ಬರೀ ಆಂಜನೇಯನೊಬ್ಬನೇ ಏಕೆ, ಬೇರೆ ದೇವರುಗಳ ಜಾತಿಯನ್ನೂ ಘೋಷಿಸಿ
ಲಕ್ನೋ, ಡಿ 13: ರಾಮನಭಂಟ ಹನುಮಂತನ ಜಾತಿಯನ್ನು ಹೇಗೂ ಘೋಷಿಸಿದ್ದೀರಿ, ಹಿಂದೂಗಳ ಇತರ ದೇವರುಗಳ ಜಾತಿಯನ್ನೂ ಹೇಳಿ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮಾಜಿ ಸಿಎಂ ಅಖಿಲೇಶ್ ಯಾದವ್ ಲೇವಡಿ ಮಾಡಿದ್ದಾರೆ.
ಮಾಧ್ಯಮದವರೊಂದಿಗಿನ ಸಂವಾದದಲ್ಲಿ ಮಾತನಾಡುತ್ತಿದ್ದ ಅಖಿಲೇಶ್, ಹಿಂದೂಗಳ ಕೆಲವೊಂದು ದೇವರುಗಳ ಜಾತಿಯನ್ನು ಮಾತ್ರ ಬಹಿರಂಗ ಪಡಿಸಲಾಗಿದೆ. ಇತರ ದೇವರುಗಳ ಜಾತಿಯನ್ನೂ ಮುಖ್ಯಮಂತ್ರಿಗಳು ಘೋಷಿಸಿದರೆ, ನನ್ನ ಜಾತಿಯ ದೇವರನ್ನು ಪೂಜಿಸಲು ನನಗೆ ಅನುಕೂಲವಾಗುತ್ತದೆ ಎಂದು ಅಖಿಲೇಶ್ ಹೇಳಿದ್ದಾರೆ.
ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ ನಮ್ಮ ಪಕ್ಷದ ಸಾಧನೆ ತೃಪ್ತಿ ತರದಿದ್ದರೂ, ಬಿಜೆಪಿಯನ್ನು ಸೋಲಿಸಿ ಮತದಾರ ಸರಿಯಾದ ಪಾಠವನ್ನು ಕಲಿಸಿದ್ದಾರೆ. ಉತ್ತರಪ್ರದೇಶದಲ್ಲಿ ಕೋಮುವಾದಿಗಳ ವಿರುದ್ದ ಸೆಣಸಲು ನಮ್ಮ ಪಕ್ಷವೇ ಸೂಕ್ತ ಎಂದು ಅಖಿಲೇಶ್ ಯಾದವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಅಲ್ವಾರ್ ನಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಯೋಗಿ ಆದಿತ್ಯನಾಥ್, "ಭಗವಂತ ಹನುಮ ಒಬ್ಬ ಬುಡಕಟ್ಟು ಸಮುದಾಯಕ್ಕೆ ಸೇರಿದವನು" ಎನ್ನುವ ಮೂಲಕ ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದ್ದರು.
ಭಜರಂಗಬಲಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 'ದಲಿತ' ಎಂದಿದ್ದಕ್ಕೆ ಹಲವೆಡೆ ಆಕ್ರೋಶ ವ್ಯಕ್ತವಾಗಿತ್ತು, ಜೊತೆಗೆ, ಇದಕ್ಕಾಗಿ ನೋಟೀಸನ್ನು ಕೂಡ ಅವರಿಗೆ ನೀಡಲಾಗಿತ್ತು.
"ರಾಮಭಕ್ತ ಹನುಮಂತ ಬುಡಕಟ್ಟು ಸಮುದಾಯಕ್ಕೆ ಸೇರಿದವನು. ಕಾಡಿನಿಂದ ಬಂದ ಅವನು ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮದ ಜನರನ್ನು ಒಂದಾಗಿಸಲು ಪ್ರಯತ್ನಿಸಿದವನು. ಭಗವಂತ ರಾಮನ ಉದ್ದೇಶವೂ ಅದೇ ಆಗಿತ್ತು. ಆ ಉದ್ದೇಶವನ್ನು ಈಡೇರಿಸಲು ಹನುಮಂತ ಪ್ರಯತ್ನಿಸಿದನು. ನಾವೂ ಅದೇ ಪ್ರಯತ್ನ ಮಾಡುತ್ತಿದ್ದೇವೆ" ಎಂದು ಯೋಗಿ ಆದಿತ್ಯನಾಥ್ ಹೇಳಿದ್ದರು.












Click it and Unblock the Notifications