ಪ್ರಿಯಾಂಕಾ ವಾದ್ರಾ ಎಲ್ಲಿಂದ ಸ್ಪರ್ಧಿಸಲಿದ್ದಾರೆ? ಊಹಾಪೋಹಕ್ಕೆ ಕಡೆಗೂ ತೆರೆ!
ಲಕ್ನೋ, ಮಾರ್ಚ್ 13 : ಒಂದೇ ತಿಂಗಳ ಹಿಂದೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿರುವ ಪ್ರಿಯಾಂಕಾ ವಾದ್ರಾ ಅವರು ಯಾವ ಕ್ಷೇತ್ರದಿಂದ ಲೋಕಸಭೆ ಚುನಾವಣೆಗಿಳಿಯಲಿದ್ದಾರೆ ಎಂಬ ಊಹಾಪೋಹಕ್ಕೆ ಕೊನೆಗೂ ತೆರೆಬಿದ್ದಿದೆ.
ಬಲ್ಲ ಮೂಲಗಳ ಪ್ರಕಾರ, 47 ವರ್ಷದ ಪ್ರಿಯಾಂಕಾ ವಾದ್ರಾ ಅವರು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ. ಬದಲಾಗಿ, ಚುನಾವಣೆಯಲ್ಲಿ ಪಕ್ಷದ ಪ್ರಚಾರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಿಯಾಂಕಾ ವಾದ್ರಾ ಅವರು, ತಮಗೆ ನೀಡಲಾಗಿರುವ ಜವಾಬ್ದಾರಿಯ ಮೇಲೆ ಹೆಚ್ಚಿನ ನಿಗಾ ವಹಿಸಲು ನಿರ್ಧರಿಸಿದ್ದು, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಮಾಹಿತಿ ಬಂದಿದೆ.

ಕಾಂಗ್ರೆಸ್ಸಿನ 15 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಮೊದಲು, ಪ್ರಿಯಾಂಕಾ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರು ಕಳೆದ ಬಾರಿ ಸ್ಪರ್ಧಿಸಿದ್ದ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ, ಮೊದಲ ಪಟ್ಟಿಯಲ್ಲಿ ಸೋನಿಯಾ ಅವರೇ ರಾಯ್ ಬರೇಲಿಯ ಅಭ್ಯರ್ಥಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ವಾದ್ರಾ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಕುತೂಹಲ ಮೂಡಿತ್ತು. ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿ ವಹಿಸಿಕೊಂಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಕೂಡ ಸುದ್ದಿ ಹರಿದಾಡುತ್ತಿತ್ತು.

ಪ್ರಿಯಾಂಕಾ ಅವರು ಪ್ರಥಮ ಬಾರಿ ರಾಜಕೀಯಕ್ಕೆ ಅಧಿಕೃತವಾಗಿ ಧುಮುಕಿದ್ದರೂ, ಹಿಂದೆ ಕೂಡ ಸಹೋದರ ರಾಹುಲ್ ಗಾಂಧಿ ಅವರು ಅಮೇಥಿಯಿಂದ ಮತ್ತು ತಾಯಿ ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯಿಂದ ಸ್ಪರ್ಧಿಸಿದಾಗ ಅಲ್ಲಿ ಸಕ್ರಿಯರಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದರು.
ಅವರು ರಾಜಕೀಯಕ್ಕೆ ಅಧಿಕೃತವಾಗಿ ಧುಮುಕಿದ ಮೇಲೆ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಉತ್ಸಾಹ ಮೂಡಿದೆ. ಎಲ್ಲೆಡೆ ಅವರಿಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ಅವರ ಭಾಷಣ ಕೇಳಲು ಜನರು ಉತ್ಸಾಹ ತೋರುತ್ತಿದ್ದಾರೆ. ಜೊತೆ ಉತ್ತರ ಪ್ರದೇಶದ ಉದ್ದಗಲಕ್ಕೂ ಅವರು ಜೋತಿರಾಧಿತ್ಯ ಸಿಂಧಿಯಾ ಜೊತೆ ಓಡಾಡುತ್ತಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಅವರು ಅಧಿಕಾರ ವಹಿಸಿಕೊಂಡ ಮೇಲೆ ಪಕ್ಷದ ಹಲವಾರು ಸಭೆಗಳಲ್ಲಿ ಭಾಗವಹಿಸಿದ್ದಾರೆ, ಕಾರ್ಯಕಾರಿಣಿಯಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಗುಜರಾತ್ ನಲ್ಲಿ ಮಾರ್ಚ್ 12ರಂದು ಮೊದಲ ಬಾರಿಗೆ ಚುನಾವಣಾ ಭಾಷಣವನ್ನೂ ಮಾಡಿದರು. ಆದರೆ, ಜೊತೆಗೆ ರಾಹುಲ್ ಅವರು ಇದ್ದಾಗ ತಾವೇ ಮುಂಚೂಣಿಗೆ ಬರದಂತೆ ನಿಗ್ರಹಿಸಿಕೊಳ್ಳುತ್ತಿದ್ದಾರೆ.

ಪ್ರಜ್ಞಾಪೂರ್ವಕ ನಿರ್ಧಾರವೆ? : ಪ್ರಥಮ ಬಾರಿಗೆ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಕೊಂಡಿರುವ ಪ್ರಿಯಾಂಕಾ ವಾದ್ರಾ ಅವರು ಪ್ರಜ್ಞಾಪೂರ್ವಕವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆಯೆ? ಎಂಬ ಪ್ರಶ್ನೆ ಮೂಡದೆ ಇರದು. ಅವರ ಸಹಸ್ರಾರು ಅಭಿಮಾನಿಗಳಿಗೆ ನಿರಾಶೆಯಾದರೂ ಸ್ಪರ್ಧಿಸದಿರುವ ಈ ತೀರ್ಮಾನದ ಹಿಂದೆ ಸ್ಪಷ್ಟ ನಿಲುವಂತೂ ಇದ್ದೆಯೇ ಇದೆ.
ಅವರ ಸಹೋದರ ರಾಹುಲ್ ಗಾಂಧಿ ಅವರು ಅಮೇಥಿಯಿಂದ ಸ್ಪರ್ಧಿಸುತ್ತಿದ್ದು, ರಾಜಕೀಯವಾಗಿ ಉಚ್ಛ್ರಾಯ ಸ್ಥಿತಿಗೆ ಇದೀಗ ತಲುಪುತ್ತಿದ್ದಾರೆ. ಜನ ಅವರಲ್ಲಿನ ನಾಯಕತ್ವವನ್ನು ತಡವಾಗಿಯಾದರೂ ಗುರುತಿಸಲು ಆರಂಭಿಸಿದ್ದಾರೆ. ಇತ್ತೀಚೆಗೆ ರಾಹುಲ್ ಅವರು ಕೆಲ ಚುನಾವಣೆಗಳನ್ನೂ ಗೆದ್ದಿದ್ದಾರೆ. ಇಂಥ ಸಂದರ್ಭದಲ್ಲಿ ಚುನಾವಣೆಯಲ್ಲೂ ಸ್ಪರ್ಧಿಸಿ ಗೆದ್ದರೆ, ಸಹೋದರನಿಗೇ ಸ್ಪರ್ಧಿಯಂತಾಗುವ ಅಪಾಯ ಇದ್ದುದರಿಂದ ಸ್ಪರ್ಧಿಸದಿರುವ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.












Click it and Unblock the Notifications