ಕೆಂಪು ಟೋಪಿ, ರೆಡ್ ಅಲರ್ಟ್: ಯುುಪಿ ಕಣದಲ್ಲಿ ಅಖಿಲೇಶ್ ವಿರುದ್ಧ ಮೋದಿ ಸಮರ
ಲಕ್ನೋ, ಡಿಸೆಂಬರ್ 7: ಉತ್ತರ ಪ್ರದೇಶದಲ್ಲಿ ಕೆಂಪು ಟೋಪಿಯು ಭವಿಷ್ಯದಲ್ಲಿ ರಾಜ್ಯದ ಪಾಲಿಗೆ ಅಪಾಯದ ಸಂಕೇತ(ರೆಡ್ ಅಲರ್ಟ್)ವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಖಿಲೇಶ್ ಯಾದವ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಗೋರಖ್ಪುರದಲ್ಲಿ ಪುನರುಜ್ಜೀವನಗೊಂಡ ರಸಗೊಬ್ಬರ ಕಾರ್ಖಾನೆ ಮತ್ತು ಸಂಪೂರ್ಣ ಕ್ರಿಯಾತ್ಮಕ AIIMS ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ರಾಜ್ಯದ ಹಿಂದಿನ ಸರ್ಕಾರಗಳಿಗೆ "ಎರಡು ಮುಖಗಳಿದ್ದವು" ಎಂದು ಆರೋಪಿಸುವುದರ ಮೂಲಕ ಪ್ರಧಾನಿ ಮೋದಿ ಮಾತು ಆರಂಭಿಸಿದರು. ಇದೇ ವೇಳೆ ಸಮಾಜವಾದಿ ಪಕ್ಷವು ಭಯೋತ್ಪಾದಕರ ಬಗ್ಗೆ ಸಹಾನುಭೂತಿಯನ್ನು ಹೊಂದಿದೆ ಎಂದು ದೂಷಿಸಿದರು.
ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರಚಾರದ ವೇಳೆ ಭಾರಿ ಸಂಖ್ಯೆಯ ಜನರು ಸೇರುತ್ತಿರುವುದನ್ನು ಕಂಡಿರುವ ಬಿಜೆಪಿ ಸಮಾಜವಾದಿ ಪಕ್ಷದ ಮುಖ್ಯಸ್ಥನನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ಮುಂದುವರಿಸಿದೆ. "ಲಾಲ್ ಟೋಪಿ ವಾಲೋನ್" (ಕೆಂಪು ಟೋಪಿಗಳು) ಕೆಂಪು ದೀಪಗಳ ಮೇಲೆ ಮಾತ್ರ ಆಸಕ್ತಿ ಹೊಂದಿದ್ದಾರೆ ಎಂದು ಇಡೀ ಉತ್ತರ ಪ್ರದೇಶಕ್ಕೆ ತಿಳಿದಿದೆ. ಇದು ಸರ್ಕಾರಿ ವಾಹನಗಳ ಮೇಲಿನ ಕೆಂಪು ಬೀಕನ್ಗಳು, ಅಧಿಕಾರ ಮತ್ತು ವಿಐಪಿ ಸ್ಥಾನಮಾನದ ಸಂಕೇತವಾಗಿದೆ," ಎಂದು ಮೋದಿ ಹೇಳಿದರು.

ಹಗರಣಕ್ಕಾಗಿ ಅಧಿಕಾರದ ಮೇಲೆ ಇವರಿಗೆ ಆಸೆ
ಈ ಜನರಿಗೆ ಹಗರಣಗಳನ್ನು ಮಾಡುವುದಕ್ಕೆ, ಅತಿಕ್ರಮಣ ಮತ್ತು ಮಾಫಿಯಾಗಳಿಗೆ ಮುಕ್ತ ಚಾಲನೆ ನೀಡುವುದಕ್ಕಾಗಿ ಮಾತ್ರ ಅಧಿಕಾರವನ್ನು ಬಯಸುತ್ತಿದ್ದಾರೆ. ಕೆಂಪು ಟೋಪಿ ಮಂದಿಗೆ ಉಗ್ರರನ್ನು ಜೈಲಿನಿಂದ ಬಿಡುಗಡೆಗೊಳಿಸುವುದಕ್ಕಾಗಿ ಅಧಿಕಾರ ಬೇಕಾಗಿದೆ. ಕೆಂಪು ಟೋಪಿಯು ಉತ್ತರ ಪ್ರದೇಶಕ್ಕೆ ರೆಡ್ ಅಲರ್ಟ್ ಅನ್ನು ಸೂಚಿಸುತ್ತದೆ, ಇದು ಅಪಾಯದ ಸಂಕೇತವಾಗಿದೆ," ಎಂದರು.

