ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿದ ಹಿರಿಯ ಕಾಂಗ್ರೆಸ್ಸಿಗ
ಲಕ್ನೋ, ಮೇ 24: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೋದಿ- ಅಮಿತ್ ಶಾ ಅವರನ್ನು ಎದುರಿಸಿ ಕಾಂಗ್ರೆಸ್ಸಿಗೆ ಕಳೆದುಕೊಂಡಿರುವ ಘನತೆಯನ್ನು ಪುನಃ ದೊರಕಿಸಿಕೊಡುವುದಾಗಿ ರಾಜ್ ಬಬ್ಬರ್ ಪಣತೊಟ್ಟಿದ್ದರು. ಆದರೆ, ತಮ್ಮ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ಉತ್ತಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಏಪ್ರಿಲ್ 11ರಿಂದ ಮೇ 19 ರ ತನಕ ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶ ಮೇ 23ರಂದು ಹೊರ ಬಂದಿದೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಅಭೂತಪೂರ್ವ ಜಯ ಸಾಧಿಸಿದೆ.
ಅತಿ ಹೆಚ್ಚು ಲೋಕಸಭಾ ಕ್ಷೇತ್ರ(80)ಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಹಾಗೂ ಅಪ್ನಾ ದಳ್ ಸೇರಿ 62 ಸ್ಥಾನ ಗಳಿಸಿವೆ. ಕಾಂಗ್ರೆಸ್ ನಂತೆ ಬಿಜೆಪಿ ವಿರುದ್ಧ ನಿಂತಿದ್ದ ಎಸ್ ಪಿ ಬಿಎಸ್ಪಿ ಮೈತ್ರಿ ಕೂಟ ಕೂಡಾ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಬಿಎಸ್ಪಿ 10, ಎಸ್ಪಿ 5 ಗಳಿಸಿದರೆ, ಕಾಂಗ್ರೆಸ್ 1 ಸ್ಥಾನ ಮಾತ್ರ ಗಳಿಸಿ ಹೀನಾಯ ಸೋಲು ಕಂಡಿದೆ.

ಗಾಯದ ಮೇಲೆ ಬರೆ ಎಳೆದಂತೆ ಅಮೇಥಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಸ್ಮೃತಿ ಇರಾನಿ ಜಯ ದಾಖಲಿಸಿದ್ದಾರೆ.
ಹೀಗಾಗಿ, ಉತ್ತರ ಪ್ರದೇಶದಲ್ಲಿ ಪಕ್ಷದ ಕಳಪೆ ಸಾಧನೆಯ ಹೊಣೆ ಹೊತ್ತು ಅಧ್ಯಕ್ಷ ರಾಜ್ ಬಬ್ಬರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ರಾಜ್ ಬಬ್ಬರ್ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದರೆ, ರಾಜೀನಾಮೆ ಪತ್ರಗಳನ್ನು ಇನ್ನು ಸ್ವೀಕರಿಸಿಲ್ಲ.
2014ರಲ್ಲಿ ಎನ್ಡಿಎ 73 ಸ್ಥಾನ ಗಳಿಸಿತ್ತು. ಈ ಬಾರಿ ಕಾಂಗ್ರೆಸ್ ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರ ಗೆಲುವಿನ ಸಂಭ್ರಮವನ್ನು ಆಚರಿಸಬೇಕೋ, ಮಿಕ್ಕ ಕ್ಷೇತ್ರಗಳಲ್ಲಿ ಸೋತಿದ್ದಕ್ಕೆ ವ್ಯಥೆ ಪಡಬೇಕೋ ತಿಳಿಯದೇ ಮೌನಕ್ಕೆ ಶರಣಾಗಿದೆ.












Click it and Unblock the Notifications