ಗೋರಖ್ಪುರ ಕಣದಲ್ಲಿ ಯೋಗಿ V/s ಚಂದ್ರಶೇಖರ್ ಆಜಾದ್ ಸ್ಪರ್ಧೆ
ಲಕ್ನೋ, ಜನವರಿ 20: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಕಣ ರಣರೋಚಕ ತಿರುವುಗಳಿಗೆ ಸಾಕ್ಷಿ ಆಗುತ್ತಿದೆ. ಬಿಜೆಪಿ, ಸಮಾಜವಾದಿ, ಕಾಂಗ್ರೆಸ್ ಪಕ್ಷದ ನಾಯಕರು ಶಾಸಕರು ಮತ್ತು ಸಚಿವರು ಮಗ್ಗಲು ಬದಲಿಸುವ ಆಟದಲ್ಲಿ ಬ್ಯುಸಿ ಆಗಿದ್ದಾರೆ. ಇದರ ಮಧ್ಯೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪರ್ಧಿಸುತ್ತಿರುವ ಗೋರಖ್ಪುರ ಕ್ಷೇತ್ರವು ಪ್ರತಿಷ್ಠೆಯ ಕಣವಾಗುತ್ತಿದೆ.
ಗೋರಖ್ಪುರ ವಿಧಾನಸಭೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪರ್ಧಿಸುವುದು ಪಕ್ಕಾ ಆಗಿದೆ. ಅದೇ ಕ್ಷೇತ್ರದಲ್ಲಿ ಸಿಎಂ ವಿರುದ್ಧ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಈಗ ಸದ್ದು ಮಾಡುತ್ತಿದೆ. ಹಾಲಿ ಸಿಎಂ ವಿರುದ್ಧ ತಾವು ಸ್ಪರ್ಧಿಸುವುದಾಗಿ ಆಜಾದ್ ಟ್ವೀಟ್ ಮೂಲಕ ಗುರುವಾರ ಘೋಷಿಸಿದ್ದಾರೆ.
आजाद समाज पार्टी काशीराम के राष्ट्रीय अध्यक्ष चन्द्र शेखर आजाद जी गोरखपुर सदर ( 322) से लड़ेंगे विधानसभा चुनाव। @BhimArmyChief pic.twitter.com/cwYWH4C3lm
— Azad Samaj Party (@AzadSamajParty) January 20, 2022
"ಆಜಾದ್ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಕಾಶಿರಾಮ್, ಚಂದ್ರಶೇಖರ್ ಆಜಾದ್ ಜಿ ಅವರು ಗೋರಖ್ಪುರ ಸದಾರ್ (322) ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ," ಎಂದು ಪಕ್ಷವು ಟ್ವೀಟ್ ಮಾಡಿದೆ ಮತ್ತು ಪತ್ರವೊಂದನ್ನು ಶೇರ್ ಮಾಡಿದೆ.
ಗೋರಖ್ಪುರದಲ್ಲಿ ಯೋಗಿ ಆದಿತ್ಯನಾಥ್ ಸ್ಪರ್ಧೆ:
ಉತ್ತರ ಪ್ರದೇಶದ ಗೋರಖ್ಪುರದಿಂದಲೇ ಯೋಗಿ ಆದಿತ್ಯನಾಥ್ ಸ್ಪರ್ಧಿಸುವುದರ ಬಗ್ಗೆ ಬಿಜೆಪಿ ಈಗಾಗಲೇ ಖಚಿತಪಡಿಸಿದೆ. ಈ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿ ಐದು ಬಾರಿ ಲೋಕಸಭೆಗೆ ಆಯ್ಕೆಯಾದ ಗೋರಖ್ಪುರದಿಂದಲೇ ವಿಧಾನಸಭೆಗೆ ಸ್ಪರ್ಧಿಸುವುದಕ್ಕೆ ಯೋಗಿ ಯೋಜನೆ ಹಾಕಿಕೊಂಡಿದ್ದಾರೆ. ಗೋರಖ್ಪುರ ಆದಿತ್ಯನಾಥ್ ಅವರ ಹುಟ್ಟೂರಾಗಿದ್ದು, 1998 ರಿಂದ 2017ರವರೆಗೆ ಇದೇ ಕ್ಷೇತ್ರದಿಂದ ಲೋಕಸಭೆಗೆ ಐದು ಬಾರಿ ಆಯ್ಕೆಯಾಗಿದ್ದರು.
ಉತ್ತರ ಪ್ರದೇಶ ಚುನಾವಣೆ: ಪಕ್ಷದ ಗೆಲುವಿಗಿಂತ ಯೋಗಿ ಗೆಲುವು ಮೋದಿ-ಶಾಗೆ ಯಾಕೆ ಮುಖ್ಯ?
ಉತ್ತರ ಪ್ರದೇಶದಲ್ಲಿ ಚುನಾವಣೆ ಲೆಕ್ಕಾಚಾರ ಹೀಗಿದೆ:
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.