25,000 ಅನಾಥ ಶವಗಳ ಅಂತ್ಯಸಂಸ್ಕಾರದ ಗುಟ್ಟು ಬಿಚ್ಚಿಟ್ಟ ಶರೀಫ್ ಚಾಚಾ
ಲಕ್ನೋ, ಜನವರಿ.26: ಅಂತ್ಯಸಂಸ್ಕಾರದ ಮೂಲಕ ಅನಾಥ ಶವಗಳಿಗೆ ಮುಕ್ತಿ ನೀಡುತ್ತಿದ್ದ ಮೊಹಮ್ಮದ್ ಶರೀಫ್ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮ್ಮ ಕಾಯಕದ ಹಿಂದಿನ ನೋವಿನ ಕಥೆಯನ್ನು ಶರೀಫ್ ಚಾಚಾ ಬಿಚ್ಚಿಟ್ಟಿದ್ದಾರೆ.
ಉತ್ತರ ಪ್ರದೇಶದ ಫೈಜಾಬಾದ್ ನಿವಾಸಿ 82 ವರ್ಷದ ಮೊಹಮ್ಮದ್ ಶರೀಫ್ ತಮ್ಮ ಸಮಾಜ ಸೇವೆಯಿಂದ ದೇಶವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಫೈಜಾಬಾದ್ ನಲ್ಲಿ ಸೈಕಲ್ ಶಾಪ್ ಇಟ್ಟುಕೊಂಡಿರುವ ಶರೀಫ್, ಕಳೆದ 25 ವರ್ಷಗಳಲ್ಲಿ 25 ಸಾವಿರಕ್ಕೂ ಅಧಿಕ ಅನಾಥ ಶವಗಳ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.
ಹಿಂದು-ಮುಂದು ಇಲ್ಲದ ಅನಾಥ ಶವಗಳನ್ನು ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನೆರವೇರಿಸುವ ಇವರ ಕಾಯಕವನ್ನು ಕೇಂದ್ರ ಸರ್ಕಾರವು ಗುರುತಿಸಿದೆ. 71ನೇ ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆ ಮೊಹಮ್ಮದ್ ಶರೀಫ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಶರೀಫ್ ಚಾಚಾ ಕಾಯಕದ ಹಿಂದಿನ ನೋವಿನ ಕಥೆ
27 ವರ್ಷಗಳ ಹಿಂದೆ ಅನಾಥ ಶವಗಳನ್ನು ಗುರುತಿಸಿ ಅವುಗಳ ಅಂತ್ಯಸಂಸ್ಕಾರ ನೆರವೇರಿಸುವ ಶರೀಫ್ ಚಾಚಾ ಕಾಯಕದ ಹಿಂದೆ ಒಂದು ನೋವಿನ ಕಥೆಯಿದೆ. 1992ರಲ್ಲಿ ಉದ್ಯೋಗಕ್ಕಾಗಿ ತೆರಳಿದ್ದ ತಮ್ಮ ಮಗ ಮೊಹದ್ ರಾಯಿಸ್ ಖಾನ್ ನಿಗೂಢವಾಗಿ ಕೊಲೆಯಾಗಿದ್ದನು. ಅದಾಗಿ ಒಂದು ತಿಂಗಳ ನಂತರ ಮಗ ಅನಾಥ ಶವವಾಗಿ ಪತ್ತೆಯಾದನು. ತಮ್ಮ ಮಗನಿಗೆ ಬಂದ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು ಎಂಬ ಉದ್ದೇಶದಿಂದ ಈ ಕಾರ್ಯವನ್ನು ಮಾಡುತ್ತಿರುವುದಾಗಿ ಶರೀಫ್ ತಿಳಿಸಿದ್ದಾರೆ.

