ಅತ್ಯಾಚಾರ ಸಂತ್ರಸ್ತೆ ಬಗ್ಗೆ ಮಹಿಳಾ ಆಯೋಗ ಸದಸ್ಯೆಯಿಂದ ವಿವಾದಾತ್ಮಕ ಹೇಳಿಕೆ
ಲಖನೌ,ಜನವರಿ 08: ಅತ್ಯಾಚಾರ ಸಂತ್ರಸ್ತೆ ಬಗ್ಗೆ ಮಹಿಳಾ ಆಯೋಗದ ಸದಸ್ಯೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಬದೌನ್ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹತ್ಯೆ ಮಾಡಲಾಗಿತ್ತು, ಅವರ ಮನೆಗೆ ಭೇಟಿ ನೀಡಿದ್ದಾರೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಚಂದ್ರಕುಮಾರಿ ದೇವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ 'ನಿರ್ಭಯಾ' ಮಾದರಿಯಲ್ಲಿ ಭೀಕರ ಸಾಮೂಹಿಕ ಅತ್ಯಾಚಾರ, ಕೊಲೆ
ಅತ್ಯಾಚಾರಕ್ಕೊಳಗಾದ ಮಹಿಳೆ ಸಂಜೆಯ ನಂತರ ಮನೆಯಿಂದ ಹೊರಗೆ ಹೋಗದೇ ಇದ್ದಿದ್ದರೆ ಅತ್ಯಾಚಾರ ನಡೆಯುತ್ತಿರಲಿಲ್ಲ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಗ್ಯಾಂಗ್ ರೇಪ್ ಸಂತ್ರಸ್ತೆಯ ಕುಟುಂಬ ಸದಸ್ಯರೊಂದಿಗೆ ಮಾತನಾಡುವುದಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಚಂದ್ರ ಕುಮಾರಿ ದೇವಿ ಅವರನ್ನು ಬದೌನ್ ಗೆ ಕಳಿಸಿತ್ತು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಿಳೆಯರು ಸಮಯದ ಬಗ್ಗೆ ಯಾವಗಾಲೂ ಗಮನ ಹೊಂದಬೇಕು, ಯಾರ ಒತ್ತಡ ಬಂದರೂ ತಡವಾದ ನಂತರ ಹೊರ ಹೋಗಬಾರದು, ಅತ್ಯಾಚಾರ ಸಂತ್ರಸ್ತೆ ಮನೆಯಿಂದ ಒಬ್ಬಂಟಿಯಾಗಿ ಸಂಜೆ ನಂತರ ಹೋಗದೇ ಇದ್ದಿದ್ದರೆ ಅಥವಾ ಕುಟುಂಬ ಸದಸ್ಯರ ಜೊತೆ ಹೋಗಿದ್ದಿದ್ದರೆ ಆಕೆಯನ್ನು ರಕ್ಷಿಸಬಹುದಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
50 ವರ್ಷದ ಅಂಗನವಾಡಿ ಕಾರ್ಯಕರ್ತೆ ಸಂಜೆ 6 ಕ್ಕೆ ದೇವಾಲಯಕ್ಕೆ ತೆರಳಿದ್ದರು. ಆಕೆ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಅಪಹರಿಸಿ ಗ್ಯಾಂಗ್ ರೇಪ್ ಮಾಡಿ ಆಕೆಯನ್ನು ಅರೆನಗ್ನಾವಸ್ಥೆಯಲ್ಲಿ ಎಸೆದು ಹೋಗಿದ್ದರು.
ರಾತ್ರಿ 11: 30 ರ ವೇಳೆಗೆ ತೀವ್ರ ರಕ್ತಸ್ರಾವ ಹಾಗೂ ಅರೆನಗ್ನಾವಸ್ಥೆಯಲ್ಲಿದ್ದ ಆಕೆ ಸಾವನ್ನಪ್ಪಿದ್ದಾರೆ. 5 ಮಕ್ಕಳ ತಾಯಿಯಾಗಿದ್ದ ಆಕೆ ಕುಟುಂಬದಲ್ಲಿ ದುಡಿಯುತ್ತಿದ್ದ ಏಕೈಕ ವ್ಯಕ್ತಿಯಾಗಿದ್ದರು.
ಆಯೋಗದ ಸದಸ್ಯೆ ಚಂದ್ರಕುಮಾರಿ ದೇವಿ ಅವರ ಹೇಳಿಕೆಯಿಂದ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥರಾದ ರೇಖಾ ಶರ್ಮಾ ಅವರು ಅಂತರ ಕಾಯ್ದುಕೊಂಡಿದ್ದು, ಎನ್ ಡಬ್ಲ್ಯುಸಿ ಸದಸ್ಯರು ಈ ರೀತಿ ಏಕೆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದಷ್ಟೇ ಟ್ವೀಟ್ ಮಾಡಿದ್ದಾರೆ.