತ ತ್ರಿಪಾಠಿ ಟ್ವೀಟ್ ಮಾಡಿದ್ದಾರೆ.
''ಈ ದೂರಿನಲ್ಲಿ ದೂರುದಾರರು ತಾವು ಟ್ವಿಟ್ಟರ್ ಬಳಸುವಾಗ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೊಂದಿಲ್ಲದ ಭಾರತದ ತಪ್ಪಾದ ನಕ್ಷೆಯನ್ನು ನೋಡಿದ್ದಾರೆ. ಇದರಿಂದಾಗಿ ಅವರ ಭಾವನೆಗಳಿಗೆ ಮತ್ತು ಇತರ ಭಾರತೀಯರಿಗೆ ಭಾವನೆಗಳಿಗೆ ನೋವುಂಟು ಮಾಡಿದೆ. ಆದ್ದರಿಂದ ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ದೂರಿನಲ್ಲಿ ಟ್ವಿಟ್ಟರ್ನ ಇಬ್ಬರು ಹಿರಿಯ ಅಧಿಕಾರಿಗಳ ಹೆಸರು ಉಲ್ಲೇಖ ಮಾಡಲಾಗಿದೆ,'' ಎಂದು ಪೊಲೀಸ್ ಅಧಿಕಾರಿ ಸುರೇಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನೂತನ ಐಟಿ ನಿಯಮಗಳನ್ನು ಅನುಸಾರವಾಗಿ ಶಾಸನಬದ್ಧ ಅಧಿಕಾರಿಗಳನ್ನು ನೇಮಕ ಮಾಡಲು ವಿಫಲವಾದ ಕಾರಣ ಟ್ವಿಟ್ಟರ್ ಇತ್ತೀಚೆಗೆ ಭಾರತದಲ್ಲಿ ತನ್ನ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡಿದೆ. ಈ ಬೆನ್ನಲ್ಲೇ ಕಳೆದ ವಾರ, ಯುಪಿಯ ಗಾಜಿಯಾಬಾದ್ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆಗೆ ಸಂಬಂಧಿಸಿದ ಪೋಸ್ಟ್ಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಸಂಬಂಧ ರಾತ್ರೋರಾತ್ರಿ ಆಲ್ಟ್ನ್ಯೂಸ್ ಪತ್ರಕರ್ತ ಮೊಹಮ್ಮದ್ ಜುಬೈರ್, ಪತ್ರಕರ್ತ ರಾಣಾ ಅಯೂಬ್, ಮಾಧ್ಯಮ ಸಂಸ್ಥೆ ದಿ ವೈರ್, ಕಾಂಗ್ರೆಸ್ ಮುಖಂಡ ಸಲ್ಮಾನ್ ನಿಜಾಮಿ, ಮಸ್ಕೂರ್ ಉಸ್ಮಾನಿ ಮತ್ತು ಶಾಮಾ ಮೊಹಮ್ಮದ್, ಬರಹಗಾರ ಸಬಾ ನಖ್ವಿ ಮತ್ತು ಸಾಮಾಜಿಕ ಮಾಧ್ಯಮ ಟ್ವಿಟ್ಟರ್ನ ಐಎನ್ಸಿ ಮತ್ತು ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾದ ವಿರುದ್ದ ಎಫ್ಐಆರ್ ದಾಖಲಾಗಿತ್ತು.
ಆ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿ ಘಾಜಿಯಾಬಾದ್ ಪೊಲೀಸರು ಟ್ವಿಟ್ಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿಗೆ ನೊಟೀಸ್ ಕಳುಹಿಸಿತ್ತು. ಆ ಬಳಿಕ ಉತ್ತರ ಪ್ರದೇಶದ ಪೊಲೀಸರು ಟ್ವಿಟ್ಟರ್ ಇಂಡಿಯಾದ ಮನೀಶ್ಗೆ ನೀಡಿದ್ದ ನೋಟಿಸ್ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. "ಪೊಲೀಸರು ತನಿಖೆ ಮಾಡಲು ಅಥವಾ ಪ್ರಶ್ನಿಸಲು ಬಯಸಿದರೆ, ಅವರು ಅದನ್ನು ವರ್ಚುವಲ್ ಮೋಡ್ ಮೂಲಕ ಮಾಡಬಹುದು," ಎಂದು ನ್ಯಾಯಾಲಯ ಹೇಳಿತ್ತು.
ಭಾರತ ಸರ್ಕಾರವು ಹೊಸ ಐಟಿ ನಿಯಮವನ್ನು ಜಾರಿಗೆ ತಂದಿದ್ದು, ಮೇ 25 ರಿಂದ ಜಾರಿಗೆ ಬಂದ ಹೊಸ ನಿಯಮವು ಬಳಕೆದಾರರಿಂದ ಅಥವಾ ಯಾವುದೇ ಸಂತ್ರಸ್ಥರಿಂದ ದೂರುಗಳನ್ನು ಪಡೆದು ಅದನ್ನು ಪರಿಹರಿಸಲು ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಸ್ಥಾಪಿಸಲು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಆದೇಶ ನೀಡುತ್ತವೆ.
ಈ ನಿಯಮದ ಪ್ರಕಾರ ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿ ಎಂಬ ಮೂರು ಪ್ರಮುಖ ಸಿಬ್ಬಂದಿಯನ್ನು ನೇಮಕ ಮಾಡಬೇಕು, ಈ ಮೂವರೂ ಅಧಿಕಾರಿಗಳು ಭಾರತದ ನಿವಾಸಿಗಳಾಗಿರಬೇಕು. ಆದರೆ ಈ ಹೊಸ ಐಟಿ ನಿಯಮಗಳನ್ನು ಪಾಲಿಸುವಲ್ಲಿ ದೇಶದಲ್ಲಿ 1.75 ಕೋಟಿ ಬಳಕೆದಾರರನ್ನು ಹೊಂದಿರುವ ಟ್ವಿಟ್ಟರ್ ವಿಫಲವಾಗಿದೆ.
ಕುಂದುಕೊರತೆ ಅಧಿಕಾರಿಯಾಗಿದ್ದ ಭಾರತ ಮೂಲದ ಧರ್ಮೇಂದ್ರ ಚತುರ್ ತನ್ನ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದು, ಇದಾದ ಒಂದು ದಿನದ ನಂತರ ಕ್ಯಾಲಿಫೋರ್ನಿಯಾ ಮೂಲದ ಜೆರೆಮಿ ಕೆಸೆಲ್ನನ್ನು ಭಾರತದ ಹೊಸ ಕುಂದುಕೊರತೆ ಅಧಿಕಾರಿಯಾಗಿ ಟ್ವಿಟ್ಟರ್ ನೇಮಿಸಿದೆ. ಈ ಮೂಲಕ ಹೊಸ ಐಟಿ ನಿಯಮವನ್ನು ಟ್ವಿಟ್ಟರ್ ಉಲ್ಲಂಘಿಸಿದೆ. ಒಟ್ಟಾರೆಯಾಗಿ ಭಾರತ ಸರ್ಕಾರ ಹಾಗೂ ಟ್ವಿಟ್ಟರ್ ನಡುವೆ ಭಾರೀ ಜಟಾಪಟಿ ನಡೆಯುತ್ತಲಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications