ಸಣ್ಣ ಪಕ್ಷಗಳೊಂದಿಗೆ ಎಸ್ಪಿ ಮೈತ್ರಿ, ಇದು ಅಸಹಾಯಕತೆಯಲ್ಲದೇ ಮತ್ತೇನು ಎಂದ ಮಾಯಾವತಿ
ಲಕ್ನೋ, ಜುಲೈ 02: ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅಸಹಾಯಕತೆಯನ್ನು ತೋರಿಸುತ್ತದೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಎಸ್ಪಿಗೆ ಟಾಂಗ್ ನೀಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಗಾಗಿ ಸಣ್ಣಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಮಾಜವಾದಿ ಪಕ್ಷದ ನಿರ್ಧಾರವನ್ನು ಪಕ್ಷದ ಅಸಹಾಯಕತೆ ಎಂದು ಮಾಯಾವತಿ ಕರೆದಿದ್ದಾರೆ.
ಈ ಹಿಂದೆ ನಡೆದ ಚುನಾವಣೆಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮೈತ್ರಿ ಸಾಧಿಸಿ,ಚುನಾವಣೆ ಎದುರಿಸಿದ್ದರೂ, ಯಾವ ಪಕ್ಷಕ್ಕೂ ನಿರೀಕ್ಷಿತ ಫಲಿತಾಂಶ ದೊರೆತಿರಲಿಲ್ಲ. ಈ ಕಹಿ ಅನುಭವದ ಕಾರಣದಿಂದಾಗಿಯೇ ಪ್ರಮುಖ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಹಿಂಜರಿಯುತ್ತಿವೆ ಎಂದು ವಿಶ್ಲೇಷಿಸಲಾಗಿದೆ.

ತಮ್ಮದೇ ಸ್ವಾರ್ಥ ಹಾಗೂ ಸಂಕುಚಿತ ದೃಷ್ಟಿಕೋನದ ಫಲವಾಗಿ ಸಮಾಜವಾದಿ ಪಕ್ಷ ಈ ಹಿಂದಿನ ಚುನಾವಣೆಗಳಲ್ಲಿ ಸೋಲು ಅನುಭವಿಸಿದೆ. ಅದರಲ್ಲೂ, ಪರಿಶಿಷ್ಟರ ವಿರೋಧಿ ನಿಲುವು, ಅದರ ಕಾರ್ಯವೈಖರಿಯಿಂದಾಗಿ ಇತರೆ ಪಕ್ಷಗಳು ಸಮಾಜವಾದಿ ಪಕ್ಷದ ಜತೆಗೆ ಮೈತ್ರಿಗೆ ಮುಂದಾಗುತ್ತಿಲ್ಲ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಇನ್ನು ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications