ಪರಿಸ್ಥಿತಿ ನಿಯಂತ್ರಣದಲ್ಲಿದೆ, ಮೂರನೇ ಅಲೆ ಎದುರಿಸಲು ನಾವು ಸಜ್ಜು: ಯುಪಿ ಸಿಎಂ
ಲಕ್ನೊ, ಮೇ 17: ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ನಿಯಂತ್ರಣ ತಪ್ಪಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಉತ್ತರ ಪ್ರವೇಶ ಈಗ ಮೂರನೇ ಅಲೆಯನ್ನು ಎದುರಿಸಲು ಸಜ್ಜಾಗಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಗ್ರಾಮೀಣ ಭಾಗಗಳಲ್ಲಿ ಕೊರೊನಾ ವೈರಸ್ನ ಹರಡುವಿಕೆಯನ್ನು ಪತ್ತೆಹಚ್ಚಲು ಹೆಚ್ಚುವರಿ ಪರೀಕ್ಷಾ ಕಿಟ್ಗಳು, ವೈದ್ಯಕೀಯ ಸಲಕರಣೆಗಳು ಹಾಗೂ ತರಬೇತಿ ಪಡೆದ ತಂಡಗಳನ್ನು ಕಳುಹಿಸಲಾಗಿದೆ ಎಂದು ಯುಪಿ ಮುಖ್ಯಮಂತ್ರಿ ಹೇಳಿದ್ದಾರೆ.
"ನಾವು ಯಾವುದನ್ನು ಕೂಡ ಮುಚ್ಚಿಡುವುದಿಲ್ಲ. ಎಲ್ಲವೂ ಕೂಡ ಪಾರದರ್ಶಕವಾಗಿದೆ. ಪರೀಕ್ಷೆಯ ಎಲ್ಲಾ ಮಾಹಿತಿಗಳು, ಚೇತರಿಕೆ ಕಂಡವರು, ಮೃತಪಟ್ಟವರ ಮಾಹಿತಿಯನ್ನು ಸರ್ಕಾರಿ ಕೋವಿಡ್ ವೆಬ್ಸೈಟ್ನಲ್ಲಿ ದಾಖಲಿಸಲಾಗುತ್ತಿದೆ" ಎಂದು ನೋಯ್ಡಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ವೇಳೆ ಯೋಗಿ ಆದಿತ್ಯನಾಥ್ ಮಾಹಿತಿಯನ್ನು ನೀಡಿದ್ದಾರೆ.

"ಉತ್ತರ ಪ್ರದೇಶದ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಪರಿಸ್ಥಿತಿಗಳು ನಿಯಂತ್ರಣದಲ್ಲಿಲ್ಲ ಎಂಬ ಆತಂಕಗಳು ವ್ಯಕ್ತವಾಗುತ್ತಿದೆ. ಆದರೆ ಅದು ನಮ್ಮ ನಿಯಂತ್ರಣ ತಪ್ಪಿಲ್ಲ ಎಂದಿದ್ದಾರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಮುಂದುವರಿದು ಮಾತನಾಡಿದ ಅವರು ಜಪಾನ್ನ ಎನ್ಸೆಫಾಲಿಟೀಸ್ ರೋಗದ ವಿರುದ್ಧ ವರ್ಷಗಳಿಂದ ಹೋರಾಡುತ್ತಿರುವ ಉತ್ತರ ಪ್ರದೇಶ ರಾಜ್ಯ ಕೊರೊನಾ ವೈರಸ್ನ ಮೂರನೇ ಅಲೆಯನ್ನು ಕೂಡ ಎದುರಿಸುವಷ್ಟು ಸಮರ್ಥವಾಗಿದೆ ಎಂದಿದ್ದಾರೆ.
ಬೇರೆ ಬೇರೆ ಇಲಾಖೆಗಳ ಸದಸ್ಯರನ್ನು ಒಳಗೊಂಡಿರುವ ಸಮಿತಿಯನ್ನು ರಚಿಸಲಾಗಿದ್ದು ಅವರು ಪರಿಸ್ಥಿತಿಯ ಮೇಲೆ ನಿಗಾವಹಿಸಿದ್ದಾರೆ. 1,200-1,500 ಹಾಸಿಗೆಗಳನ್ನು ಹೊಂದಿರುವ ಜಿಲ್ಲಾ ಆಸ್ಪತ್ರೆಗಳನ್ನು ಹೊರತುಪಡಿಸಿ, ಹಳ್ಳಿಗಳಲ್ಲಿಯೂ ಜನರಿಗೆ ಸಹಕಾರಿಯಾಗುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಹಿತಿ ಹೇಳಿದರು.












Click it and Unblock the Notifications