ಬಿಜೆಪಿ ವಿರುದ್ಧ ಬ್ರಾಹ್ಮಣ ಸಮುದಾಯ ಗರಂ, ಏನು ಮುಂದಿನ ನಡೆ?
ಲಕ್ನೋ, ಆ. 25: ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷಕ್ಕೂ ಮಿಕ್ಕ ಸಮಯವಿದೆ. ಆದರೆ, ರಾಜಕೀಯ ಸ್ಥಿತ್ಯಂತರ ಈಗಲೇ ಶುರುವಾಗಿದೆ. ಜಾತಿ ಲೆಕ್ಕಾಚಾರದ ಮೇಲೆ ನಡೆಯುವ ದೇಶದ ಪ್ರಮುಖ ಚುನಾವಣಾ ಅಖಾಡದಲ್ಲಿ ಈಗಾಗಲೇ ಪ್ರಮುಖ ಸಮುದಾಯದಿಂದ ಅಚ್ಚರಿಯ ನಡೆಯನ್ನು ರಾಜಕೀಯ ವಿಶ್ಲೇಷಕರು ನಿರೀಕ್ಷಿಸುತ್ತಿದ್ದಾರೆ. 2017ರಲ್ಲಿ ಭರ್ಜರಿ ಜಯ ದಾಖಲಿಸಿದ ಬಿಜೆಪಿ ವಿರುದ್ಧ ಬ್ರಾಹ್ಮಣ ಸಮುದಾಯ ಗರಂ ಆಗಿರುವ ಸುದ್ದಿ ಬಂದಿದೆ.
Recommended Video
ಹಿಂದಿ ಭಾಷಿಕ ರಾಜ್ಯವು ಬಹುಜನರ ಪ್ರಯೋಗಶಾಲೆಯಾಗಿದ್ದರೂ ಈ ಬಾರಿ ಎಲ್ಲಾ ರಾಜಕಾರಣಿಗಳು ಬ್ರಾಹ್ಮಣರ ಓಲೈಕೆಯಲ್ಲಿ ತೊಡಗಿದ್ದಾರೆ. ಇಷ್ಟಕ್ಕೂ ಉತ್ತರಪ್ರದೇಶ ರಾಜಕೀಯದಲ್ಲಿ ಬ್ರಾಹ್ಮಣರ ಪಾತ್ರವೇನು?

ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ ವಹಿಸಿದ ಬ್ರಾಹ್ಮಣ ಸಮುದಾಯ ನಂತರ ಪಕ್ಷದ ಆಡಳಿತ ವೈಖರಿಗೆ ಬೇಸತ್ತು ಪಕ್ಷದಿಂದ ದೂರಾಗತೊಡಗಿದೆ. ಠಾಕೂರ್ ಸಮುದಾಯಕ್ಕೆ ಸರ್ಕಾರರಿಂದ ಹೆಚ್ಚಿನ ಮಹತ್ವವೇನು ಸಿಕ್ಕಿಲ್ಲ ಎಂಬ ದೂರಿನ ಜೊತೆಗೆ ಇತ್ತೀಚೆಗೆ ಗ್ಯಾಂಗ್ ಸ್ಟರ್ ವಿಕಾಸ್ ದುಬೇ ಎನ್ ಕೌಂಟರ್ ಕೂಡಾ ಚರ್ಚಾಸ್ಪದವಾಗಿದೆ.

