ಕರ್ನಾಟಕ ಕಾಂಗ್ರೆಸ್ ಅನ್ನೂ ಹಿಗ್ಗಾಮುಗ್ಗಾ ಜಗ್ಗಾಡಿದ ಪ್ರಧಾನಿ ನರೇಂದ್ರ ಮೋದಿ
Recommended Video
ಕಾಂಗ್ರೆಸ್ ಪಕ್ಷವು ನ್ಯಾಯಾಂಗವನ್ನು ಕೂಡ ತನ್ನ ಭ್ರಷ್ಟ ಹಾಗೂ ನಿರಂಕುಶ ದಾರಿಯಿಂದ ಬಿಡಲಿಲ್ಲ ಎಂದು ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಗಂಗಾನದಿ ತಟದಲ್ಲಿನ ಪ್ರಯಾಗ್ ರಾಜ್ ನಲ್ಲಿ (ಈ ಹಿಂದಿನ ಹೆಸರು ಅಲಹಾಬಾದ್) ಸಾರ್ವಜನಿಕ ಸಮಾರಂಭದಲ್ಲಿ ಅವರು ಹೇಳಿದ್ದಾರೆ.
ಕರ್ನಾಟಕ ವಿಚಾರವನ್ನು ಪ್ರಸ್ತಾವ ಮಾಡಿದ ಅವರು, ಅಧಿಕಾರಕ್ಕೆ ಬಂದರೆ ಹತ್ತು ದಿನದೊಳಗೆ ಕೃಷಿ ಸಾಲ ಮನ್ನಾ ಮಾಡುವುದಾಗಿ ಹೇಳಿತ್ತು. ಆರು ತಿಂಗಳಾದರೂ ಏನೂ ಮಾಡಿಲ್ಲ ಎಂದು ಆರೋಪ ಮಾಡಿದ್ದಾರೆ.
ಪ್ರಯಾಗ್ ರಾಜ್ ಅನ್ನು 'ನ್ಯಾಯದ ದೇವಾಲಯ' ಎಂದು ಕರೆಯಲಾಗುತ್ತದೆ. ಆದರೆ ಈಚೆಗೆ ನ್ಯಾಯಾಂಗದ ಮೇಲೆ ರಾಜಕಾರಣದ ಒತ್ತಡವು ಬಿದ್ದು, ಬಲಿಪಶುವಾಗುತ್ತಿದೆ. ಯಾವಾಗೆಲ್ಲ ಆ ಪಕ್ಷದ ಮೇಲೆ ದಾವೆ ಹೂಡಲಾಗಿದೆಯೋ ಆಗೆಲ್ಲ ನ್ಯಾಯಾಂಗವೂ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ತೊಂದರೆ ಮಾಡಿದೆ ಎಂದು ಕಾಂಗ್ರೆಸ್ ಹೆಸರು ಹೇಳದೆ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಪಿಎಂ ಆದ ಮೇಲೆ ಬಿಜೆಪಿ ನಿಜಕ್ಕೂ ಅಜೇಯವಾಗಿಯೇ ಉಳಿದಿದೆಯಾ?!
ಈ ರಾಜ್ಯದ ಜನರು ಆ ಪಕ್ಷದ ಉನ್ನತ ನಾಯಕರು ತುರ್ತು ಪರಿಸ್ಥಿತಿ ಹೇರಿದ್ದ ಅವಧಿಯನ್ನು ನೆನಪಿಸಿಕೊಳ್ಳಬೇಕು. ರಾಜಕೀಯ ಪ್ರಾಮುಖ್ಯತೆ ಹಾಗೂ ಅಧಿಕಾರಕ್ಕಾಗಿ ಪ್ರಕರಣದ ವಿಚಾರಣೆ ನಡೆಸುವ ನ್ಯಾಯಾಂಗದ ಹಕ್ಕನ್ನೇ ಕಸಿದುಕೊಳ್ಳುವ ಪ್ರಯತ್ನ ಮಾಡಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರಿಗಿಂತ ತಾನು ಮೇಲು ಎಂಬ ಕಾಂಗ್ರೆಸ್ ಧೋರಣೆ
ಮುಖ್ಯ ನಾಯಮೂರ್ತಿಗಳ ವಿರುದ್ಧವೇ ದೋಷಾರೋಪ ಹೊರಿಸಿ, ನಿರ್ಣಯ ಕೈಗೊಳ್ಳಲು ಮುಂದಾಗಿದ್ದರು. ಪ್ರಜಾಪ್ರಭುತ್ವ, ನ್ಯಾಯಾಂಗ ಅಷ್ಟೇ ಏಕೆ ಜನರಿಗಿಂತ ತಾನೇ ಮೇಲು ಎಂದು ಕಾಂಗ್ರೆಸ್ ಸಮರ್ಥಿಸಿಕೊಳ್ಳುತ್ತದೆ. ಇನ್ನು ತನ್ನ ಕೆಲಸ ಮಾಡಿಕೊಳ್ಳಲು ತೋಳ್ಬಲ ಅಲ್ಲದೆ ಇತರ ಶಕ್ತಿಯನ್ನು ಬಳಸಿಕೊಳ್ಳುತ್ತದೆ ಎಂದಿದ್ದಾರೆ.
ಎಲ್ಲ ಸಂಸ್ಥೆಗಳನ್ನೂ ನಾಶ ಮಾಡಿದೆ
ತನಗೆ ಬೇಕಾದ ರೀತಿಯಲ್ಲಿ ಕಾರ್ಯ ನಿರ್ವಹಿಸದ ಎಲ್ಲ ಸಂಸ್ಥೆಗಳನ್ನೂ ಈ ಪಕ್ಷ (ಕಾಂಗ್ರೆಸ್) ನಾಶ ಮಾಡಿದೆ. ಅದಕ್ಕೆ ದೇಶದ ಪ್ರಗತಿ, ಸಂಪ್ರದಾಯ ಹಾಗೂ ಸಂಸ್ಕೃತಿ ಯಾವುದರಲ್ಲೂ ಆಸಕ್ತಿ ಇಲ್ಲ. ತನ್ನ ಪಕ್ಷವೊಂದೇ ಪ್ರಾಶಸ್ತ್ಯ ಎಂದು ಪರಿಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಆರೋಪ ಮಾಡಿದ್ದಾರೆ.
ಅಪನಂಬಿಕೆ ಸೃಷ್ಟಿಸಲು ಯತ್ನ
ಇದಕ್ಕೂ ಮುನ್ನ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುವ ರಾಯ್ ಬರೇಲಿ ಕ್ಷೇತ್ರದಲ್ಲಿ ಮಾತನಾಡಿ, ಕಾಂಗ್ರೆಸ್ ಕ್ಷೋಭೆಗೆ ಒಳಗಾಗಿ 'ಸುಳ್ಳು' ಹೇಳುತ್ತಿದೆ. ಎನ್ ಡಿಎ ಸರಕಾರದ ರಕ್ಷಣಾ ವ್ಯವಹಾರದಲ್ಲಿ ಕ್ವಟ್ರೋಚಿ ಅಂಕಲ್ ಅಥವಾ ಕ್ರಿಶ್ಚಿಯನ್ ಮೈಖೆಲ್ ಇಲ ಎಂದು ವ್ಯಂಗ್ಯವಾಡಿದರು. ವಿರೋಧ ಪಕ್ಷಗಳು ನ್ಯಾಯಾಂಗದ ಮೇಲೆ 'ಅಪನಂಬಿಕೆ' ಸೃಷ್ಟಿಸಲು ಯತ್ನಿಸುತ್ತಿವೆ ಎಂದಿದ್ದಾರೆ.
ಕರ್ನಾಟಕದಲ್ಲಿ ಸುಳ್ಳು ಹೇಳಿದೆ ಕಾಂಗ್ರೆಸ್
ಕರ್ನಾಟಕದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಸೇರಿ ಸರಕಾರ ರಚನೆ ಮಾಡಿದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಹತ್ತು ದಿನದಲ್ಲಿ ಕೃಷಿ ಸಾಲ ಮನ್ನಾ ಮಾಡುವುದಾಗಿ ಹೇಳಿತ್ತು. ಆದರೆ ಆರು ತಿಂಗಳಾದರೂ ಸಾಲ ಮನ್ನಾ ಮಾಡಿಲ್ಲ. ಕೃಷಿ ಸಾಲ ಮನ್ನಾ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಹೇಳುತ್ತಲೇ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಫಲಿತಾಂಶ ನಂತರ ಮೊದಲ ಭಾಷಣ
ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಇದ್ದ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಗೆ ಸೋತ ನಂತರ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಸಾರ್ವಜನಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಭಾರೀ ವಾಗ್ದಾಳಿ ನಡೆಸಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.