ಕನ್ವರ್ ಯಾತ್ರೆ: "ಧಾರ್ಮಿಕ ಹಕ್ಕಿಗಿಂತ ಜೀವಿಸುವ ಹಕ್ಕು ಅತ್ಯುನ್ನತ ಎಂದ ಸುಪ್ರೀಂಕೋರ್ಟ್
ಲಕ್ನೋ, ಜುಲೈ 16: "ಆರೋಗ್ಯ ಮತ್ತು ಜೀವಿಸುವ ಹಕ್ಕು ಎಲ್ಲದಕ್ಕಿಂತ ಅತ್ಯುನ್ನತವಾಗಿದೆ," ಎಂದು ಸುಪ್ರೀಂಕೋರ್ಟ್ ಹೇಳಿದೆ. ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ನಡುವೆ ಕನ್ವರ್ ಯಾತ್ರೆ ನಡೆಸುವುದಕ್ಕೆ ಅನುಮತಿ ನೀಡಿರುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಕೋರ್ಟ್ ಸೂಚಿಸಿದೆ.
ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಆರ್ ಎಫ್ ನಾರಿಮನ್ ನೇತೃತ್ವದ ಪೀಠ ಈ ಬಗ್ಗೆ ತಿಳಿಸಿದೆ. ಧಾರ್ಮಿಕ ಹಾಗೂ ಎಲ್ಲ ಇತರೆ ಭಾವನೆಗಳಿಗಿಂತ ಜನರ ಮೂಲಭೂತ ಹಕ್ಕುಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕೊರೊನಾವೈರಸ್ ಕೃಪೆ: ಭಕ್ತಾದಿಗಳ ಮನೆ ಬಾಗಿಲಿಗೆ ಪವಿತ್ರ ಗಂಗಾ ಜಲ!
"ಇದು ನಮ್ಮೆಲ್ಲರಿಗೂ ಸಂಬಂಧಿಸಿರುವ ಬದುಕುವ ಮೂಲಭೂತ ಹಕ್ಕಿನ ಜೀವಾಳ(ಹೃದಯಭಾಗ) ಎಂಬ ಅಭಿಪ್ರಾಯವನ್ನು ಹೊಂದಿದ್ದೇವೆ. ಭಾರತೀಯ ಪ್ರಜೆಗಳ ಆರೋಗ್ಯ ಮತ್ತು ಜೀವಿಸುವ ಹಕ್ಕು ಎನ್ನುವುದು ಎಲ್ಲ ಧಾರ್ಮಿಕ ಹಾಗೂ ಇತರೆ ಮೂಲಭೂತ ಹಕ್ಕುಗಳಿಗಿಂತ ಅತ್ಯುನ್ನತವಾಗಿರುತ್ತದೆ," ಎಂದು ಮುಖ್ಯ ನ್ಯಾ. ಆರ್ ಎಫ್ ನಾರಿಮನ್ ಹೇಳಿದ್ದಾರೆ. ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.
ಕನ್ವರ್ ಯಾತ್ರೆ ಕುರಿತು ನಿರ್ಧಾರ ಮರುಪರಿಶೀಲಿಸಿ
ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ನಡೆಸುವ ಬಗ್ಗೆ ಸರ್ಕಾರ ಈ ಮೊದಲು ತೆಗೆದುಕೊಂಡಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು. ಇಲ್ಲದಿದ್ದರೆ ನ್ಯಾಯಾಲಯವೇ ಆದೇಶ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. "ಕನ್ವರ್ ಯಾತ್ರೆಯನ್ನು ನಡೆಸಬೇಕು ಎಂಬ ನಿರ್ಧಾರವನ್ನು ಮರುಪರಿಶೀಲಿಸಲು ನಾವು ಇನ್ನೊಂದು ಅವಕಾಶ ನೀಡುತ್ತೇವೆ. ತಿದ್ದಿಕೊಳ್ಳದಿದ್ದರೆ ನಾವೇ ಆದೇಶ ರವಾನಿಸುತ್ತೇವೆ. ನಾವೆಲ್ಲರೂ ಭಾರತೀಯರು ಮತ್ತು 21ನೇ ಕಾಯ್ದೆಯು ನಮ್ಮೆಲ್ಲರಿಗೂ ಅನ್ವಯವಾಗುತ್ತದೆ. ನೀವೇ ಮರುಪರಿಶೀಲಿಸಿ ಇಲ್ಲವೇ ನಾವೇ ಆದೇಶ ಹೊರಡಿಸುತ್ತೇವೆ," ಎಂದು ಕೋರ್ಟ್ ಹೇಳಿದೆ.
