ಉ.ಪ್ರ ಚುನಾವಣೆ: ಮತದಾರರಿಗೆ ವಿಚಿತ್ರ ಭರವಸೆ ನೀಡಿದ ಅಖಿಲೇಶ್ ಯಾದವ್ ಮೈತ್ರಿ ಪಕ್ಷ
ಲಕ್ನೋ, ಫೆ 10: ಚುನಾವಣೆಯ ವೇಳೆ ಮತದಾರರಲ್ಲಿ ರಾಜಕೀಯ ಪಕ್ಷಗಳು ದೇವರನ್ನು ಕಾಣುತ್ತಾರೆ ಎನ್ನುವ ಮಾತಿನಂತೆ, ಇಲ್ಲೊಂದು ಪ್ರಾದೇಶಿಕ ಪಕ್ಷ ಯಾರೂ ನೀಡದ ವಿಚಿತ್ರ ಭರವಸೆಯನ್ನು ಮತದಾರರಿಗೆ ನೀಡಿದೆ. ಯಾವ ಕಾರಣಕ್ಕಾಗಿ ಆ ಭರವಸೆ ನೀಡುತ್ತಿದ್ದೇನೆಂದು ಆ ಪಕ್ಷದ ನಾಯಕರು ವಿವರಿಸಿದ್ದಾರೆ ಕೂಡಾ.
ಪಂಚ ರಾಜ್ಯ ಚುನಾವಣೆಯ ಮೊದಲ ಭಾಗವಾಗಿ ಇಂದು ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಚುನಾವಣೆ ಆರಂಭಗೊಂಡಿದೆ. ಹನ್ನೊಂದು ಜಿಲ್ಲೆಯಲ್ಲಿ ವ್ಯಾಪಿಸಿರುವ 58 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಜಾರಿಯಲ್ಲಿದೆ.
ಬೆಳಗ್ಗೆ ಹನ್ನೊಂದು ಗಂಟೆಗೆ ಶೇ.20.3 ಮತದಾನವಾಗಿದೆ. ಮುಜಾಫರ್ ನಗರ, ಮೀರಠ್, ಭಾಗಪತ್, ಘಾಜಿಯಾಬಾದ್, ಶಮ್ಲಿ, ಹಾಪುರ್, ಗೌತಂ ಬುದ್ದ ನಗರ (ನೋಯ್ಡಾ), ಬುಲಂದ್ ಶಹರ್, ಆಲಿಘರ್, ಆಗ್ರಾ ಮತ್ತು ಮಥುರಾ ಜಿಲ್ಲೆಯ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.
ಆಡಳಿತ ಬಿಜೆಪಿಗೆ ಬಿಗ್ ಫೈಟ್ ಅನ್ನು ನೀಡುತ್ತಿರುವ ಸಮಾಜವಾದಿ ಪಕ್ಷದ ಜೊತೆಗೆ ಹೊಂದಾಣಿಕೆಯನ್ನು ಮಾಡಿಕೊಂಡಿರುವ ಸುಹೇಲ್ ದೇವ್ ಭಾರತೀಯ ಸಮಾಜ್ ಪಾರ್ಟಿ (ಎಸ್ಬಿಎಸ್ಪಿ) ಮತದಾರರನ್ನು ಓಲೈಸಲು ಅಪರೂಪದ ಭರವಸೆಯನ್ನು ನೀಡಿದೆ.

ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿಯ ಜೊತೆ ಸೀಟ್ ಹಂಚಿಕೆ ಹೊಂದಾಣಿಕೆ
ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿಯ ಜೊತೆ ಸೀಟ್ ಹಂಚಿಕೆ ಹೊಂದಾಣಿಕೆಯನ್ನು ಹಲವು ಪಕ್ಷಗಳು ಮಾಡಿಕೊಂಡಿದ್ದರೂ, ಪಕ್ಷಗಳ ನಡುವಿನ ಚರ್ಚೆಗಳು ಫಲಪ್ರದವಾಗದ ಹಿನ್ನಲೆಯಲ್ಲಿ ಕೆಲವೊಂದು ಕ್ಷೇತ್ರದಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ಎಸ್ಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಪಕ್ಷಗಳು ನಿರ್ಧರಿಸಿವೆ. ಅಖಿಲೇಶ್ ಜೊತೆ ಎಸ್ಬಿಎಸ್ಪಿ ಪಕ್ಷವೂ ಹೊಂದಾಣಿಕೆಯನ್ನು ಮಾಡಿಕೊಂಡಿದ್ದರೂ, ಶಾಂಡಿಲಾ ಕ್ಷೇತ್ರದಲ್ಲಿ ಎಸ್ಬಿಎಸ್ಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಈ ಪಕ್ಷ ಮತದಾರರಿಗೆ ನೀಡಿದ ಒಂದು ಭರವಸೆ ಹೀಗಿದೆ.