ಇಂಥ ಪರಿಸ್ಥಿತಿಯನ್ನು ನಿರೀಕ್ಷಿಸಿದ್ದಂತೆ ವಿಪಕ್ಷಗಳು ಈಗ ರಾಜಕೀಯ ಆಟದಲ್ಲಿ ತಮ್ಮ ನಡೆಯನ್ನು ಮೊದಲಿಗೆ ಇಟ್ಟಿವೆ. 20 ಕೋಟಿ ಜನಸಂಖ್ಯೆಯಲ್ಲಿ ಶೇ 12ರಷ್ಟಿರುವ ಸಮುದಾಯವು ಪ್ರಮುಖ ಮತಬ್ಯಾಂಕ್ ಆಗಿ ಪರಿಣಮಿಸಿದೆ. ಕೇವಲ ಸಂಖ್ಯೆಯಿಂದ ಮಾತ್ರವಲ್ಲದೆ, ಅಪಾರ ಸಂಖ್ಯೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಕೂಡಾ ಈ ಸಮುದಾಯದ ನಾಯಕರು ಹೊಂದಿದ್ದಾರೆ ಎಂದು ಅಲಹಾಬಾದ್ ಮೂಲದ ಜಿಬಿ ಪಂತ್ ಸೋಷಿಯಲ್ ಸೈನ್ಸ್ ಇನ್ಸ್ಟಿಟ್ಯೂಟ್ ನ ಪ್ರೊಫೆಸರ್ ಬದ್ರಿ ನಾರಾಯಣ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಯಾದವ ಸಮುದಾಯ ಬಗ್ಗೆ:
ಜಾತವ್ ಹಾಗೂ ಯಾದವ್ ಸಮುದಾಯ ಸೇರಿಸಿದರೆ ಯುಪಿಯಲ್ಲಿ ಜಾತಿ ಆಧಾರಿತ ಸಮುದಾಯಗಳ ಸಂಖ್ಯೆ ಹೆಚ್ಚಾಗುತ್ತದೆ. ಕುಶಿನಗರ್, ಗೋರಖ್ ಪುರ್, ಸಂತ್ ಕಬೀರ್ ನಗರ್, ದಿಯೋದರ್, ಭಡೋಹಿ, ವಾರಣಾಸಿ, ಅಂಬೇಡ್ಕರ್ ನಗರ್, ಸುಲ್ತಾನ್ ಪುರ್.. ಇತ್ಯಾದಿ ಪೂರ್ವ ಉತ್ತರಪ್ರದೇಶದಲ್ಲಿ ಸಮುದಾಯ ಆಧಾರಿತ ಮತಬ್ಯಾಂಕ್ ಅಧಿಕವಾಗಿದೆ ಎಂದು ಪ್ರೊ ನಾರಾಯಣ್ ಹೇಳಿದ್ದಾರೆ.
ಮತದಾನ ನಡವಳಿಕೆ
ಸಮುದಾಯದ ಮತಗಳು ಸರ್ಕಾರದ ಭವಿಷ್ಯ ನಿರ್ಧರಿಸುತ್ತವೆ ಎಂಬುದು ನಿರ್ವಿವಾದವಾಗಿದೆ. ಸಿಎಸ್ ಡಿಎಸ್ ಚುನಾವಣೋತ್ತರ ಸಮೀಕ್ಷೆಯಂತೆ ಶೇ 80 ರಷ್ಟು ಬ್ರಾಹ್ಮಣರು 2017ರಲ್ಲಿ ಬಿಜೆಪಿ ಪರ ಮತ ಹಾಕಿದ್ದಾರೆ. 2014 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಶೇ 72 ಹಾಗೂ ಶೇ 82 ರಷ್ಟು ಬ್ರಾಹ್ಮಣ ಮತಗಳನ್ನು ಬಿಜೆಪಿ ಪಡೆದುಕೊಂಡಿತ್ತು. ಹೀಗಾಗಿ ಗೆಲುವು ಸುಲಭವಾಗಿತ್ತು.
2007 ಹಾಗೂ 2012ರಲ್ಲಿ ಬಿಎಸ್ ಪಿ ಹಾಗೂ ಎಸ್ಪಿ ಗೆಲುವು ಸಾಧಿಸಿದ್ದವು. ಆಗ ಕ್ರಮವಾಗಿ ಶೇ 40 ಹಾಗೂ ಶೇ 38 ರಷ್ಟು ಬ್ರಾಹ್ಮಣ ಮತಗಳನ್ನು ಮಾತ್ರ ಕೇಸರಿ ಪಡೆ ಪಡೆದುಕೊಂಡಿತ್ತು ಎಂದು ಸಿಎಸ್ ಡಿಎಸ್ ನ ಸಂಜಯ್ ಕುಮಾರ್ ಹೇಳಿದ್ದಾರೆ.
ಇಷ್ಟಕ್ಕೂ ಬಿಜೆಪಿ ವಿರುದ್ಧ ಬ್ರಾಹ್ಮಣರಿಗೇಕೆ ಕೋಪ?
