ಕೊರೊನಾ ಲಸಿಕೆ ಬಗ್ಗೆ ಅಪಪ್ರಚಾರ: ಲಸಿಕೆಯಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿದ ಹಳ್ಳಿಗರು!
ಲಕ್ನೋ, ಮೇ 24: ದೇಶಾದ್ಯಂತ ಕೊರೊನಾವೈರಸ್ನ ಎರಡನೇ ಅಲೆ ಭಾರೀ ಹಾನಿಯುಂಟು ಮಾಡಿದ ಹಿನ್ನೆಲೆಯಲ್ಲಿ ಲಸಿಕೆ ಕಾರ್ಯಕ್ಕೆ ಚುರುಕು ಮುಟ್ಟಿಸುವ ಪ್ರಯತ್ನ ನಡೆದಿದೆ. ಆದರೆ ಈಗ ದೇಶಾದ್ಯಂತ ಲಸಿಕೆಯ ಕೊರತೆ ಹೆಚ್ಚಾಗಿದೆ. ಈ ಮಧ್ಯೆ ಉತ್ತರ ಪ್ರದೇಶದಲ್ಲಿ ಲಸಿಕೆ ಹಾಕಿಸಲು ಹಳ್ಳಿಯೊಂದಕ್ಕೆ ವೈದ್ಯಕೀಯ ಸಿಬ್ಬಂದಿಗಳು ತೆರಳಿದ್ದರೆ ಅಲ್ಲಿನ ಜನರು ನದಿಗೆ ಹಾರಿ ತಪ್ಪಿಸಿಕೊಂಡು ಓಡಿರುವ ಘಟನೆ ನಡೆದಿದೆ.
ಈ ವಿಚಿತ್ರ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬಾರಾಬಂಕಿಯ ಗ್ರಾಮವೊಂದರಲ್ಲಿ. ವೈದ್ಯಕೀಯ ಸಿಬ್ಬಂದಿಗಳ ತಂಡ ಲಸಿಕೆ ನೀಡುವ ಸಲುವಾಗಿ ಈ ಗ್ರಾಮಕ್ಕೆ ತೆರಳಿದ್ದರು. ಈ ಸುದ್ದಿ ತಿಳಿದ ಅಲ್ಲಿನ ಜನರು ಆತಂಕದಿಂದ ಸಮೀಪದಲ್ಲಿದ್ದ ಸರಯೂ ನದಿಗೆ ಹಾರಿ ಪಲಾಯನ ಮಾಡುವ ಪ್ರಯತ್ನ ನಡೆಸಿದ್ದಾರೆ. ಶನಿವಾರ ಈ ಘಟನೆ ನಡೆದಿದೆ ಎಂದು ರಾಮ್ನಗರ ತಹಸಿಲ್ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೀವ್ ಕುಮಾರ್ ಶುಕ್ಲಾ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸ್ಥಳೀಯ ಜನರಿಗೆ ಅಧಿಕಾರಿಗಳು ಲಸಿಕೆಯ ಮಹತ್ವ ಮತ್ತು ಉಪಯೋಗಗಳ ಬಗ್ಗೆ ಮಾಹಿತಿ ನೀಡುವ ಪ್ರಯತ್ನವನ್ನು ನಡೆಸಿದರು. ಜನರಲ್ಲಿ ಲಸಿಕೆಯ ಬಗ್ಗೆ ಹೊಂದಿದ್ದ ಆತಂಕವನ್ನು ಹೋಗಲಾಡಿಸುವ ಪ್ರಯತ್ನಗಳು ಕೂಡ ನಡೆದವು. ಹಾಗಿದ್ದರೂ ಕೂಡ ಇಡೀ ಗ್ರಾಮದಲ್ಲಿ ಕೇವಲ 14 ಜನರು ಮಾತ್ರವೇ ಈ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

ಇನ್ನು ನದಿಗೆ ಹಾರಿದ ವಿಚಾರವಾಗಿ ಗ್ರಾಮಸ್ಥರು ಕೂಡ ಮಾತನಾಡಿದ್ದಾರೆ. ವೈದ್ಯಕೀಯ ಸಿಬ್ಬಂದಿಗಳು ಹಾಕಲು ಬಂದಿರುವುದು ಲಸಿಕೆ ಅಲ್ಲ ಬದಲಾಗಿ ವಿಷಕಾರಿ ಇಂಜಕ್ಷನ್ ಎಂದು ಕೆಲ ಜನರು ಹೇಳಿರುವುದಾಗಿ ಅವರು ತಿಳಿಸಿದ್ದಾರೆ. ಇದರಿಂದಾಗಿ ಹಳ್ಳಿಯ ಜನರ ಮತ್ತಷ್ಟು ಹೆಚ್ಚಾಗಿತ್ತು ಎನ್ನಲಾಗಿದೆ.
ಭಾರತದಲ್ಲಿ ಸದ್ಯ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಮುಖ ಕಂಡು ಬರುತ್ತಿದೆ. ಆದರೆ ನಿತ್ಯ ಸಾವಿನ ಪ್ರಮಾಣ ಏರಿಕೆಯಾಗುತ್ತಲೇ ಸಾಗಿದ್ದು ಆತಂಕ ಹೆಚ್ಚಾಗಿದೆ. ಈ ಮಧ್ಯೆ ಎರಡನೇ ಅಲೆಯಲ್ಲಿ ಕೊರೊನಾ ವೈರಸ್ ಅಲೆ ಗ್ರಾಮೀಣ ಭಾಗವನ್ನು ಕೂಡ ಹೆಚ್ಚಾಗಿ ಬಾಧಿಸುತ್ತಿದೆ. ಹೀಗಾಗಿ ಲಸಿಕೆ ಪ್ರಮಾಣವನ್ನು ಹೆಚ್ಚಳ ಮಾಡಬೇಕಿರುವ ಅನಿವಾರ್ಯತೆಯನ್ನು ಆರೋಗ್ಯ ತಜ್ಞರು ಒತ್ತಿ ಹೇಳುತ್ತಿದ್ದಾರೆ.












Click it and Unblock the Notifications