ರಾಮಮಂದಿರ ವಿಚಾರ: ಮೋದಿ ಸರ್ಕಾರದ ಮೇಲೆ ಆರೆಸ್ಸೆಸ್ ಗೂ ಮುನಿಸು?
ಲಕ್ನೋ, ಜನವರಿ 18: 2014 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ತನ್ನ ಪ್ರಚಾರದ ಬಹುಮುಖ್ಯ ಅಸ್ತ್ರವನ್ನಾಗಿಸಿಕೊಂಡಿದ್ದ ರಾಮಮಂದಿರ ನಿರ್ಮಾಣದ ಭರವಸೆ ಐದು ವರ್ಷ ಕಳೆಯುತ್ತ ಬಂದರೂ ಈಡೇರಿಲ್ಲ. ರಾಮಮಂದಿರದ ಬಗ್ಗೆ ಬಿಜೆಪಿ ಸರ್ಕಾರ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಬೇಸರ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೂ(ಆರೆಸ್ಸೆಸ್) ಇದೆ ಎಂಬ ಮಾತಿಗೆ ಪುಷ್ಠಿ ನೀಡುವಂಥ ಹೇಳಿಕೆಯನ್ನು ಆರೆಸ್ಸೆಸ್ ಮುಖಂಡ ಭಯ್ಯಾಜಿ ಜೋಷಿ ನೀಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಅರ್ಧಕುಂಭ ಮೇಳದಲ್ಲಿ ಭಾಗವಹಿಸಿದ್ದ ಅವರು, ರಾಮಮಂದಿರ ನಿರ್ಮಾಣ ವಿಳಂಬವಾಗುತ್ತಿರುವ ಬಗ್ಗೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.
ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು 2025 ರಾಮಮಂದಿರ ನಿರ್ಮಾಣ ಆರಂಭವಾಗಬೇಕು ಎಂದು ನಾನು ಹೇಳಿಲ್ಲ. ಈಗಿನಿಂದಲೇ ಆರಂಭವಾದರೆ 2025 ರ ಹೊತ್ತಿಗೆ ಅದು ಮುಕ್ತಾಯವಾಗುತ್ತದೆ ಎಂದರು.
25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್
ತಮ್ಮ ಹೇಳಿಕೆಗೆ ನಂತರ ಅವರು ಸ್ಪಷ್ಟನೆ ನೀಡಿದರಾದರೂ, ರಾಮಮಂದಿರ ನಿರ್ಮಾಣದ ಬಗ್ಗೆ ಎನ್ ಡಿಎ ಸರ್ಕಾರ ಹೆಚ್ಚು ಆಸಕ್ತಿ ತೋರದ ಬಗ್ಗೆ ಆರೆಸ್ಸೆಸ್ ಗೆ ಮುನಿಸಿರುವುದಂತೂ ಬಹಿರಂಗಗೊಂಡಿದೆ.
ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಕಳೆದರೂ ರಾಮಮಂದಿರದ ಬಗ್ಗೆ ತುಟಿಬಿಚ್ಚಿರದ ಸರ್ಕಾರ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ ರಾಮಮಂದಿರದ ಬಗ್ಗೆ ಮಾತನಾಡುತ್ತಿದೆ ಎಂದು ವಿಪಕ್ಷಗಳೂ ದೂರುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.
ಭಯ್ಯಾಜಿ ಜೋಷಿ ಹೇಳಿದ್ದೇನು?
"2025 ರ ಹೊತ್ತಿಗೆ ರಾಮಮಂದಿರ ನಿರ್ಮಾಣವಾಗಲಿದೆ. 1952 ರಲ್ಲಿ ಗುಜರಾತಿನಲ್ಲಿ ಸೋಮನಾಥ ದೇವಾಲಯ ನಿರ್ಮಾಣವಾದ ನಂತರ ಭಾರತದ ಪ್ರಗತಿ ಆರಂಭವಾಗಿತ್ತು. ಅಂತೆಯೇ ರಾಮಮಂದಿರ ನಿರ್ಮಾಣದ ನಂತರ ಭಾರತ ಮತ್ತಷ್ಟು ಪ್ರಗತಿ ಹೊಂದುತ್ತದೆ" ಎಂದು ಭಯ್ಯಾಜಿ ಜೋಷಿ ಹೇಳಿದ್ದರು. ಮೋದಿ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಮೀನಮೇಷ ಎಣಿಸುತ್ತಿರುವ ಬಗ್ಗೆ ಭಯ್ಯಾಜಿ ಜೋಷಿ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು ಎಂದು ಅವರ ಮಾತಿನ ನಂತರ ಮಾಧ್ಯಮಗಳು ವರದಿ ಮಾಡಿದ್ದವು.
ಸ್ಪಷ್ಟನೆ ನೀಡಿದ ಭಯ್ಯಾಜಿ ಜೋಷಿ
ಮಾಧ್ಯಮಗಳ ವರದಿಗೆ ಸ್ಪಷ್ಟನೆ ನೀಡಿದ ಭಯ್ಯಾಜಿ ಜೋಷಿ, ''2025 ರ ವೇಳೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ ಎಂದು ನಾನು ಹೇಳಿದ್ದು ನಿಜ. ರಾಮಮಂದಿರ ನಿರ್ಮಿಸುವುದುಕ್ಕೆ ಐದು ವರ್ಷವಾದರೂ ಸಮಯ ಬೇಕು. ಈಗಿನಿಂದಲೇ ಅದನ್ನು ಆರಂಭಿಸಿದರೆ, 2025 ರ ಹೊತ್ತಿಗೆ ಪೂರ್ಣಗೊಳ್ಳುತ್ತದೆ ಎಂದು ನಾನು ಹೇಳಿದ್ದು' ಎಂದಿದ್ದಾರೆ.
1859ರಿಂದಲೂ ಬಗೆಹರಿಯದ ರಾಮಜನ್ಮ ಭೂಮಿ ವಿವಾದ
ಸುಗ್ರೀವಾಜ್ಞೆಗೆ ಒತ್ತಾಯ
ರಾಮ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಜಾರಿಗೆ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಕೇಳಿ ಬಂದಿದೆ. ಸಂಘ ಪರಿವಾರ, ಹಿಂದೂ ಸಂಘಟನೆಗಳು ಸುಗ್ರೀವಾಜ್ಞೆ ಅಥವಾ ಕಾನೂನನ್ನು ಜಾರಿಗೆ ಒತ್ತಾಯಿಸಿವೆ.
ಜ.29 ರಿಂದ ವಿಚಾರಣೆ ಆರಂಭ
ಅಯೋಧ್ಯೆ ವಿವಾದದ ಕುರಿತು ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಎ.ಬೋಬಡೆ, ಎನ್.ವಿ.ರಮಣ, ಯು.ಯು.ಲಲಿತ್ ಹಾಗೂ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪಂಚಸದಸ್ಯರ ಪೀಠವನ್ನು ಜ. 8 ರಂದು ರಚಿಸಲಾಗಿತ್ತು. ಆದರೆ ನ್ಯಾ.ಯು ಯು ಲಲಿತ್ ಅವರು ಪೀಠದಿಂದ ಹಿಂದೆ ಸರಿದ ಪರಿಣಾಮ ಹೊಸಪೀಠ ರಚಿಸಬೇಕಿದ್ದು, ಜ.29ರಿಂದ ವಿಚಾರಣೆ ನಡೆಯಲಿದೆ.