ಬ್ರಾಹ್ಮಣರ ಕೋಪ ಭಾರತೀಯ ಜನತಾ ಪಕ್ಷದ ಮೇಲೆಯೋ? ಅಥವಾ ಹಾಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಯೋಗಿ ಆದಿತ್ಯನಾಥ್ ಮೇಲೆಯೋ? ಎಂಬ ಪ್ರಶ್ನೆ ಉತ್ತರ ಎರಡು ಹೌದು. ಬ್ರಾಹ್ಮಣರು ಒಟ್ಟಾರೆ ಯುಪಿ ಬಿಜೆಪಿ ವಿರುದ್ಧವೇ ತಿರುಗಿಬಿದ್ದಿದ್ದಾರೆ ಎಂದು ಕಾನ್ಪುರ್ ಪತ್ರಕರ್ತ ಮನೋಜ್ ತ್ರಿಪಾಠಿ ಹೇಳಿದ್ದಾರೆ.
"ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬ್ರಾಹ್ಮಣರನ್ನು ಪಕ್ಕಕ್ಕೆ ಸರಿಸಲಾಗಿದೆ. ಆಡಳಿತ, ಅಭಿವೃದ್ಧಿ ವಿಷಯದಲ್ಲಿ ತೊಡಗಿಕೊಳ್ಳದಂತೆ ನೋಡಿಕೊಳ್ಳಲಾಗಿದೆ'' ಎಂದು ತ್ರಿಪಾಠಿ ತಿಳಿಸಿದ್ದಾರೆ.
ಲಾಕ್ಡೌನ್ ಕಾಲದಲ್ಲಿ ಮಾಲ್ ಗಳು ಆರಂಭಗೊಂಡರೂ ರಾಜ್ಯದಲ್ಲಿ ಅನೇಕ ದೇಗುಲಗಳು ಇನ್ನೂ ಬಂದ್ ಆಗಿದ್ದವು, ಇಂಥ ಕೆಲವು ನಡೆಗಳು ಬ್ರಾಹ್ಮಣ ಕುಟುಂಬದ ಆರ್ಥಿಕ ಪರಿಸ್ಥಿತಿಗೆ ಭಾರಿ ಪೆಟ್ಟು ನೀಡಿದೆ ಎಂದು ತ್ರಿಪಾಠಿ ವಿವರಿಸಿದ್ದಾರೆ.
ಇದಲ್ಲದೆ ಆಡಳಿತದಲ್ಲೂ ಬ್ರಾಹ್ಮಣ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ, ತಾವೇ ಆರಿಸಿ ಕಳಿಸಿದ ಪಕ್ಷದಿಂದ ಆಗಿರುವ ಕಡೆಗಣನೆಯಿಂದ ಬೇಸತ್ತಿದ್ದಾರೆ. ಡಿಸಿಎಂ ದಿನೇಶ್ ಶರ್ಮ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೂ ಕನ್ಯಾಕುಬ್ಜ, ಸೂರ್ಯಪರೀನ್ ಉಪ ಪಂಗಡಕ್ಕೆ ಸೇರಿದವರಲ್ಲ, ಹೀಗಾಗಿ ಪ್ರಾತಿನಿಧ್ಯದ ಕೊರತೆ ಎದ್ದು ಕಾಣುತ್ತಿದೆ.
ಬ್ರಾಹ್ಮಣರನ್ನು ಬಿಜೆಪಿ ಕಡೆಗಣಿಸಿದ್ದು ಏಕೆ?
2017ರಲ್ಲಿ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಸ್ಥಾನಕ್ಕೆ ಬ್ರಾಹ್ಮಣ ಸಮುದಾಯದವರನ್ನು ಕೂರಿಸಲಾಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ನಾಥ ಪಂಥದ ಸಾಧು ಸಂತ ಯೋಗಿ ಆದಿತ್ಯನಾಥ್ ಅವರಿಗೆ ಸಿಎಂ ಕುರ್ಚಿ ಒಲಿದು ಬಂದಿತ್ತು. 2017ರ ಚುನಾವಣೆಯನ್ನು ಯೋಗಿ ಆದಿತ್ಯನಾಥ್ ಅವರನ್ನು ಮುಂದಿಟ್ಟುಕೊಂಡು ಗೆಲ್ಲಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. 2017ರಲ್ಲೂ ಯುಪಿಯಲ್ಲಿ ಮೋದಿ ಅಲೆಯಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್ ಎನ್ ಬಹುಗುಣ ಅವರ ಸಲಹೆಗಾರರಾಗಿದ್ದ ಪದ್ಮ ನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.
