ಶಾಸಕನಿಗೆ ಸೇರಿದ ಅಕ್ರಮ ಕಟ್ಟಡಗಳ ನೆಲಸಮ ಮಾಡಿದ ಯೋಗಿ ಸರ್ಕಾರ
ಲಕ್ನೋ, ಆಗಸ್ಟ್ 27: ಸರ್ಕಾರಿ ಭೂಮಿಯ ಮೇಲಿನ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶದ ಅಧಿಕಾರಿಗಳು ಮಾಜಿ ಗ್ಯಾಂಗ್ಸ್ಟರ್, ಶಾಸಕ ಮುಖ್ತಾರ್ ಅನ್ಸಾರಿ ಮಾಲೀಕತ್ವದ ಎರಡು ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿದ್ದಾರೆ. ಲಕ್ನೋದ ಐಷಾರಾಮಿ ದಾಲಿಬಾಗ್ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ವೇಳೆ ಭಾರಿ ಪ್ರಮಾಣದ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದರು.
'ಉತ್ತರ ಪ್ರದೇಶ ಪೊಲೀಸರು ಇಂದು ಗ್ಯಾಂಗ್ ಸ್ಟರ್ ಮುಖ್ತಾರ್ ಅನ್ಸಾರಿಗೆ ಸೇರಿದ ಅಕ್ರಮ ಆಸ್ತಿಗಳನ್ನು ನೆಲಸಮಗೊಳಿಸಿದ್ದಾರೆ. ಈ ತೆರವು ಕಾರ್ಯಾಚರಣೆಗೆ ತಗುಲಿದ ಸಂಪೂರ್ಣ ವೆಚ್ಚವನ್ನು ಗ್ಯಾಂಗ್ಸ್ಟರ್ನಿಂದಲೇ ಯೋಗಿ ಸರ್ಕಾರ ವಸೂಲಿ ಮಾಡಲಿದೆ' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ ಮೃತ್ಯುಂಜಯ್ ಕುಮಾರ್ ಹೇಳಿದ್ದಾರೆ.

'ಅಪರಾಧಿಗಳು ತಮ್ಮ ಅಪರಾಧಗಳನ್ನು ತ್ಯಜಿಸಬೇಕು ಇಲ್ಲವೇ ಇಂತಹ ಕಠಿಣ ನಿರ್ಧಾರಗಳನ್ನು ಎದುರಿಸಲು ಸಿದ್ಧರಾಗಿರಬೇಕು' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನಕ್ಕೆ ವಲಸೆ ಹೋಗಿದ್ದ ಜನರಿದ್ದ ಸ್ಥಳದಲ್ಲಿ ಈ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಲಕ್ನೋ ಅಭಿವೃದ್ಧಿ ಪ್ರಾಧಿಕಾರವು ಈ ಆಸ್ತಿಯ ನಕಾಶೆಯನ್ನು ಅಂಗೀರಿಸಿರಲಿಲ್ಲ. ಈ ಕಾರ್ಯಾಚರಣೆಯ ಸಂಪೂರ್ಣ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಲಾಗುತ್ತದೆ. ಈ ಅಕ್ರಮ ಕಟ್ಟಡ ನಿರ್ಮಾಣಕ್ಕೆ ನೆರವು ನೀಡಿದ್ದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ಮೌ ಪ್ರದೇಶದ ಬಿಎಸ್ಪಿ ಶಾಸಕರಾಗಿರುವ ಮುಖ್ತಾರ್ ಅನ್ಸಾರಿಯ ಸಹಚರರಿಗೆ ಸೇರಿದ್ದ ಕೆಲವು ಆಸ್ತಿ ಪಾಸ್ತಿಗಳನ್ನು ಇತ್ತೀಚೆಗೆ ಸರ್ಕಾರ ಜಪ್ತಿ ಮಾಡಿತ್ತು. ಘಾಜಿಪುರ್ನಲ್ಲಿ ಅನ್ಸಾರಿಯ ನಾಲ್ವು ಸಹವರ್ತಿಗಳ ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಿತ್ತು.












Click it and Unblock the Notifications