ಅಖಿಲೇಶ್ ಆಪ್ತರೂ ಆಗಿರುವ ಓಂ ಪ್ರಕಾಶ್ ರಾಜಭರ್
ಸುಹೇಲ್ ದೇವ್ ಭಾರತೀಯ ಸಮಾಜ ಪಾರ್ಟಿ ಮುಖ್ಯಸ್ಥ ಮತ್ತು ಅಖಿಲೇಶ್ ಆಪ್ತರೂ ಆಗಿರುವ ಓಂ ಪ್ರಕಾಶ್ ರಾಜಭರ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ, "ನಾವು ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಿದ್ದೇವೆ. ಪ್ರಮುಖ ಭರವಸೆಯೊಂದನ್ನು ನಾನು ಈ ಗೋಷ್ಠಿಯ ಮೂಲಕ ನೀಡಲಿದ್ದೇನೆ"ಎಂದು ಹೇಳಿದ್ದಾರೆ. ಇವರು ಘಾಜಿಪುರ ಜಿಲ್ಲೆಯ ಜಹೂರಾಬಾದ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಮಾರ್ಚ್ ಏಳರಂದು ಇಲ್ಲಿ ಚುನಾವಣೆ ನಡೆಯಲಿದೆ.

ದ್ವಿಚಕ್ರ ವಾಹನದಲ್ಲಿ ಮೂವರಿಗೆ ಪ್ರಯಾಣಿಸಲು (ತ್ರಿಬಲ್ ರೈಡಿಂಗ್) ಕಾನೂನಾತ್ಮಕವಾಗಿ ಬದಲಾವಣೆ
"ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದ್ವಿಚಕ್ರ ವಾಹನದಲ್ಲಿ ಮೂವರಿಗೆ ಪ್ರಯಾಣಿಸಲು (ತ್ರಿಬಲ್ ರೈಡಿಂಗ್) ಕಾನೂನಾತ್ಮಕವಾಗಿ ಬದಲಾವಣೆಯನ್ನು ಮಾಡಲಿದ್ದೇವೆ. ಎಪ್ಪತ್ತು ಸೀಟಿನ ರೈಲಿನಲ್ಲಿ ಮುನ್ನೂರು ಜನರು ಪ್ರಯಾಣಿಸಲು ಅವಕಾಶ ಇರುವಾಗ, ತ್ರಿಬಲ್ ರೈಡಿಂಗ್ ಅನುಮತಿ ನೀಡಿದರೆ ತಪ್ಪಿಲ್ಲ. ರೈಲಿನಲ್ಲಿ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸಿದರೂ, ಯಾರೂ ದಂಡ ವಿಧಿಸುವುದಿಲ್ಲ"ಎಂದು ಓಂ ಪ್ರಕಾಶ್ ರಾಜಭರ್ ಅಭಿಪ್ರಾಯ ಪಟ್ಟಿದ್ದಾರೆ.

ತ್ರಿಬಲ್ ರೈಡಿಂಗ್ ನಲ್ಲಿ ಪ್ರಯಾಣಿಸುತ್ತಿದ್ದವರಿಗೆ ದಂಡ ವಿಧಿಸಲಾಗುತ್ತಿದೆ
ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಓಂ ಪ್ರಕಾಶ್, "ತ್ರಿಬಲ್ ರೈಡಿಂಗ್ ನಲ್ಲಿ ಪ್ರಯಾಣಿಸುತ್ತಿದ್ದವರಿಗೆ ದಂಡ ವಿಧಿಸಲಾಗುತ್ತಿದೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಇದಕ್ಕೆ ತಡೆ ನೀಡಲಾಗುವುದು. ಮೂವರು ಪ್ರಯಾಣಿಸುವ ವಾಹನಗಳನ್ನು ಟ್ರಾಫಿಕ್ ಪೊಲೀಸರು ತಡೆಯುವುದಿಲ್ಲ. ಒಂದು ವೇಳೆ ಇದನ್ನು ಕಾರ್ಯರೂಪಕ್ಕೆ ತರಲಾಗದಿದ್ದರೆ, ಹೆಚ್ಚಿನ ಪ್ರಯಾಣಿಕರನ್ನು ತುಂಬಿ ಕೊಂಡು ಹೋಗುವ ರೈಲು ಮತ್ತು ಜೀಪುಗಳಿಗೂ ದಂಡ ವಿಧಿಸಲಾಗುವುದು"ಎಂದು ಇವರು ಹೇಳುವ ಮೂಲಕ, ಯಾರೂ ನೀಡದ ಭರವಸೆಯನ್ನು ಎಸ್ಬಿಎಸ್ಪಿ ಪಕ್ಷ ನೀಡಿದೆ.












Click it and Unblock the Notifications