2017ರಲ್ಲಿ ಹಿಂದುತ್ವದ ಅಜೆಂಡಾ ಮುಂದಿಟ್ಟುಕೊಂಡು ಗೆಲುವು ಸಾಧಿಸಿದ ಬಿಜೆಪಿಗೆ ಸಮುದಾಯ ಮತಗಳೇ ಗೆಲುವು ಕಾರಣವಾಗಿದ್ದು ಎಂಬುದನ್ನು ಒಪ್ಪಲು ಸಿದ್ಧವಿರಲಿಲ್ಲ.
ಮೋದಿ- ಅಮಿತ್ ಶಾ, ಮೋಹನ್ ಭಾಗ್ವತ್ ಅವರು ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡುವ ಮೂಲಕ ಹಿಂದುತ್ವದ ಮೂಲಕ ಗೆಲುವು ಸಾಧಿಸಿದ್ದು ಎಂಬುದನ್ನು ಎತ್ತಿ ಹಿಡಿದರು. ಯೋಗಿ ಅವರ ಮಠದ ಹಿನ್ನಲೆ, ಸಂಪ್ರದಾಯ ನಿಷ್ಠೆ ಅವರನ್ನು ಯುಪಿ ಬ್ರಾಹ್ಮಣ ಮೆಚ್ಚುಗೆ ಪಡೆಯುವ ಸಿಎಂ ಆಗುವಂತೆ ಮಾಡಬಲ್ಲುದು ಎಂಬ ಲೆಕ್ಕಾಚಾರವಿತ್ತು.
ವಿಪಕ್ಷಗಳತ್ತ ಬ್ರಾಹ್ಮಣರು ವಾಲಿದರೆ ಮುಂದೇನು?
ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷದ ಮುಖಂಡರು ಇತ್ತೀಚೆಗೆ ಪರಶುರಾಮನ ಪ್ರತಿಮೆ ಸ್ಥಾಪನೆ ಮೂಲಕ ಬ್ರಾಹ್ಮಣರ ಮನ ಗೆಲ್ಲಲು ಯತ್ನಿಸಿವೆ. ಈ ಮೂಲಕ 2022ರಲ್ಲಿ ಬ್ರಾಹ್ಮಣರ ಹಿತ ಕಾಯುವ ಭರವಸೆ ನೀಡಿವೆ. ಇನ್ನೊಂದೆಡೆ ಕಾಂಗ್ರೆಸ್, ಬ್ರಾಹ್ಮಣ ಚೇತನಾ ಸಂವಾದ್ ಆರಂಭಿಸಿದೆ.
2007 ಹಾಗೂ 2017ರಲ್ಲಿ ಈ ಎರಡು ಪಕ್ಷಗಳು ಬ್ರಾಹ್ಮಣ ಮತಗಳಿಲ್ಲದೆ ಅಧಿಕಾರಕ್ಕೆ ಬಂದಿರಲಿಲ್ಲವೇ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಬ್ರಾಹ್ಮಣರ ಓಲೈಕೆಯಿದ್ದರೂ ಆ ಸಮುದಾಯಕ್ಕೆ ನಾಯಕತ್ವ ನೀಡಲು ಎರಡು ಪಕ್ಷಗಳು ಸಿದ್ಧವಿಲ್ಲ. ಒಂದು ವೇಳೆ ಆಡಳಿತ ಕೈಗಿತ್ತರೆ ಹಿಂದುಳಿದ ವರ್ಗಗಳ ರಾಜಕೀಯ ಅಂತ್ಯವಾಗುತ್ತದೆ ಎಂಬ ಭಯವಿದೆ ಎಂದು ನಾರಾಯಣ್ ಝಾ ಹೇಳಿದ್ದಾರೆ.
