ಫೆ.19ರಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೊದಲ ಸಭೆ
ಲಕ್ನೋ, ಫೆಬ್ರವರಿ 10 : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಸುಪ್ರೀಂಕೋರ್ಟ್ ಆದೇಶದಂತೆ ಟ್ರಸ್ಟ್ ರಚನೆ ಮಾಡಲಾಗಿದೆ. 'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್' ಮೊದಲ ಸಭೆ ಫೆಬ್ರವರಿ 19ರಂದು ನಡೆಯಲಿದೆ.
ರಾಮಜನ್ಮಭೂಮಿ ವಿವಾದದ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ತನ್ನ ಅಂತಿಮ ಆದೇಶ ನೀಡುವಾಗ ಟ್ರಸ್ಟ್ ರಚನೆ ಮಾಡಬೇಕು ಎಂದು ನಿರ್ದೇಶನ ನೀಡಿತ್ತು. ನ್ಯಾಯಾಲಯದ ಆದೇಶದಂತೆ ಕೇಂದ್ರ ಸರ್ಕಾರ ಟ್ರಸ್ಟ್ ರಚನೆ ಮಾಡಿದೆ.
ಸುಪ್ರೀಂ ನಿರ್ದೇಶನದಂತೆ ರಾಮಜನ್ಮಭೂಮಿ ಟ್ರಸ್ಟ್ ರಚನೆ
67.703 ಎಕರೆ ಭೂಮಿಯನ್ನು 'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್'ಗೆ ಹಸ್ತಾಂತರ ಮಾಡಲಾಗಿದೆ. ರಾಮ ಮಂದಿರ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ತೀರ್ಮಾನಗಳನ್ನು ಈ ಟ್ರಸ್ಟ್ ಕೈಗೊಳ್ಳಲಿದೆ. ಮೊದಲ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.
ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಟ್ರಸ್ಟ್ ರಚನೆ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಲೋಕಸಭೆ ಬಜೆಟ್ ಅಧಿವೇಶನ ನಡೆಯುತ್ತಿದ್ದಾಗ ಸದನದಲ್ಲಿಯೇ ಟ್ರಸ್ಟ್ ರಚನೆ ಕುರಿತು ಪ್ರಕಟಿಸಲಾಯಿತು.
ಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿ
ಸುಪ್ರೀಂಕೋರ್ಟ್ ಆದೇಶವೇನು?
ನವೆಂಬರ್ 9ರಂದು ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿಯ ವಿವಾದಿತ ನಿವೇಶನದ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಮೂರು ತಿಂಗಳಿನಲ್ಲಿ ಟ್ರಸ್ಟ್ ರಚಿಸಿ ಮಂದಿರ ನಿರ್ಮಾಣದ ಹೊಣೆಯನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ 5 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡುವಂತೆಯೂ ಸೂಚಿಸಿತ್ತು.
ನರೇಂದ್ರ ಮೋದಿ ಹೇಳಿದ್ದೇನು?
ಲೋಕಸಭೆ ಕಲಾಪದಲ್ಲಿ ಟ್ರಸ್ಟ್ ರಚನೆ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "67.703 ಎಕರೆ ಅಧಿಕೃತ ಜಮೀನನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ವರ್ಗಾಯಿಸಲು ನಿರ್ಧರಿಸಲಾಗಿದೆ. ರಾಮ ಮಂದಿರ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಈ ಟ್ರಸ್ಟ್ ಕೈಗೊಳ್ಳಲಿದೆ" ಎಂದು ಹೇಳಿದರು.
ದೆಹಲಿಯಲ್ಲಿ ಕೇಂದ್ರ ಕಚೇರಿ
'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್'ನ ಮೊದಲ ಸಭೆ ಫೆಬ್ರವರಿ 19ರಂದು ನಡೆಯಲಿದೆ. ಟ್ರಸ್ಟ್ ಕೇಂದ್ರ ಕಚೇರಿ ದೆಹಲಿಯ ಗ್ರೇಟರ್ ಕೈಲಾಶ್ನಲ್ಲಿ ಟ್ರಸ್ಟ್ ಕಚೇರಿ ಇರಲಿದೆ. ಮೊದಲ ಸಭೆಯಲ್ಲಿಯೇ ರಾಮಮಂದಿರ ನಿರ್ಮಾಣ ಕಾಮಗಾರಿ ಆರಂಭಿಸುವ ದಿನಾಂಕವನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.
ರಾಮನವಮಿಯಂದು ಕಾಮಗಾರಿ ಆರಂಭ
ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ಮಂದಿರ ನಿರ್ಮಾಣ ಕಾಮಗಾರಿ ರಾಮ ನಮಮಿ ದಿನದಂದು ಆರಂಭವಾಗುವ ನಿರೀಕ್ಷೆ ಇದೆ. ರಾಮಮಂದಿರ ನಿರ್ಮಾಣಕ್ಕೆ ಸುಮಾರು 4 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಮಂದಿರ ನಿರ್ಮಾಣಕ್ಕೆ ಈಗಾಗಲೇ 1.25 ಲಕ್ಷ ಘನ ಅಡಿ ಕಲ್ಲುಗಳ ಕೆತ್ತನೆ ಕಾರ್ಯ ಪೂರ್ಣಗೊಂಡಿದೆ.