ಯುಪಿ ಚುನಾವಣೆ: 'ಬಿಜೆಪಿ ಸೇರುವ ಸಾಧ್ಯತೆಯಿಲ್ಲ' ಶಿವಪಾಲ್ ಸಿಂಗ್ ಯಾದವ್
ಲಕ್ನೋ ಜನವರಿ 20: ಬಿಜೆಪಿ ಸೇರುವ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ. ನಾನು ಬಿಜೆಪಿ ಸೇರುವುದಿಲ್ಲ. ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಸೋದರಳಿಯ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಉತ್ತರ ಪ್ರದೇಶ ಚುನಾವಣೆಗೆ (ಯುಪಿ ಚುನಾವಣೆ 2022) ರಚಿಸಲಾದ ಮೈತ್ರಿಯೊಂದಿಗೆ ತಾನು ದೃಢವಾಗಿ ನಿಲ್ಲುತ್ತೇನೆ ಎಂದು ಉತ್ತರ ಪ್ರದೇಶದ ಮಾಜಿ ಸಚಿವ ಶಿವಪಾಲ್ ಸಿಂಗ್ ಯಾದವ್ ಅವರು ಸ್ಪಷ್ಟಪಡಿಸಿದ್ದಾರೆ.ಅವರ ಸಹೋದರ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಬಿಜೆಪಿಗೆ ಸೇರ್ಪಡೆಗೊಂಡಿರುವ ಸಮಯದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಶಿವಪಾಲ್ ಸಿಂಗ್ ಯಾದವ್ ಅವರ ಪಕ್ಷವು ಅಖಿಲೇಶ್ ಯಾದವ್ ನೇತೃತ್ವದ ಮೈತ್ರಿಕೂಟದ ಭಾಗವಾಗಿದೆ. 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಪಂಚ ರಾಜ್ಯದ ಚುನಾವಣೆ; ಪ್ರಚಾರ ತಂತ್ರ ಬದಲಿಸಿದ ಬಿಜೆಪಿ
'ಬಿಜೆಪಿ ಸೇರುವ ಸಾಧ್ಯತೆಯಿಲ್ಲ'
ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ ಅವರು ಬಿಜೆಪಿಯನ್ನು ಸೋಲಿಸಿ ಸಮಾಜವಾದಿ ಪಕ್ಷದ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರಲು ತಮ್ಮ ಬೆಂಬಲಿಗರನ್ನು ಒತ್ತಾಯಿಸಿದ್ದಾರೆ. ಪ್ರಗತಿಶೀಲ ಸಮಾಜವಾದಿ ಪಕ್ಷದ (ಲೋಹಿಯಾ) ಮುಖ್ಯಸ್ಥ ಶಿವಪಾಲ್ ಸಿಂಗ್ ಯಾದವ್ ಅವರು ಬಿಜೆಪಿ ನಾಯಕ ಲಕ್ಷ್ಮೀಕಾಂತ್ ಬಾಜಪೇಯ್ ಅವರ ಟೀಕೆಗಳನ್ನು ಉಲ್ಲೇಖಿಸಿದ್ದಾರೆ. ಸಮಾಜವಾದಿ ಪಕ್ಷದಲ್ಲಿ ಶಿವಪಾಲ್ ಸಿಂಗ್ ಯಾದವ್ ಅವರಿಗೆ ಯಾವುದೇ ಅಸಮಾಧಾನವಿದ್ದರೆ ನನಗೆ ಸ್ವಾಗತ ಎಂದು ಬಾಜಪೇಯಿ ಸ್ಪಷ್ಟವಾಗಿ ಹೇಳಿದ್ದರು. ನಾನು ಬಿಜೆಪಿ ಸೇರಬಹುದಿತ್ತು. ಆದರೆ ನಾನು ಮೈತ್ರಿಗೆ ಬದ್ಧನಾಗಿದ್ದೇನೆ. ಬಿಜೆಪಿಯೊಂದಿಗೆ ಸೇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