ಬಿಜೆಪಿ ಬಿಟ್ಟು ಬ್ರಾಹ್ಮಣರ ಮುಂದಿರುವ ರಾಜಕೀಯ ಆಯ್ಕೆಗಳು:
ಉತ್ತರಪ್ರದೇಶ ಬ್ರಾಹ್ಮಣ ಸಮುದಾಯವು ಬಿಜೆಪಿಗೆ ಉನ್ನತ ನಾಯಕರನ್ನು ನೀಡಿದೆ. ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ್ ಜೋಶಿ, ಕೇಸರಿ ನಾಥ್ ತ್ರಿಪಾಠಿ, ಕಲ್ ರಾಜ್ ಮಿಶ್ರಾ ಪ್ರಮುಖರನ್ನು ಹೆಸರಿಸಬಹುದು. ವಾಜಪೇಯಿ ಅವರ ಸರಳ ರಾಜಕೀಯ, ಸಮಾಜವಾದಿ ಚಿಂತನೆ ಬ್ರಾಹ್ಮಣರ ಮೇಲೆ ಭಾರಿ ಪ್ರಭಾವ ಬೀರಿತ್ತು ಎಂದು ಪ್ರೊ. ನಾರಾಯಣ್ ಆ ದಿನಗಳನ್ನು ಸ್ಮರಿಸಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ ಅವರು ಬ್ರಾಹ್ಮಣ ಮತಗಳು ಬಿಜೆಪಿಗೆ ಖಚಿತವಾಗಿ ಸಿಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಬಿಜೆಪಿಯಿಂದ ಬ್ರಾಹ್ಮಣರು ದೂರ ಸರಿದರೆ ಏನಾಗಲಿದೆ? ಯುಪಿ ಬಿಜೆಪಿ ವಿರುದ್ಧ ಬ್ರಾಹ್ಮಣರಿಗೆ ಸಿಟ್ಟಿದ್ದರೂ ಕೆಲ ವರ್ಗದ ಬ್ರಾಹ್ಮಣರು ಸುಲಭವಾಗಿ ಬಿಜೆಪಿ ಜೊತೆಗಿನ ಸಖ್ಯವನ್ನು ಕಳಚಿಕೊಳ್ಳುವುದಿಲ್ಲ. ಆದರೆ, ಮತ ವಿಭಜನೆಯಾದರೆ ಎಸ್ಪಿ ಹಾಗೂ ಬಿಜೆಪಿಗಿಂತ ಬಿಎಸ್ಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಾಭವಾಗಬಹುದು ಎಂದು ನಾರಾಯಣ್ ಅಂದಾಜಿಸಿದ್ದಾರೆ.
ಇನ್ನೊಂದೆಡೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂಬ ಮಾತಿಗೆ ಜೋತುಬಿದ್ದು, ಪಕ್ಷಾತೀತವಾಗಿ ಬ್ರಾಹ್ಮಣ ಅಭ್ಯರ್ಥಿಗಳಿಗೆ ಆ ಸಮುದಾಯದವರು ಮತ ಹಾಕುವ ಸಾಧ್ಯತೆ ಹೆಚ್ಚಿದೆ ಎಂದು ಮನೋಜ್ ತ್ರಿಪಾಠಿ ಅಭಿಪ್ರಾಯಪಟ್ಟಿದಾರೆ.
ಆದರೆ, ರಾಜ್ಯ ಚುನಾವಣೆಗೆ ಇನ್ನೂ ಸಾಕಷ್ಟು ಕಾಲಾವಕಾಶವಿದ್ದು, ಸದ್ಯದ ಪರಿಸ್ಥಿತಿ ಮೇಲೆ ಇದು ಹೀಗೆ ಆಗಬಹುದು ಎಂದು ಹೇಳಲು ಕಷ್ಟ, ಬಿಜೆಪಿಯ ಕೇಂದ್ರ ನಾಯಕರು, ಆರೆಸ್ಸೆಸ್ ಮುಖಂಡರಿಗೆ ಈ ಪರಿಸ್ಥಿತಿ ಬಗ್ಗೆ ಅರಿವಿದ್ದೆ ಇರುತ್ತದೆ. ಪಕ್ಷವನ್ನು ಮುನ್ನೆಲೆಗೆ ತಂದ ಸಮುದಾಯವನ್ನು ಕಳೆದುಕೊಳ್ಳಲು ಕೇಸರಿ ಪಡೆ ಎಂದಿಗೂ ಸಿದ್ಧವಿರಲಾರದು. ಹೆಚ್ಚಿನ ಪ್ರಾತಿನಿಧ್ಯ, ಸೂಕ್ತ ಸೌಲಭ್ಯ, ಸೌಕರ್ಯ ನೀಡುವ ಮೂಲಕ ಸಮುದಾಯದ ಓಲೈಕೆ ಮುಂದೆ ಕಾಣಬಹುದು ಎಂದು ತ್ರಿಪಾಠಿ ಹೇಳಿದ್ದಾರೆ.












Click it and Unblock the Notifications