ಭಕ್ತಾದಿಗಳಿಗೆ ಟ್ಯಾಂಕರ್ ಮೂಲಕ ಗಂಗಾಜಲ
"ಇದು ತೀರಾ ಹಳೆಯ ಪದ್ಧತಿಯಾಗಿದೆ. ಧಾರ್ಮಿಕ ಭಾವನೆಗಳನ್ನು ಪರಿಗಣಿಸಿ, ಪವಿತ್ರ ಗಂಗಾಜಲವನ್ನು ಟ್ಯಾಂಕರ್ಗಳ ಮೂಲಕ ಒದಗಿಸುವ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು. ಗಂಗಾ ಜಲ ವಿತರಣೆ ವೇಳೆ ರಾಜ್ಯಗಳು ಮತ್ತು ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲ ನಿಯಮಾವಳಿಗಳನ್ನು ಪಾಲನೆ ಮಾಡಬೇಕು ಎಂದು ಸರ್ವೋಚ್ಛ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರವು ತಿಳಿಸಿತ್ತು.
ಉತ್ತರ ಪ್ರದೇಶ ಸರ್ಕಾರದ ವಾದವೇನು?
ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ "ಸಾಂಕೇತಿಕ ಯಾತ್ರೆಗೆ ಮಾತ್ರ ಅವಕಾಶ ನೀಡಲಾಗಿದೆ. ಎರಡೂ ಡೋಸ್ ಲಸಿಕೆ ಪಡೆದಿರುವ ಭಕ್ತಾದಿಗಳಿಗಷ್ಟೇ ಯಾತ್ರೆಯಲ್ಲಿ ಭಾಗವಹಿಸುವುದಕ್ಕೆ ಅನುಮತಿ ನೀಡಲಾಗಿದೆ. ಉತ್ತರ ಪ್ರದೇಶ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಯಾರು ಯಾತ್ರೆಯಲ್ಲಿ ಭಾಗವಹಿಸುತ್ತಾರೋ ಅವರು ಸಂಪೂರ್ಣವಾಗಿ ಲಸಿಕೆಯನ್ನು ಪಡೆದುಕೊಂಡಿರಬೇಕು. ಹಲವು ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ಗಂಗಾಜಲವನ್ನು ನೀಡಲಾಗುತ್ತದೆ," ಎಂದು ಉತ್ತರ ಪ್ರದೇಶ ಸರ್ಕಾರದ ಪರ ವಕೀಲ ಸಿ ಎಸ್ ವಿದ್ಯಾನಾಥನ್ ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್
"ನಾವೆಲ್ಲರೂ ಭಾರತೀಯರು ಎಂದ ಮೇಲೆ 21ರ ಕಾಯ್ದೆಯು ಎಲ್ಲರಿಗೂ ಅನ್ವಯವಾಗುತ್ತದೆ. ಇದರ ಹೊರತಾಗಿ ಉತ್ತರ ಪ್ರದೇಶವೊಂದೇ ಭೌತಿಕವಾಗಿ ಮುಂದುವರಿಯುವುದಕ್ಕೆ ಸಾಧ್ಯವಿಲ್ಲ," ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಆರ್ ಎಫ್ ನಾರಿಮನ್ ತಿಳಿಸಿದ್ದಾರೆ. ಕಳೆದ ವಾರವಷ್ಟೇ ಕನ್ವರ್ ಯಾತ್ರೆಗೆ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸಿದ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು.
ಕನ್ವರ್ ಯಾತ್ರೆಯ ಇತಿಹಾಸ?
ಸಾಮಾನ್ಯವಾಗಿ ಜುಲೈ ಕೊನೆಯ ವಾರದ ಶ್ರಾವಣ ಮಾಸದ ಪ್ರಾರಂಭದಲ್ಲಿ 15 ದಿನಗಳವರೆಗೂ ಈ ಯಾತ್ರೆ ನಡೆಸಲಾಗುತ್ತದೆ. ಕನ್ವರ್ ಯಾತ್ರೆ ವೇಳೆಯಲ್ಲಿ ಗಂಗಾ ನದಿ ನೀರನ್ನು ಶಿವನ ದೇವಾಲಯಗಳಲ್ಲಿ ಅರ್ಪಿಸಲು ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ದೆಹಲಿ ಮತ್ತು ಹಿಮಾಚಲ ಪ್ರದೇಶದ ಕೋಟ್ಯಾಂತರ ಭಕ್ತರು ಅಥವಾ ಕನ್ವರಿಯರು ಪವಿತ್ರ ನಗರವಾದ ಹರಿದ್ವಾರದಲ್ಲಿ ಒಟ್ಟುಗೂಡುತ್ತಾರೆ. ಕೋವಿಡ್ನ ಮೊದಲ ಅಲೆಯ ಕಾರಣದಿಂದಾಗಿ ಕಳೆದ ವರ್ಷವೂ ಯಾತ್ರೆ ರದ್ದುಗೊಳಿಸಲಾಗಿತ್ತು. ಈ ವರ್ಷ, ಜುಲೈ 2 ರಂದು ಉತ್ತರಾಖಂಡ ಸರ್ಕಾರವು ಕನ್ವರ್ ಯಾತ್ರೆಯನ್ನು ರದ್ದುಗೊಳಿಸಿದೆ.