'ಲಕ್ಷ್ಮೀಕಾಂತ್ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ'
ಈ ಕುರಿತು ಶಿವಪಾಲ್ ಯಾದವ್ ಅವರು, ನಾನು ಭಾರತೀಯ ಜನತಾ ಪಕ್ಷಕ್ಕೆ ಸೇರಬಹುದು ಎಂಬ ಲಕ್ಷ್ಮೀಕಾಂತ್ ಬಾಜಪೇಯಿ ಅವರ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ. ಈ ಹೇಳಿಕೆ ಸಂಪೂರ್ಣವಾಗಿ ಆಧಾರರಹಿತವಾಗಿದೆ . ಇದರಲ್ಲಿ ಯಾವುದೇ ಸತ್ಯಗಳಿಲ್ಲದೆ. ನಾನು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಮೈತ್ರಿಯಲ್ಲಿದ್ದೇನೆ ಮತ್ತು ಬಿಜೆಪಿ ಸರ್ಕಾರವನ್ನು ತೊಡೆದುಹಾಕಲು ಬೆಂಬಲಿಗರಿಗೆ ಕರೆ ನೀಡುತ್ತೇನೆ. ರಾಜ್ಯದಲ್ಲಿ ಸಮಾಜವಾದಿ ಪಕ್ಷದ ನೇತೃತ್ವದ ಮತ್ತೊಂದು ಸರ್ಕಾರವನ್ನು ಮರಳಿ ತರಬೇಕು ಎಂದರು.
ಅಖಿಲೇಶ್ -ಶಿವಪಾಲ್ ನಡುವಿನ ಕೌಟುಂಬಿಕ ಕಲಹ ಕೊನೆ
ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಮಗ ಹಾಗೂ ಅಖಿಲೇಶ್ ಯಾದವ್ ಅವರ ತಮ್ಮ ಪ್ರತೀಕ್ ಯಾದವ್ ಅವರ ಪತ್ನಿ ಅಪರ್ಣಾ ಯಾದವ್. ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ನಡುವಿನ ಕೌಟುಂಬಿಕ ಕಲಹ ಕೊನೆಗೊಂಡಿರುವ ಸಮಯದಲ್ಲಿ ಅಪರ್ಣಾ ಯಾದವ್ ಅವರ ಬಿಜೆಪಿ ಸೇರುವ ನಿರ್ಧಾರವು ಸಮಾಜವಾದಿ ಪಕ್ಷಕ್ಕೂ ಆಶ್ಚರ್ಯವನ್ನುಂಟು ಮಾಡಿದೆ. ಇವರೊಂದಿಗೆ ಶಿವಪಾಲ್ ಕೂಡ ಬಿಜೆಪಿ ಸೇರುತ್ತಾರೆನ್ನುವ ಮಾತುಗಳು ಕೇಳಿಬಂದಿದ್ದವು. ಈ ಊಹಾಪೋಹಗಳಿಗೆ ಸದ್ಯ ಶಿವಪಾಲ್ ತೆರೆ ಎಳೆದಿದ್ದಾರೆ.
ಕಾರಣ ಕೊಟ್ಟ ಅಖಿಲೇಶ್ ಯಾದವ್
ಇನ್ನೂ ಅಪರ್ಣಾ ಬಿಜೆಪಿ ಸೇರಿದ ಬಗ್ಗೆ ಪ್ರತಿಕ್ರಿಯಿಸಿದ್ದ ಅಖಿಲೇಶ್ ಯಾದವ್, ಅಪರ್ಣಾ ಯಾದವ್ ಅವರು ಬಿಜೆಪಿ ಸೇರಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ವಿಚಾರಧಾರೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿರುವುದು ಹರ್ಷ ತಂದಿದೆ ಎಂದಿದ್ದಾರೆ. ಅಪರ್ಣಾ ಯಾದವ್ ಅವರು ಬಿಜೆಪಿ ಸೇರಲು ಸಮಾಜವಾದಿ ಪಕ್ಷ ಅವರಿಗೆ ಟಿಕೆಟ್ ನೀಡದೇ ಇದ್ದಿದ್ದೇ ಕಾರಣ ಎಂದು ಅಖಿಲೇಶ್ ಸ್ಪಷ್ಟಪಡಿಸಿದ್ದಾರೆ.
Recommended Video