ಗೋರಖ್ಪುರ ರಸಗೊಬ್ಬರ ಸ್ಥಾವರಕ್ಕೆ ಚಾಲನೆ ನೀಡಿದ ಮೋದಿ
"ಈ ಗೋರಖ್ಪುರ ಪ್ರದೇಶಕ್ಕೆ ರಸಗೊಬ್ಬರ ಸ್ಥಾವರ ಎಷ್ಟು ಮಹತ್ವದ್ದಾಗಿದೆ ಎಂಬುದು ಅವರಿಗೂ ತಿಳಿದಿತ್ತು. ಆದರೆ ಅವುಗಳನ್ನು ಪುನರಾರಂಭಿಸಲು ಅವರು ಆಸಕ್ತಿ ತೋರಿಸಲಿಲ್ಲ. 2017ರ ಮೊದಲು ಸರ್ಕಾರವನ್ನು ನಡೆಸುತ್ತಿದ್ದವರು AIIMS ಗೆ ಭೂಮಿ ಮಂಜೂರು ಮಾಡುವಲ್ಲಿ ಹಿಂದೇಟು ಹಾಕಿದರು. ಬಿಜೆಪಿ ನೇತೃತ್ವದ ಸರ್ಕಾರವು ತಮ್ಮ ಅಧಿಕಾರಾವಧಿಯಲ್ಲಿ ಪ್ರಾರಂಭವಾದ ಎಕ್ಸ್ಪ್ರೆಸ್ವೇಗಳು ಮತ್ತು ಹೆದ್ದಾರಿಗಳ ಕ್ರೆಡಿಟ್ ಅನ್ನು ತೆಗೆದುಕೊಳ್ಳುತ್ತದೆ ಎಂಬ ಅಖಿಲೇಶ್ ಯಾದವ್ ಆರೋಪಗಳನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. ಇದು "ಸಮಯದ ಬಗ್ಗೆ ಸಮಸ್ಯೆಗಳನ್ನು ಎತ್ತಲು ಇಷ್ಟಪಡುವ ಜನರಿಗೆ ಉತ್ತಮ ಉತ್ತರವಾಗಿದೆ" ಎಂದು ಹೇಳಿದರು. ಅಂತಹ ಯೋಜನೆಗಳು ಪೂರ್ಣಗೊಂಡಾಗ, ಅದು ವರ್ಷಗಳ ಶ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

"ಕೊವಿಡ್-19 ಸಮಯದಲ್ಲೂ ಸರ್ಕಾರದಿಂದ ಅಭಿವೃದ್ಧಿ ಕಾರ್ಯ"
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲೂ ಬಿಜೆಪಿ ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಈ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಂಥ ಜನರಿಗೆ ಅರ್ಥವಾಗುವುದಿಲ್ಲ, ಲೋಹಿಯಾ ಅವರ ಆದರ್ಶಗಳನ್ನು ಈ ಜನರು ಬಹಳ ದಿನಗಳ ಹಿಂದೆಯೇ ಮರೆತುಹೋಗಿದ್ದಾರೆ ಎಂದು ಮೋದಿ ತಿರುಗೇಟು ನೀಡಿದರು. ಇದೇ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬೆಂಬಲಿಗರನ್ನು ಪ್ರಧಾನಿ ಮೋದಿ ಕೆಂಪು ಟೋಪಿವಾಲಾಗಳು ಎಂದು ಕರೆದರು.

ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮೋದಿ ಉಲ್ಲೇಖ
ರಾಜ್ಯದಲ್ಲಿನ "ಡಬಲ್ ಇಂಜಿನ್" ಬಿಜೆಪಿ ಸರ್ಕಾರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, "ಇಂದು ಎಲ್ಲಾ ಮಾಫಿಯಾದವರು ಜೈಲಿನಲ್ಲಿದ್ದಾರೆ. ಉತ್ತರ ಪ್ರದೇಶದತ್ತ ಹೂಡಿಕೆದಾರರು ಮನಃಪೂರ್ವಕವಾಗಿ ಬರುತ್ತಿದ್ದಾರೆ. ರಸಗೊಬ್ಬರ ಸ್ಥಾವರ ಮತ್ತು AIIMS ಪ್ರಾರಂಭವು 'ಡಬಲ್ ಇಂಜಿನ್ ಕಿ ಸರ್ಕಾರ್' ಇದ್ದಾಗ ಕೆಲಸಗಳ ವೇಗವೂ ಎರಡು ಪಟ್ಟಾಗುತ್ತದೆ ಎಂಬುದನ್ನು ತೋರಿಸುತ್ತದೆ. ಬಡವರ ಬಗ್ಗೆ ಯೋಚಿಸುವ ಸರ್ಕಾರಗಳಿದ್ದಾಗ, ಅದರ ಕೆಲಸಗಳೂ ಆ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ವಿರುದ್ಧ ಅಖಿಲೇಶ್ ಯಾದವ್ ಕೆಂಡ
ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಉದ್ಘಾಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧವೂ ಅಖಿಲೇಶ್ ಯಾದವ್ ಕಿಡಿ ಕಾರಿದರು. ಈ ಹಿಂದೆ ತಮ್ಮ ಸರ್ಕಾರ ಪರಿಚಯಿಸಿದ ಯೋಜನೆಗಳನ್ನು ಬಿಜೆಪಿ ತಮ್ಮದು ಎನ್ನುವಂತೆ ಬಿಂಬಿಸಿಕೊಂಡು ಲಾಭ ಪಡೆದುಕೊಳ್ಳುತ್ತಿದೆ. "ಸಮಾಜವಾದಿ ಪಕ್ಷದ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು 22 ತಿಂಗಳು ತೆಗೆದುಕೊಳ್ಳುತ್ತದೆ, ಆದರೆ ಅದೇ ಕಾರ್ಯವನ್ನು ಬಿಜೆಪಿ ಸರ್ಕಾರ ಪೂರ್ಣಗೊಳಿಸುವುದಕ್ಕೆ 4.5 ವರ್ಷಗಳು ಬೇಕಾಯಿತು. ಏಕೆಂದರೆ ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಜನಪರ ಕೆಲಸಗಳು ಆಗುವುದೇ ಬೇಕಾಗಿಲ್ಲ, ಎಂದು ಅಖಿಲೇಶ್ ಯಾದವ್ ಕಿಡಿ ಕಾರಿದ್ದರು.

ಉತ್ತರ ಪ್ರದೇಶದಲ್ಲಿ ಈ ಹಿಂದೆ ಮತದಾರರ ತೀರ್ಪು
ಕಳೆದ 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಕಾಂಗ್ರೆಸ್ 114 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಸಮಾಜವಾದಿ ಪಕ್ಷವು 311 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿತ್ತು. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತ್ತು. ಇನ್ನೊಂದು ಕಡೆ 277 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ ಆರ್ಎಲ್ಡಿ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಗೆಲವು ಸಾಧಿಸಿತ್ತು. ರಾಜ್ಯದ ಒಟ್ಟು 403 ಸ್ಥಾನಗಳ ಪೈಕಿ ಬಿಜೆಪಿ 312 ರಲ್ಲಿ ಗೆಲುವು ದಾಖಲಿಸಿತ್ತು. ಈ ಪಕ್ಷ ಶೇ. 39.67ರಷ್ಟು ಮತವನ್ನು ಪಡೆದುಕೊಂಡಿತ್ತು. ಅಂದು ಸಮಾಜವಾದಿ ಪಕ್ಷವು 47 ಸ್ಥಾನಗಳನ್ನು, ಬಹುಜನ ಸಮಾಜ ಪಕ್ಷ (BSP) 19 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಕೇವಲ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.












Click it and Unblock the Notifications