2,500 ಮುಸ್ಲಿಂ ಅನಾಥ ಶವಗಳ ಅಂತ್ಯಕ್ರಿಯೆ
ಮೊಹದ್ ಶರೀಫ್ ತಮ್ಮ ಕೈಗೆ ಸಿಕ್ಕ ಅನಾಥ ಶವಗಳನ್ನು ಆಯಾ ಧರ್ಮಕ್ಕೆ ಅನುಗುಣವಾಗಿ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ. ಇದುವರೆಗೂ 3 ಸಾವಿರ ಹಿಂದೂ ಶವಗಳು ಹಾಗೂ 2,500 ಮುಸ್ಲಿಂ ಧರ್ಮಕ್ಕೆ ಸೇರಿದ ಅನಾಥ ಶವಗಳಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಿರುವುದಾಗಿ ಸ್ವತಃ ಮೊಹಮ್ಮದ್ ಶರೀಫ್ ತಿಳಿಸಿದ್ದಾರೆ.

ಪ್ರತಿದಿನ ಆಸ್ಪತ್ರೆ, ಸ್ಮಶಾನ, ರೈಲ್ವೆ ನಿಲ್ದಾಣದಲ್ಲಿ ಸುತ್ತಾಟ
ಅನಾಥ ಶವಗಳ ಪತ್ತೆ ಮಾಡಲು ಮೊಹಮ್ಮದ್ ಶರೀಫ್ ಪ್ರತಿನಿತ್ಯ ಫೈಜಾಬಾದ್ ಆಸ್ಪತ್ರೆ, ರೈಲ್ವೆ ನಿಲ್ದಾಣ, ಪೊಲೀಸ್ ಠಾಣೆ ಹಾಗೂ ಸ್ಮಶಾನದ ಸುತ್ತಮುತ್ತಲಿನಲ್ಲಿ ತಿರುಗಾಡುತ್ತಿದ್ದರು. ಇಲ್ಲಿ ಪತ್ತೆಯಾಗುವ ಅನಾಥ ಶವಗಳ ಸಂಬಂಧಿಕರು ಬರುತ್ತಾರಾ ಎಂದು ಕಾದು ನೋಡುತ್ತಾರೆ. ಇಲ್ಲವಾದಲ್ಲಿ ಮೂರು ದಿನಗಳ ನಂತರ ಶರೀಫ್ ಚಾಚಾ ಅಂಥ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ.

ಶರೀಫ್ ಕಾಯಕಕ್ಕೆ ಸಹಾಯ ಹಸ್ತ ಚಾಚಿದ ಸ್ನೇಹಿತರು
ಫೈಜಾಬಾದ್ ನಲ್ಲಿರುವ ರಖಬ್ ಗಂಜ್ ಸ್ಮಶಾನದಲ್ಲೇ ಮೊಹಮ್ಮದ್ ಶರೀಫ್, ತಾವು ತೆಗೆದುಕೊಂಡು ಹೋಗುವ ಅನಾಥ ಶವಗಳಿಗೆ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಸ್ಮಶಾನದ ಸಿಬ್ಬಂದಿಯು ಶರೀಫ್ ಸ್ನೇಹಿತರಾಗಿದ್ದು, ಅನಾಥ ಶವಗಳ ಅಂತ್ಯಕ್ರಿಯೆಗೆ ವಿನಾಯಿತಿ ನೀಡುತ್ತಾರಂತೆ. ಸಾಮಾನ್ಯವಾಗಿ ಅಂತ್ಯಸಂಸ್ಕಾರಕ್ಕೆ 5 ಸಾವಿರ ರುಪಾಯಿ ನಿಗದಿಗೊಳಿಸಲಾಗುತ್ತದೆ. ಆದರೆ, ಶರೀಫ್ ಚಾಚಾ ತೆಗೆದುಕೊಂಡು ಹೋಗುವ ಅನಾಥ ಶವಗಳ ಅಂತ್ಯಕ್ರಿಯೆಗೆ 3,500 ರುಪಾಯಿ ನಿಗದಿಗೊಳಿಸಲಾಗುತ್ತದೆ.












Click it and Unblock the Notifications