ರಾಮನ ಕುರಿತು ಪ್ರಿಯಾಂಕಾ ಹೇಳಿಕೆ 'ಐತಿಹಾಸಿಕ ಯೂಟರ್ನ್' ಎಂದ ಬಿಜೆಪಿ
ಲಕ್ನೌ, ಆಗಸ್ಟ್ 5: ರಾಮ ಮಂದಿರ ಭೂಮಿ ಪೂಜೆ ಕುರಿತು ಪ್ರಿಯಾಂಕಾ ಗಾಂಧಿ ನೀಡಿದ್ದ ಹೇಳಿಕೆಯನ್ನು ಬಿಜೆಪಿ ಮುಖಂಡ ಗಜೇಂದ್ರ ಸಿಂಗ್ ಶೇಖಾವತ್ ಖಂಡಿಸಿದ್ದಾರೆ.
Recommended Video
ಭಗವಂತ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದ್ದ ಪಕ್ಷವು ಈಗ 'ಯೂಟರ್ನ್' ಮಾಡಿದೆ ಎಂದಿದ್ದಾರೆ. ಪ್ರಿಯಾಂಕಾ ಹೇಳಿಕೆ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಶೇಖಾವತ್ 'ಇದು ಕಾಂಗ್ರೆಸ್ ಪಕ್ಷದ ಐತಿಹಾಸಿಕ ಯೂಟರ್ನ್' ಎಂದಿದ್ದಾರೆ.
'ರಾಮ ಎಲ್ಲರಲ್ಲೂ ಇದ್ದಾನೆ': ಭೂಮಿ ಪೂಜೆ ಬಗ್ಗೆ ಪ್ರಿಯಾಂಕಾ ಗಾಂಧಿ ಮೊದಲ ಪ್ರತಿಕ್ರಿಯೆ
''ಕಾಂಗ್ರೆಸ್ ಹೇಳಿಕೆ ಐತಿಹಾಸಿಕ ಯೂಟರ್ನ್ ಆಗಿದೆ. ಈ ಹಿಂದೆ ರಾಮನ ಅಸ್ತಿತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿತ್ತು. ರಾಮನ ಅಸ್ತಿತ್ವ ನಿರಾಕರಿಸಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ಇಂದು ರಾಮನ ಬಗ್ಗೆ ಹೊಗಳಿದ್ದಾರೆ ಅಂದ್ರೆ ಅದು ಮ್ಯಾಜಿಕ್'' ಎಂದು ಟೀಕಿಸಿದ್ದಾರೆ.
ಮಂಗಳವಾರ ಟ್ವಿಟ್ಟರ್ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದ ಪ್ರಿಯಾಂಕಾ ಗಾಂಧಿ 'ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮ ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಭೆಯ ಒಂದು ಸಂದರ್ಭ ಆಗಿದೆ' ಎಂದು ಹೇಳಿದ್ದರು.
ಶ್ರೀರಾಮನ ಬಗ್ಗೆ ಇನ್ನೂ ವಿವರವಾಗಿ ಮಾತನಾಡಿದ್ದ ಪ್ರಿಯಾಂಕಾ ''ರಾಮ ಎಲ್ಲರಲ್ಲೂ ಇದ್ದಾನೆ. ರಾಮ ಎಲ್ಲರಿಗೂ ಸೇರಿದವನು. ರಾಮ ಮತ್ತು ಸೀತೆಯ ಆದರ್ಶ, ತತ್ವಗಳಿಂದ ಭಾರತೀಯರು ಪ್ರೇರಿತರಾಗಿದ್ದಾರೆ' ಎಂದಿದ್ದರು.
ಅಂದ್ಹಾಗೆ, 2007ರಲ್ಲಿ ಅಂದಿನ ಯುಪಿಎ ಸರ್ಕಾರವು ರಾಮನ ಅಸ್ತಿತ್ವಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ ಎಂದು ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿತ್ತು.