ಉನ್ನಾವ ಅತ್ಯಾಚಾರ ಸಂತ್ರಸ್ತೆಯ ಮನೆಗೆ ಹೋಗ್ತಾರಾ ಸಿಎಂ ಯೋಗಿ?
ಲಕ್ನೊ, ಡಿಸೆಂಬರ್ 8; ಉತ್ತರ ಪ್ರದೇಶದ ಉನ್ನಾವದಲ್ಲಿ ಅತ್ಯಾಚಾರವಾಗಿ ಕೊಲೆಯಾದ ಬಾಲಕಿಯ ಶವ ಸಂಸ್ಕಾರವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಬರುವವರೆಗೂ ಮಾಡುವುದಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದಿದ್ದಾರೆ.
ಉನ್ನಾವದ ಬಾಲಕಿ ಮೇಲೆ ಆತ್ಯಾಚಾರ ನಡೆಸಿ ಬಂಧನಕ್ಕೆ ಒಳಗಾಗಿ ಹೊರ ಬಂದಿದ್ದ ಆರೋಪಿಗಳೇ ಕಳೆದ ವಾರ ಬಾಲಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ತೀವ್ರ ಗಾಯಗೊಂಡಿದ್ದ ಆಕೆ, ಚಿಕಿತ್ಸೆ ಫಲಿಸದೇ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಅಂತ್ಯ ಸಂಸ್ಕಾರಕ್ಕೆ ಶವವನ್ನು ಉನ್ನಾವಗೆ ತೆಗೆದುಕೊಂಡು ಹೋಗಲಾಗಿತ್ತು.
ಭಾನುವಾರ ಮೃತಳ ಅಂತ್ಯ ಸಂಸ್ಕಾರ ನಡೆಸಲು ತಿರ್ಮಾನಿಸಲಾಗಿತ್ತು. ಆದರೆ, ಕುಟುಂಬಸ್ಥರು ಹಾಗೂ ಬಾಲಕಿ ಸಹೋದರಿ ಒಬ್ಬಳು ಮುಖ್ಯಮಂತ್ರಿ ಸ್ಥಳಕ್ಕೆ ಬರುವವರೆಗೂ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಸಿಎಂ ಯೋಗಿ ಬರಬೇಕು, ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಮೃತಳ ಸಹೋದರಿ ಮಾದ್ಯಮಗಳಿಗೆ ತಿಳಿಸಿದ್ದಾಳೆ. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಆದರೆ, ಸರ್ಕಾರ ಅಂತ್ಯ ಸಂಸ್ಕಾರ ನಡೆಸಿ ಎಂದು ಮಾತುಕತೆ ನಡೆಸುತ್ತಿದೆ. ಈಗಾಗಲೇ ಮೃತಳಿಗೆ ಪರಿಹಾರವಾಗಿ ಯೋಗಿ ಅವರು 25 ಲಕ್ಷ ರುಪಾಯಿ ಘೋಷಿಸಿದ್ದಾರೆ. ವಿಚಾರಣೆಗಾಗಿ ತ್ವರಿತ ನ್ಯಾಯಾಲಯ ಸ್ಥಾಪಿಸಲಾಗಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಶಾಸಕ ಕುಲದೀಪ ಸಿಂಗ್ ಸೆಹಾರ್ ಹಾಗೂ ಇತರ ಐವರನ್ನು ಬಂಧಿಸಲಾಗಿತ್ತು. ಆದರೆ, ಉನ್ನಾವಗೆ ಸಿಎಂ ಯೋಗಿ ಬರಲೇಬೇಕು ಎಂದು ಪಟ್ಟು ಹಿಡಿದಿರುವುದರಿಂದ ಇನ್ನೂ ಅಂತ್ಯ ಸಂಸ್ಕಾರ ನಡೆದಿಲ್ಲ. ಯೋಗಿ ಅವರು ಉನ್ನಾವ ಗೆ ಹೋಗುತ್ತಾರಾ? ಎಂಬುದು ಸದ್ಯದ ಪ್ರಶ್ನೆಯಾಗಿದೆ.












Click it and Unblock the Notifications